IPL 2026: ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ - ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Apr 15, 2026, 08:20 AM IST
csk vs kkr match results

ಸಾರಾಂಶ

ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 32 ರನ್‌ಗಳ ಜಯ ಸಾಧಿಸಿದೆ. ಆದರೆ, ನಾಯಕ ಋತುರಾಜ್ ಗಾಯಕ್ವಾಡ್ ಅವರ ಕಳಪೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನ ಮುಂದುವರಿದಿದ್ದು, ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಚೆನ್ನೈ: ಈ ಬಾರಿ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ಸತತ 5ನೇ ಪಂದ್ಯದಲ್ಲೂ ಗೆಲುವಿನಿಂದ ವಂಚಿತವಾಗಿದೆ. ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಕೆಕೆಆರ್‌ 32 ರನ್‌ಗಳಿಂದ ಪರಾಭವಗೊಂಡಿತು. ಹ್ಯಾಟ್ರಿಕ್‌ ಸೋಲು ಕಂಡಿದ್ದ ಸಿಎಸ್‌ಕೆ ಈಗ ಸತತ 2ನೇ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟ್‌ ಮಾಡಿದ ಸಿಎಸ್‌ಕೆ 5 ವಿಕೆಟ್‌ ನಷ್ಟದಲ್ಲಿ 192 ರನ್‌ ಕಲೆಹಾಕಿತು. ಸಂಜು ಸ್ಯಾಮ್ಸನ್‌ 48, ಡೆವಾಲ್ಡ್‌ ಬ್ರೆವಿಸ್‌ 41, ಆಯುಶ್‌ ಮ್ಹಾತ್ರೆ 17 ಎಸೆತಕ್ಕೆ 38, ಸರ್ಫರಾಜ್‌ ಖಾನ್‌ 23 ರನ್‌ ಕೊಡುಗೆ ನೀಡಿದರು. ದೊಡ್ಡ ಗುರಿ ಬೆನ್ನತ್ತಿದ ಕೋಲ್ಕತಾ ಮತ್ತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 160 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಪವರ್‌ಪ್ಲೇನಲ್ಲಿ ಕೇವಲ 36 ರನ್‌ ಗಳಿಸಿದ್ದ ತಂಡ, 100 ರನ್‌ಗೂ ಮುನ್ನವೇ 6 ವಿಕೆಟ್‌ ಕಳೆದುಕೊಂಡಿತ್ತು. ಕೊನೆಯಲ್ಲಿ ರಮನ್‌ದೀಪ್‌(35), ಪೊವೆಲ್‌(31) ಹೋರಾಡಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ.

ಸ್ಕೋರ್: ಸಿಎಸ್‌ಕೆ 192/5 (ಸಂಜು 48, ಬ್ರೆವಿಸ್‌ 41, ಆಯುಶ್‌ 38, ಕಾರ್ತಿಕ್‌ 2-35), ಕೋಲ್ಕತಾ 160/7 (ರಮನ್‌ದೀಪ್‌ 35, ಪೊವೆಲ್‌ 31, ನೂರ್‌ ಅಹ್ಮದ್‌ 3-21)

ಸತತ 5 ಪಂದ್ಯದಲ್ಲೂ ಋತುರಾಜ್‌ ಫೇಲ್‌

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಋತುರಾಜ್‌ ಗಾಯಕ್ವಾಡ್‌ ಮತ್ತೆ ವಿಫಲರಾಗಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ 5 ಪಂದ್ಯಗಳನ್ನಾಡಿರುವ ಅವರು, ಒಂದರಲ್ಲೂ ದೊಡ್ಡ ಇನ್ನಿಂಗ್ಸ್‌ ಕಟ್ಟಿಲ್ಲ. ಕೇವಲ 63 ರನ್‌ ಕಲೆಹಾಕಿದ್ದಾರೆ.

ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಸಿಎಸ್‌ಕೆ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿತ್ತು. ಇತರ ಬ್ಯಾಟರ್‌ಗಳು ಲಯಕ್ಕೆ ಮರಳಿದ್ದರೂ ಋತುರಾಜ್‌ ಮಾತ್ರ ರನ್‌ ಗಳಿಸಲು ಪರದಾಟುತ್ತಿದ್ದಾರೆ. ರಾಜಸ್ಥಾನ ವಿರುದ್ಧ ಕೇವಲ 6 ರನ್‌ ಗಳಿಸಿದ್ದ ಅವರು, ಪಂಜಾಬ್‌ ವಿರುದ್ಧ 28 ರನ್‌ ಸಿಡಿಸಿತ್ತು. ಬಳಿಕ ಆರ್‌ಸಿಬಿ ವಿರುದ್ಧ 7, ಡೆಲ್ಲಿ ವಿರುದ್ಧ 15 ರನ್‌ ಬಾರಿಸಿದ್ದರು. ಮಂಗಳವಾರ ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಅವರಿಂದ ದೊಡ್ಡ ಮೊತ್ತ ನಿರೀಕ್ಷೆ ಇತ್ತಾದರೂ ಕೇವಲ 7 ರನ್‌ಗೆ ವಿಕೆಟ್‌ ಒಪ್ಪಿಸಿದರು. ಟೂರ್ನಿಯಲ್ಲಿ ಅವರ ಸರಾಸರಿ ಕೇವಲ 12.6 ಇದ್ದು, ನಾಯಕನಾಗಿ ಮುಂಚೂಣಿಯಲ್ಲಿದ್ದು ತಂಡವನ್ನು ಮೇಲೆತ್ತುವ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಕ್ಯಾಚ್‌ ಡ್ರಾಪ್:

ಋತುರಾಜ್‌ ಕಳಪೆ ಪ್ರದರ್ಶನ ಬ್ಯಾಟಿಂಗ್‌ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ಮುಂದುವರಿದಿದೆ. ಕೋಲ್ಕತಾ ಬ್ಯಾಟರ್‌ ಸುನಿಲ್‌ ನರೈನ್‌ ನೀಡಿದ್ದ ಸುಲಭ ಕ್ಯಾಚ್‌ ಪಡೆಯಲು ಋತುರಾಜ್‌ ವಿಫಲರಾದರು.

ಫ್ಯಾನ್ಸ್‌ ಕಿಡಿ

ಸಿಎಸ್‌ಕೆ ನಾಯಕನ ಕಳಪೆ ಆಟಕ್ಕೆ ತಂಡದ ಅಭಿಮಾನಿಗಳೇ ಭಾರೀ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಕಿಡಿಕಾರುತ್ತಿರುವ ಅಭಿಮಾನಿಗಳು, ನಾಯಕತ್ವ ತ್ಯಜಿಸುವಂತೆಯೂ ಒತ್ತಾಯಿಸುತ್ತಿದ್ದಾರೆ.

5 ಪಂದ್ಯ, ಚೆನ್ನೈ 8 ಕ್ಯಾಚ್‌ ಡ್ರಾಪ್‌

ಈ ಬಾರಿ ಆಡಿರುವ 5 ಪಂದ್ಯಗಳಲ್ಲಿ ಸಿಎಸ್‌ಕೆ 8 ಕ್ಯಾಚ್‌ ಕೈಚೆಲ್ಲಿದೆ. ಇದು ಜಂಟಿ ಗರಿಷ್ಠ. ತಂಡದ ಕ್ಯಾಚ್‌ ಸಾಧನೆ ಕೇವಲ 68 ಶೇಕಡಾ ಇದೆ. ಸನ್‌ರೈಸರ್ಸ್‌ ಹೈದರಾಬಾದ್‌ ಕೂಡಾ ಈ ಬಾರಿ ಟೂರ್ನಿಯಲ್ಲಿ 8 ಕ್ಯಾಚ್‌ ಕೈಚೆಲ್ಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್ ಮಾಡಲು ಹೋಗಿ ₹70,000 ಮೌಲ್ಯದ ಉಂಗುರ ಕಳೆದುಕೊಂಡ ಜೋಡಿ; ಮ್ಯಾಚ್ ಆರಂಭಕ್ಕೂ ಮುನ್ನ 2 ಗಂಟೆ ಹುಡುಕಾಟ!
ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಗೆ ಬ್ರೇಕ್ ಹಾಕಿದ Praful Hinge ಯಾರು?; SRH ಹುಡುಕಿದ ರಿಯಲ್ ಡೈಮಂಡ್ ಹಿನ್ನಲೆ ಏನು?