
ಐಪಿಎಲ್ 2025 ಕ್ರಿಕೆಟ್ ಸರಣಿ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ನಡುವೆ ಬಾಲಿವುಡ್ ನಟ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖ್ ಖಾನ್ ಮುಂಬೈ ವಾಂಖೆಡೆ ಮೈದಾನಕ್ಕೆ ಪ್ರವೇಶಿಸಲು 5 ವರ್ಷ ನಿಷೇಧ ಹೇರಲಾಗಿತ್ತು ಎಂಬುದು ನಿಮಗೆ ಗೊತ್ತಾ?
ಶಾರುಖ್ಗೆ ಮುಂಬೈ ವಾಂಖೆಡೆ ಮೈದಾನದಲ್ಲಿ ನಿಷೇಧ:
2012ರ ಐಪಿಎಲ್ ಪಂದ್ಯದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದದ ನಂತರ ಶಾರುಖ್ ಖಾನ್ಗೆ ಮುಂಬೈ ವಾಂಖೇಡೆ ಮೈದಾನ ಪ್ರವೇಶಿಸದಂತೆ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. 2012 ರಲ್ಲಿ, ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ತಂಡವು ಹೋರಾಡಿ ಗೆದ್ದಿತು. ಈ ಗೆಲುವನ್ನು ಶಾರುಖ್ ಖಾನ್ ಸಂಭ್ರಮಿಸಿದಾಗ, ಅವರಿಗೂ ಮತ್ತು ಮೈದಾನದಲ್ಲಿದ್ದ ಭದ್ರತಾ ಸಿಬ್ಬಂದಿಗೂ ತೀವ್ರ ವಾಗ್ವಾದ ಉಂಟಾಯಿತು.
ಇದನ್ನೂ ಓದಿ: ಐಪಿಎಲ್ 2025: ಪ್ರತಿ ತಂಡದಲ್ಲಿರೋ ದುಬಾರಿ ಆಟಗಾರರು ಇವರೇ ನೋಡಿ!
ಶಾರುಖ್ ಖಾನ್ ಮತ್ತು ಭದ್ರತಾ ಅಧಿಕಾರಿಗಳ ನಡುವೆ ಘರ್ಷಣೆ ಮುಂಬೈ ಕ್ರಿಕೆಟ್ ಸಂಸ್ಥೆ (MCA), ಶಾರುಖ್ ಖಾನ್ ಕುಡಿದ ಸ್ಥಿತಿಯಲ್ಲಿ ಮೈದಾನದೊಳಗೆ ಅಕ್ರಮವಾಗಿ ಪ್ರವೇಶಿಸಿ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿತ್ತು. ಶಾರುಖ್ನ ದುರ್ವರ್ತನೆ ಮತ್ತು ಅನುಚಿತ ಪದಗಳನ್ನು ಉಲ್ಲೇಖಿಸಿ, ಮರೈನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ MCA ಅಧಿಕಾರಿಗಳು ದೂರು ದಾಖಲಿಸಿದ್ದರು. ಇದರ ಪರಿಣಾಮವಾಗಿ, MCA ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಂಡಿತು. ಅದರಂತೆ ಶಾರುಖ್ ಖಾನ್ ಮುಂದಿನ ಐದು ವರ್ಷಗಳ ಕಾಲ ಮುಂಬೈ ವಾಂಖೆಡೆ ಮೈದಾನಕ್ಕೆ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.
ನಿಯಮ ಉಲ್ಲಂಘಿಸಿದರೆ ಕ್ರಮ:
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಆಗಿನ MCA ಅಧ್ಯಕ್ಷ ವಿಲಾಸರಾವ್ ದೇಶಮುಖ್ ಅವರು, ವ್ಯಕ್ತಿಯ ಸ್ಥಾನಮಾನವನ್ನು ಲೆಕ್ಕಿಸದೆ, ಮುಂಬೈ ವಾಂಖೆಡೆ ಮೈದಾನದ ನಿಯಮಗಳನ್ನು ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು. ''ಯಾವುದೇ ವ್ಯಕ್ತಿಯಾಗಲಿ, ಪ್ರಸಿದ್ಧ ವ್ಯಕ್ತಿಯಾಗಲಿ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಸರಿಯಾದ ಅನುಮತಿ ಇಲ್ಲದೆ ಅವರು (ಶಾರುಖ್ ಖಾನ್) ಹೇಗೆ ಮೈದಾನದೊಳಗೆ ಪ್ರವೇಶಿಸಲು ಸಾಧ್ಯ? ಸಮಾರಂಭಕ್ಕೆ ನನ್ನನ್ನು ಆಹ್ವಾನಿಸದಿದ್ದರೆ ನಾನು ಕೂಡ ಮೈದಾನಕ್ಕೆ ಇಳಿಯಲು ಸಾಧ್ಯವಿಲ್ಲ'' ಎಂದು ದೇಶಮುಖ್ ಹೇಳಿದ್ದರು.
ಇದನ್ನೂ ಓದಿ: IPL 2025ಗೂ ಮುನ್ನ ರಾಜಸ್ಥಾನ ರಾಯಲ್ಸ್ಗೆ ಬಿತ್ತು ಬಲವಾದ ಪೆಟ್ಟು; ಸಂಜು ಸ್ಯಾಮ್ಸನ್ ಔಟ್, ಈತನೇ ಹೊಸ ಕ್ಯಾಪ್ಟನ್!
2025ರಲ್ಲಿ ನಿಷೇಧ ತೆರವು:
ಆ ಭದ್ರತಾ ಸಿಬ್ಬಂದಿ ತನ್ನ ಮಕ್ಕಳ ಮುಂದೆ ಕೆಲವು ಧಾರ್ಮಿಕ ಪದಗಳನ್ನು ಬಳಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು ಎಂದು ಶಾರುಖ್ ಖಾನ್ ವಿವರಿಸಿದ್ದರು. 2012ರಲ್ಲಿ ಮುಂಬೈ ವಾಂಖೆಡೆ ಮೈದಾನಕ್ಕೆ ಶಾರುಖ್ ಖಾನ್ ಪ್ರವೇಶಿಸದಂತೆ 5 ವರ್ಷಗಳ ನಿಷೇಧ ಹೇರಲಾಗಿದ್ದರೂ, ಆ ನಿಷೇಧವನ್ನು ಎರಡು ವರ್ಷಗಳ ಹಿಂದೆಯೇ ಅಂದರೆ 2015ರಲ್ಲಿ ತೆಗೆದುಹಾಕಲಾಗಿತ್ತು ಎಂಬುದು ಗಮನಾರ್ಹ.
ಶುಭಾರಂಭದ ನಿರೀಕ್ಷೆಯಲ್ಲಿ ಕೆಕೆಆರ್:
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ತವರಿನಲ್ಲಿ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗಿದೆ. ಮಾರ್ಚ್ 22ರಂದು ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ-ಕೆಕೆಆರ್ ತಂಡಗಳು ಶುಭಾರಂಭಕ್ಕಾಗಿ ಕಾದಾಡಲಿವೆ. ಹೊಸ ನಾಯಕ ಅಜಿಂಕ್ಯಾ ರಹಾನೆ ಕೆಕೆಆರ್ ತಂಡವನ್ನು ಯಾವ ರೀತಿ ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ. ಒಟ್ಟಿನಲ್ಲಿ ಉದ್ಘಾಟನಾ ಪಂದ್ಯವೇ ಐಪಿಎಲ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.