
ನವದೆಹಲಿ(ಡಿ.30): ಟೀಂ ಇಂಡಿಯಾ ತಾರಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಕಾರು ಅಪಘಾತಕ್ಕೊಳಗಾಗಿದ್ದು, ಅಪಘಾತದ ರಬಸಕ್ಕೆ ಕಾರು ಸುಟ್ಟು ಕರಕಲಾಗಿದೆ. ಇನ್ನು ಸ್ಪೋಟಕ ಬ್ಯಾಟರ್ ಪಂತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ರಿಷಭ್ ಪಂತ್ ಡೆಲ್ಲಿಯಿಂದ ತವರಿಗೆ ವಾಪಸಾಗುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಹಮ್ಮದ್ಪುರ್ ಝಲ್ನ ನರ್ಸನ್ ಬಾರ್ಡರ್ನ ರೋರ್ಕಿಯಲ್ಲಿ ಈ ಅಪಘಾತ ಸಂಭವಿಸಿದೆ.
ಈ ಕುರಿತಂತೆ ಪಿಟಿಐ ಟ್ವೀಟ್ ಮಾಡಿದ್ದು, ಶುಕ್ರವಾರ ಮುಂಜಾನೆ ಭಾರತ ತಂಡದ ಕ್ರಿಕೆಟಿಗ ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದೆ. ಪ್ರಾಥಮಿಕ ಮಾಹಿತಿಯಂತೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಕಾರ, ರಿಷಭ್ ಪಂತ್ ಅವರ ಹಣೆ ಹಾಗೂ ಕಾಲುಗಳಿಗೆ ಗಾಯವಾಗಿದೆ.
ರಿಷಭ್ ಪಂತ್ ಅವರ ಕಾರು ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಲ್ಲಿನ ಎಸ್ಪಿ ದೆಹತ್ ಸ್ವಪ್ನ ಕಿಶೋರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಕ್ಷಮ್ ಆಸ್ಪತ್ರೆಯಲ್ಲಿ ರಿಷಭ್ ಪಂತ್ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಛೇರ್ಮನ್ ಡಾ. ಸುಶೀಲ್ ನಗರ್, ಸದ್ಯ ರಿಷಭ್ ಪಂತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಮಾಹಿತಿಯ ಪ್ರಕಾರ, ರಿಷಭ್ ಪಂತ್ ಅವರ ಕಾರು ಡೆಲ್ಲಿ-ಡೆಹ್ರಾಡೂನ್ ಹೈವೇಯ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ, ಕಾರು ಭಾಗಶಃ ಸುಟ್ಟು ಭಸ್ಮವಾಗಿದೆ. ಈ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರ ಗಾಯಕ್ಕೊಳಗಾಗಿದ್ದು, ಡೆಲ್ಲಿ ರಸ್ತೆಯಲ್ಲಿರುವ ಸಕ್ಷಾಮ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಜೊತೆ ಪಾಂಡ್ಯ ಬ್ರದರ್ಸ್, ಕೆಜಿಎಫ್ 3 ಎಂದ ಕ್ರಿಕೆಟರ್ಸ್!
ಸಾಮಾಜಿಕ ಜಾಲತಾಣಗಳಲ್ಲಿ ರಿಷಭ್ ಪಂತ್ ಅವರು ಗಾಯಗೊಂಡಿರುವ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದು, ಅಪಘಾತದ ತೀವ್ರತೆ ಬೆಚ್ಚಿಬೀಳಿಸುವಂತಿದೆ.
ಲಂಕಾ ಎದುರಿನ ಸರಣಿಯಿಂದ ಹೊರಗುಳಿದಿದ್ದ ರಿಷಭ್ ಪಂತ್:
ಜನವರಿ 03ರಿಂದ ತವರಿನಲ್ಲಿ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಟಿ20 ಸರಣಿಯಿಂದ ರಿಷಭ್ ಪಂತ್ ಅವರು ಹೊರಗುಳಿದಿದ್ದರು. 3 ಪಂದ್ಯಗಳ ಟಿ20 ಸರಣಿಯು ಜನವರಿ 3, 5, 7ಕ್ಕೆ ನಡೆಯಲಿದ್ದು, ಏಕದಿನ ಸರಣಿಯ 3 ಪಂದ್ಯಗಳು 10, 12, 15ಕ್ಕೆ ನಿಗದಿಯಾಗಿದೆ. ಲಂಕಾ ಎದುರಿನ ಸರಣಿಗೆ ರಿಷಭ್ ಪಂತ್ ಅವರನ್ನು ಕೈಬಿಡಲಾಗಿದೆಯೇ, ಗಾಯಗೊಂಡಿದ್ದಾರೆಯೇ ಅಥವಾ ವಿಶ್ರಾಂತಿ ನೀಡಲಾಗಿದೆಯೇ ಎನ್ನುವುದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು ಡೆಲ್ಲಿ ಮೂಲದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆದರೆ ಇದಾದ ಬಳಿಕ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡ ಕೂಡಿಕೊಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.