ಮೊದಲ ಏಕದಿನ: ವೆಸ್ಟ್ ಇಂಡೀಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ!

By Suvarna NewsFirst Published Dec 15, 2019, 5:42 PM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಬೃಹತ್ ಮೊತ್ತ ಪೇರಿಸುವ ಲೆಕ್ಕಾಚಾರದಲ್ಲಿದ್ದ ಭಾರತಕ್ಕೆ ಆರಂಭದಲ್ಲೇ ವಿಂಡೀಸ್ ಶಾಕ್ ನೀಡಿತ್ತು. ಆದರೆ ಯುವ ಆಟಗಾರರ ಹೋರಾಟದಿಂದ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ಚೆನ್ನೈ(ಡಿ.15): ಚೆನ್ನೈನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರೆ, ಯುವ ಬ್ಯಾಟ್ಸ್‌ಮನ್‌ಗಳು ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಸ್ ಅಯ್ಯರ್ 70 ಹಾಗೂ ರಿಷಬ್ ಪಂತ್ ಸಿಡಿಸಿದ 71 ರನ್ ನೆರವಿನಿಂದ ಭಾರತ, 8 ವಿಕೆಟ್ ನಷ್ಟಕ್ಕೆ 288 ರನ್ ಸಿಡಿಸಿದೆ.

ಇದನ್ನೂ ಓದಿ: INDvWI ಏಕದಿನ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ !

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ವಿಕೆಟ್ ಪತನ ಆಘಾತ ನೀಡಿತು. ರಾಹುಲ್ ಕೇವಲ 6 ರನ್ ಸಿಡಿಸಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಕೇವಲ 4 ರನ್ ಸಿಡಿಸಿ ಪೆವಿಲಿಯನ್‌ಗೆ ಮರಳಿದರು. 25 ರನ್‌ಗೆ ಭಾರತದ  2 ಪ್ರಮುಖ ವಿಕೆಟ್ ಪತನಗೊಂಡಿತ್ತು. ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಹೋರಾಟ ಮುಂದವರಿಸಿದರು.

ಇದನ್ನೂ ಓದಿ: NCA ಮತ್ತೆ ಎಡವಟ್ಟು; ಬೆಂಗಳೂರಿಗೆ ಬರಲು ಬುಮ್ರಾ, ಹಾರ್ದಿಕ್ ನಕಾರ!

ರೋಹಿತ್ 36 ರನ್ ಸಿಡಿಸಿ ಔಟಾದರು. ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಜೊತೆಯಾಟ ವಿಂಡೀಸ್ ಲೆಕ್ಕಾಚಾರ ಉಲ್ಟಾ ಮಾಡಿತು. ಭಾರತವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಯತ್ನಿಸಿದ್ದ ವಿಂಡೀಸ್ ಪ್ಲಾನ್ ಬದಲಿಸಿತು. ಅಯ್ಯರ್ ಹಾಗೂ ಪಂತ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.

ಶ್ರೇಯಸ್ ಅಯ್ಯರ್ 5 ಬೌಂಡರಿ 1 ಸಿಕ್ಸರ್ ನೆರವಿನಿಂದ 70  ರನ್ ಸಿಡಿಸಿ ಔಟಾದರು. ಇತ್ತ ಟಿ20 ಮಾದರಿಯಲ್ಲಿ ಟೀಕೆಗೆ ಗುರಿಯಾದ ಪಂತ್ 69 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 71 ರನ್ ಸಿಡಿಸಿ ಔಟಾದರು. ಕೇದಾರ್ ಜಾಧವ್ ಹಾಗೂ ರವೀಂದ್ರ ಜಡೇಜಾ ಭಾರತಕ್ಕೆ ನೆರವಾದರು. ಇಂಜುರಿಯಿಂದ ಚೇತರಿಸಿಕೊಂಡ ತಂಡ ಸೇರಿಕೊಂಡ ಕೇದಾರ್ ಜಾಧವ್ 35 ಎಸೆತದಲ್ಲಿ 40 ರನ್ ಸಿಡಿಸಿ ಔಟಾದರು. 

ರವೀಂದ್ರ ಜಡೇಜಾ 21 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಶಿವಂ ದುಬೆ 9 ರನ್ ಕಾಣಿಕೆ ನೀಡಿದರು.  ಅಂತಿಮವಾಗಿ ಭಾರತ 8 ವಿಕೆಟ್ ನಷ್ಟಕ್ಕೆ 288 ರನ್ ಸಿಡಿಸಿತು. 

click me!