
ಮೆಲ್ಬೋರ್ನ್: ಆಸೀಸ್ ಸರಣಿಯಲ್ಲಿ ಭಾರತದ ಪರ ಯಾರು ಹೆಚ್ಚು ರನ್ ಗಳಿಸುತ್ತಾರೆ? ಎನ್ನುವ ಕುತೂಹಲ ಜೋರಾಗಿದೆ. ಈ ಬಾರಿಯ ಅಸೀಸ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಸರದಾರರಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಬಲವಾಗಿ ನಂಬಿದ್ದಾರೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ವಿದೇಶದಲ್ಲಿ ಕೊಹ್ಲಿಯ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದಿದ್ದ ಅಭಿಮಾನಿಗಳು ಈಗ ಮತ್ತೆ ಆಶ್ಚರ್ಯಚಕಿತರಾಗಿದ್ದಾರೆ. ಬೂದು ಗಡ್ಡ ಮತ್ತು ಕಪ್ಪು ಕೂದಲಿನ ಸಾಮಾನ್ಯ ವ್ಯಕ್ತಿಯಿಂದ ಸ್ಟೈಲಿಶ್, ಪವರ್ಫುಲ್ ಕೊಹ್ಲಿಯಾಗಿ ಇದೀಗ ಬದಲಾಗಿದ್ದಾರೆ.
2012ರಲ್ಲಿ, ಕಾಮನ್ವೆಲ್ತ್ ಬ್ಯಾಂಕ್ ತ್ರಿಕೋನ ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಣಾಯಕ ಪಂದ್ಯವಿತ್ತು. ಫೈನಲ್ಗೇರಬೇಕಿದ್ದರೇ ಭಾರತ 40 ಓವರ್ಗಳಲ್ಲಿ 321 ರನ್ ಗಳಿಸಬೇಕಿತ್ತು. ಅಸಾಧ್ಯವೆನಿಸಿದ ಗುರಿಯನ್ನು ವಿರಾಟ್ ಕೊಹ್ಲಿ ಒಬ್ಬರೇ ಏಕಾಂಗಿ ಹೋರಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಕೇವಲ 86 ಎಸೆತಗಳಲ್ಲಿ ಕೊಹ್ಲಿ133 ರನ್ ಗಳಿಸಿದರು. ವಿರಾಟ್ನಿಂದ 'ಕಿಂಗ್ ಕೊಹ್ಲಿ'ಯಾಗಿ ಬದಲಾದ ಪಯಣದ ಆರಂಭ ಅಲ್ಲಿಂದಲೇ ಶುರುವಾಯಿತು.
ಬಹುತೇಕ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸವು ವಿರಾಟ್ ಕೊಹ್ಲಿ ಕಾಂಗರೂ ನಾಡಿಗೆ ಆಟಗಾರನಾಗಿ ಭೇಟಿ ನೀಡಲಿರುವ ಕೊನೆಯ ಸರಣಿಯಾಗುವ ಸಾಧ್ಯತೆಯಿದೆ. ಇದೀಗ ಒಂದು ಏಕದಿನ ವಿಶ್ವಕಪ್, ಒಂದು ಟಿ20 ವಿಶ್ವಕಪ್, ಎರಡು ಚಾಂಪಿಯನ್ಸ್ ಟ್ರೋಫಿ ಮತ್ತು ಐಪಿಎಲ್ ಪ್ರಶಸ್ತಿಗಳೊಂದಿಗೆ ಕೊಹ್ಲಿಕಿರೀಟಗಳ ಸರದಾರ. ಆಸ್ಟ್ರೇಲಿಯಾ ವಿರುದ್ಧ 50 ಪಂದ್ಯಗಳಿಂದ ವಿರಾಟ್ ಕೊಹ್ಲಿ 2,451 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 15 ಅರ್ಧಶತಕಗಳು ಸೇರಿವೆ. ಕೊಲಿ ಕೊನೆಯ ಬಾರಿಗೆ ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ. 5 ಪಂದ್ಯಗಳಿಂದ ಒಂದು ಶತಕ ಸೇರಿದಂತೆ 218 ರನ್ ಗಳಿಸಿದ್ದರು. ಬರೋಬ್ಬರಿ 7 ತಿಂಗಳ ನಂತರ ಕೊಹ್ಲಿ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದು, ಅಭಿಮಾನಿಗಳು ಮತ್ತೊಂದು ಕ್ಲಾಸಿಕ್ ಪ್ರದರ್ಶನಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮೂರು ಏಕದಿನ ಪಂದ್ಯಗಳಲ್ಲಿ ಕನಿಷ್ಠ ಎರಡು ಶತಕವನ್ನಾದರೂ ಸಿಡಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಭಜ್ಜಿ ಹೇಳಿದ್ದಾರೆ.
ಆಸೀಸ್ ಎದುರು ಅಕ್ಟೋಬರ್ 19, 23 ಹಾಗೂ 25ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದೀಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ಗೆ ಮರಳಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಈ ಇಬ್ಬರು ದಿಗ್ಗಜ ಆಟಗಾರರು ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಸಹಜವಾಗಿಯೇ ನಿರೀಕ್ಷೆಗಳು ಜೋರಾಗಿವೆ.
ಶುಭ್ಮನ್ ಗಿಲ್(ನಾಯಕ), ಶ್ರೇಯಸ್ ಅಯ್ಯರ್(ಉಪನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್(ವಿಕೆಟ್ ಕೀಪರ್,), ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ದ್ ಕೃಷ್ಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.