Vijay Hazare Trophy: ತಮಿಳುನಾಡು ವಿರುದ್ದ ಸೇಡಿಗೆ ಸಜ್ಜಾದ ಕರ್ನಾಟಕ

By Suvarna NewsFirst Published Dec 21, 2021, 8:33 AM IST
Highlights

* ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿಂದು ಕರ್ನಾಟಕ-ತಮಿಳುನಾಡು ಸೆಣಸಾಟ

* ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಕರ್ನಾಟಕ

* ಮೇಲ್ನೋಟಕ್ಕೆ ಉಭಯ ತಂಡಗಳು ಸಾಕಷ್ಟು ಸಮತೋಲಿತದಿಂದ ಕೂಡಿವೆ

ಜೈಪುರ(ಡಿ.21): ವಿಜಯ್‌ ಹಜಾರೆ ಏಕದಿನ ಟೂರ್ನಿಯ (Vijay Hazare Trophy) ಕ್ವಾರ್ಟರ್‌ ಫೈನಲ್‌ನಲ್ಲಿಂದು ಕರ್ನಾಟಕಕ್ಕೆ ಬದ್ಧವೈರಿ ತಮಿಳುನಾಡು ಎದುರಾಗಲಿದೆ. ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟೂರ್ನಿಯ (Syed Mushtaq Ali Trophy) ಫೈನಲ್‌, ಇದೇ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ತಮಿಳುನಾಡಿಗೆ ಶರಣಾಗಿದ್ದ ಕರ್ನಾಟಕ, ಸೇಡು ತೀರಿಸಿಕೊಳ್ಳಲು ಕಾತರಿಸುತ್ತಿದೆ. ಎರಡೂ ತಂಡಗಳು ಗುಂಪು ಹಂತದಲ್ಲಿ ತಲಾ 12 ಅಂಕಗಳನ್ನು ಸಂಪಾದಿಸಿದವು. ಆದರೆ ಉತ್ತಮ ನೆಟ್‌ ರನ್‌ರೇಟ್‌ನ ಕಾರಣ ತಮಿಳುನಾಡು ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. 2ನೇ ಸ್ಥಾನ ಪಡೆದ ಕಾರಣ ಕರ್ನಾಟಕ, ಪ್ರಿ ಕ್ವಾರ್ಟರ್‌ ಫೈನಲ್‌ ಆಡಬೇಕಾಯಿತು.

ಪ್ರಿ ಕ್ವಾರ್ಟರ್‌ನಲ್ಲಿ ರಾಜಸ್ಥಾನ ವಿರುದ್ಧ ಸುಲಭ ಗೆಲುವು ಸಾಧಿಸಿದ ಕರ್ನಾಟಕ, ಬಲಿಷ್ಠ ತಮಿಳುನಾಡು ವಿರುದ್ಧವೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ನಾಯಕ ಮನೀಶ್‌ ಪಾಂಡೆ (Manish Pandey) ಭರ್ಜರಿ ಲಯದಲ್ಲಿದ್ದು, ದೇವದತ್‌ ಪಡಿಕ್ಕಲ್‌ (Devdutt Padikkal), ಕೆ.ವಿ.ಸಿದ್ಧಾರ್ಥ್‍, ಅಭಿನವ್‌ ಮನೋಹರ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಪಡೆ ಎಂತದ್ದೇ ಬೌಲಿಂಗ್‌ ಪಡೆಯನ್ನು ದಂಡಿಸುವ ಸಾಮರ್ಥ್ಯ ಹೊಂದಿದೆ. ಆದರೆ ಮಹತ್ವದ ಪಂದ್ಯದಿಂದ ಫಾರ್ಮ್‌ನಲ್ಲಿದ್ದ ರವಿಕುಮಾರ್ ಸಮರ್ಥ್ (Ravikumar Samarth) ಹಾಗೂ ಕೃಷ್ಣಪ್ಪ ಗೌತಮ್ ತಂಡದಿಂದ ಹೊರಬಿದ್ದಿರುವುದು ಮನೀಶ್ ಪಾಂಡೆ ಪಡೆಗೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆಯಿದೆ. 

ಟೀಂ ಇಂಡಿಯಾ (Team India) ವೇಗಿ ಪ್ರಸಿದ್ಧ್ ಕೃಷ್ಣ (Prasidh Krishna) ವಾಪಸಾಗಿರುವುದು ಕರ್ನಾಟಕ ತಂಡದ ಬೌಲಿಂಗ್‌ ಬಲ ಹೆಚ್ಚಿಸಿದ್ದು, ಯುವ ವೇಗಿ ವೈಶಾಖ್‌ ವಿಜಯ್‌ಕುಮಾರ್‌ ಉತ್ಕೃಷ್ಟ ಲಯದಲ್ಲಿದ್ದಾರೆ. ತ್ರಿವಳಿ ಸ್ಪಿನ್ನರ್‌ಗಳಾದ ಕೆ.ಸಿ.ಕಾರ್ಯಪ್ಪ, ಪ್ರವೀಣ್‌ ದುಬೆ, ಜೆ.ಸುಚಿತ್‌ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ.

Vijay Hazare Trophy 2021 : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

ತಮಿಳುನಾಡು ತಂಡ ಸಮತೋಲನದಿಂದ ಕೂಡಿದೆ. ಎನ್‌.ಜಗದೀಶನ್‌, ಬಾಬಾ ಇಂದ್ರಜಿತ್‌, ದಿನೇಶ್‌ ಕಾರ್ತಿಕ್‌, ವಿಜಯ್‌ ಶಂಕರ್‌, ವಾಷಿಂಗ್ಟನ್‌ ಸುಂದರ್‌, ಶಾರುಖ್‌ ಖಾನ್‌ ಹೀಗೆ ಅನುಭವಿ ಆಟಗಾರರ ದಂಡೇ ಇದೆ. ವಾಷಿಂಗ್ಟನ್‌ ಒಟ್ಟು 12 ವಿಕೆಟ್‌ ಕಬಳಿಸಿದ್ದು ತಂಡದ ಟ್ರಂಪ್‌ಕಾರ್ಡ್‌ ಎನಿಸಿದ್ದಾರೆ. ಆರ್‌.ಸಾಯಿ ಕಿಶೋರ್‌, ಎಂ.ಸಿದ್ಧಾರ್ಥ್‍, ಸಂಜಯ್‌ ಯಾದವ್‌ ಸಹ ನಿರ್ಣಾಯಕ ಪಾತ್ರ ವಹಿಸಬಲ್ಲರು. ಸಮಬಲರ ನಡುವಿನ ಪೈಪೋಟಿ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಕೆರಳಿಸಲಿದೆ.

ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಮುಖಾಮುಖಿಯಾಗಲಿವೆ. ಉಳಿದೆರಡು ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಬುಧವಾರ ನಡೆಯಲಿವೆ.

2022-23ರಲ್ಲಿ 2 ಬಾರಿ ಕಿವೀಸ್‌ ಪಾಕ್‌ ಪ್ರವಾಸ!

ಕರಾಚಿ: ಕಳೆದ ಸೆಪ್ಟಂಬರ್‌ನಲ್ಲಿ ಏಕದಿನ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಭದ್ರತಾ ಸಮಸ್ಯೆ ಕಾರಣ ನೀಡಿ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದ ನ್ಯೂಜಿಲೆಂಡ್‌, ಮುಂದಿನ 2 ವರ್ಷಗಳಲ್ಲಿ 2 ಬಾರಿ ಪಾಕ್‌ಗೆ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿದೆ. ಇದನ್ನು ಉಭಯ ಕ್ರಿಕೆಟ್‌ ಮಂಡಳಿಗಳು ಸೋಮವಾರ ಖಚಿತಪಡಿಸಿವೆ. 

IPL Auction 2022: ಪಾಕೆಟ್ ಡೈನಮೊ ನಿಕೋಲಸ್ ಪೂರನ್ ಮೇಲೆ ಕಣ್ಣಿಟ್ಟಿವೆ ಈ ನಾಲ್ಕು ಫ್ರಾಂಚೈಸಿಗಳು..!

2022ರ ಡಿಸೆಂಬರ್‌ನಲ್ಲಿ ಕಿವೀಸ್‌ ತಂಡ ಪಾಕ್‌ಗೆ ತೆರಳಲಿದ್ದು 2 ಟೆಸ್ಟ್‌ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಬಳಿಕ 2023ರ ಏಪ್ರಿಲ್‌ನಲ್ಲಿ ಮತ್ತೆ ಪಾಕ್‌ಗೆ ತೆರಳುವ ಕಿವೀಸ್‌, ಸೆಪ್ಟಂಬರ್‌ನಲ್ಲಿ ರದ್ದಾಗಿದ್ದ ಸರಣಿಗೆ ಬದಲಾಗಿ 5 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ.


 

click me!