ಏಕದಿನ ಕ್ರಿಕೆಟರ್‌ ಆಗಿ ರಾಹುಲ್ ದ್ರಾವಿಡ್‌; ವಿಸ್ಡನ್ ಪ್ರಶ್ನೆಗೆ ನೀವೇನಂತೀರಾ.?

Suvarna News   | Asianet News
Published : May 25, 2021, 02:21 PM IST
ಏಕದಿನ ಕ್ರಿಕೆಟರ್‌ ಆಗಿ ರಾಹುಲ್ ದ್ರಾವಿಡ್‌; ವಿಸ್ಡನ್ ಪ್ರಶ್ನೆಗೆ ನೀವೇನಂತೀರಾ.?

ಸಾರಾಂಶ

* ರಾಹುಲ್ ದ್ರಾವಿಡ್‌ ಏಕದಿನ ಕ್ರಿಕೆಟ್‌ ಬಗ್ಗೆ ಪ್ರಶ್ನೆ ಎತ್ತಿದ ವಿಸ್ಡನ್ ಕ್ರಿಕೆಟ್ * ಅಭಿಮಾನಿಗಳಲ್ಲಿ ರಾಹುಲ್ ಏಕದಿನ ಕ್ರಿಕೆಟ್‌ ಬಗ್ಗೆ ಅಭಿಪ್ರಾಯ ಸಂಗ್ರಹ * ರಾಹುಲ್ ದ್ರಾವಿಡ್ ಸಾಧನೆಯನ್ನು ಸಮರ್ಥಿಸಿಕೊಂಡ ಕ್ರಿಕೆಟ್ ಅಭಿಮಾನಿಗಳು. 

ಬೆಂಗಳೂರು(ಮೇ.25): ಕೋವಿಡ್ ಎರಡನೇ ಅಲೆಯಿಂದಾಗಿ ಭಾರತದಲ್ಲಿ ಕ್ರಿಕೆಟ್‌ ಚಟುವಟಿಕೆಗಳಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಇಂಥಹ ಸಂದರ್ಭದಲ್ಲಿ ಕ್ರಿಕೆಟ್ ಬೈಬಲ್ ಎಂದೇ ಗುರುತಿಸಿಕೊಂಡಿರುವ ವಿಸ್ಡನ್‌ ಸಂಸ್ಥೆಯು ಬೇರೆ ಬೇರೆ ವಿಷಯಗಳ ಕುರಿತಂತೆ ವಿಮರ್ಶೆ ಮಾಡುತ್ತಾ ಬಂದಿದೆ.

ಇದೇ ಸಂದರ್ಭದಲ್ಲಿ ತನ್ನ ವಿಮರ್ಶೆಯ ಜತೆಗೆ ಓದುಗರ ಅಭಿಪ್ರಾಯಗಳನ್ನು ವಿಸ್ಡನ್‌ ಎದುರು ನೋಡುತ್ತಿದೆ. ಹೀಗಾಗಿ ಸಾಕಷ್ಟು ಓದುಗರು ಆಸಕ್ತಿಯಿಂದ ವಿಸ್ಡನ್‌ ವಿಮರ್ಶೆಗಳಿಗೆ ಪ್ರತಿಕ್ರಿಯೆ ನೀಡಲು ಕಾಯುತ್ತಿರುತ್ತಾರೆ. ಇವುಗಳ ಪೈಕಿ ವಿಸ್ಡನ್ ಇಂಡಿಯಾ ಈ ಚಟುವಕೆಯನ್ನು ಅತ್ಯಂತ ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿನಿತ್ಯ ಒಂದಿಲ್ಲೊಂದು ಮಹತ್ವದ ವಿಚಾರವನ್ನು ತಮ್ಮ ಓದುಗರ ಮುಂದಿಡುವಲ್ಲಿ ವಿಸ್ಡನ್‌ ಇಂಡಿಯಾ ಸಾಕಷ್ಟು ಚುರುಕಾಗಿದೆ.

ಈಗ ಹೊಸ ವಿಚಾರ ಏನೆಂದರೆ 'ದ ವಾಲ್‌' ಖ್ಯಾತಿಯ ರಾಹುಲ್ ದ್ರಾವಿಡ್‌ ಏಕದಿನ ಕ್ರಿಕೆಟ್‌ ಬಗ್ಗೆ ವಿಸ್ಡನ್ ಇಂಡಿಯಾ ಪ್ರಶ್ನೆಯನ್ನು ಎತ್ತಿದೆ. ಏಕದಿನ ಕ್ರಿಕೆಟ್ ಆಟಗಾರನಾಗಿ ರಾಹುಲ್ ದ್ರಾವಿಡ್‌ ಕುರಿತಂತೆ ನಿಮ್ಮ ಅಭಿಪ್ರಾಯವೇನು ಎಂದು ರಾಹುಲ್ ದ್ರಾವಿಡ್ ಏಕದಿನ ಕ್ರಿಕೆಟ್‌ ವೃತ್ತಿಜೀವನದ ಸಂಪೂರ್ಣ ಅಂಕಿ-ಅಂಶಗಳೊಂದಿಗೆ ಟ್ವಿಟರ್‌ನಲ್ಲಿ ವಿಸ್ಡನ್‌ ಪ್ರಶ್ನೆಯೊಂದನ್ನು ಎತ್ತಿದೆ.

ರಾಹುಲ್ ದ್ರಾವಿಡ್‌ 344 ಏಕದಿನ ಪಂದ್ಯಗಳನ್ನಾಡಿ 39.26ರ ಬ್ಯಾಟಿಂಗ್ ಸರಾಸರಿಯಲ್ಲಿ 71.23ರ ಸ್ಟ್ರೈಕ್‌ರೇಟ್‌ನಂತೆ 10,889 ರನ್ ಬಾರಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 83 ಅರ್ಧಶತಕಗಳು ಸೇರಿವೆ. ಇನ್ನು ವಿಕೆಟ್‌ ಕೀಪರ್ ಆಗಿ 84 ಬಲಿ ಪಡೆದಿದ್ದಾರೆ. ಇದಷ್ಟೇ ಅಲ್ಲದೇ 1999ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದ ರಾಹುಲ್‌ ದ್ರಾವಿಡ್‌, 2003ರ ಏಕದಿನ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡದ ಸದಸ್ಯರೂ ಕೂಡಾ ಹೌದು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್‌ ನೇತೃತ್ವದ ಟೀಂ ಇಂಡಿಯಾ ಗುಂಪು ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿತ್ತು.

ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಆಯ್ಕೆ

ವಿಸ್ಡನ್ ಕೇಳಿದ ಈ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿದಂತೆ ಹಲವು ಅಭಿಮಾನಿಗಳು ರಾಹುಲ್ ದ್ರಾವಿಡ್‌ ಏಕದಿನ ಕ್ರಿಕೆಟ್‌ನ ದಿಗ್ಗಜ ಆಟಗಾರ ಎಂದು ಸಮರ್ಥಿಸಿಕೊಂಡಿದ್ದಾರೆ. 

ಕರ್ನಾಟಕದ ಪ್ರತಿಭೆ ರಾಹುಲ್ ದ್ರಾವಿಡ್‌ ಯಾವುದೇ ಕ್ರಮಾಂಕದಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸುವ ಕೌಶಲವನ್ನು ಕರಗತ ಮಾಡಿಕೊಂಡಿದ್ದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ದ್ರಾವಿಡ್‌ ಒಂದು ದಶಕಕ್ಕೂ ಹೆಚ್ಚುಕಾಲ ಟೀಂ ಇಂಡಿಯಾದ ಆಧಾರಸ್ತಂಭವಾಗಿದ್ದರು. ಬ್ಯಾಟಿಂಗ್ ಮಾತ್ರವಲ್ಲದೇ, ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್‌ಮನ್ ಇಲ್ಲವೇ ಬೌಲರ್ ಆಡಿಸಲು ಅನುಕೂಲವಾಗಲೆಂದು ತಂಡ ಬಯಸಿದಾಗ ವಿಕೆಟ್‌ ಕೀಪರ್ ಆಗಿಯೂ ದ್ರಾವಿಡ್ ಸೈ ಎನಿಸಿಕೊಂಡಿದ್ದರು. ಜಂಟಲ್‌ಮನ್ ಕ್ರೀಡೆಗೆ ಕಳಶಪ್ರಾಯದಂತಿದ್ದ ರಾಹುಲ್ ದ್ರಾವಿಡ್‌, ಟೀಂ ಇಂಡಿಯಾ ಕ್ರಿಕೆಟ್ ಜಗತ್ತಿಗೆ ಕೊಟ್ಟ ಅಮೂಲ್ಯ ರತ್ನವೆಂದರೆ ಅತಿಶಯೋಕ್ತಿಯಾಗಲಾರದು. ವಿಸ್ಡನ್ ಪ್ರಶ್ನೆಗೆ ನೀವೇನಂತೀರಾ ಕಮೆಂಟ್ ಮಾಡಿ..

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇವತ್ತು 10/10 ಎಂದ ಮಾಸ್ಟರ್ ಬ್ಲಾಸ್ಟರ್! ಸಚಿನ್‌ ತೆಂಡೂಲ್ಕರ್‌ಗೆ ಅಪರೂಪದ ಗಿಫ್ಟ್ ಕೊಟ್ಟ ಮೆಸ್ಸಿ!
ನಾನು ಫಾರ್ಮ್ ಕಳೆದುಕೊಂಡಿಲ್ಲ, ಆದ್ರೆ..! 3ನೇ ಟಿ20 ಪಂದ್ಯದ ಗೆಲುವಿನ ಬೆನ್ನಲ್ಲೇ ಸೂರ್ಯ ಅಚ್ಚರಿ ಹೇಳಿಕೆ!