ಧವನ್‌ ಬದಲು ಏಕದಿನ ತಂಡಕ್ಕೆ ಮಯಾಂಕ್‌?

By Kannadaprabha NewsFirst Published Dec 11, 2019, 9:43 AM IST
Highlights

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್ ಸ್ಥಾನಕ್ಕೆ ಮಯಾಂಕ್ ಅಗರ್‌ವಾಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಗಾಯದಿಂದ ಧವನ್ ಚೇತರಿಸಿಕೊಳ್ಳದ ಹಿನ್ನಲೆಯಲ್ಲಿ ಅಗರ್‌ವಾಲ್‌ಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಮಯಾಂಕ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ವೇದಿಕೆ ರೆಡಿಯಾಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ನವದೆಹಲಿ(ಡಿ.11): ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್‌ವಾಲ್‌, ಮುಂಬರುವ ವೆಸ್ಟ್‌ಇಂಡೀಸ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಇದೆ. ಹಿರಿಯ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಮಂಡಿ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ, ಸರಣಿಯಿಂದ ಹೊರಬೀಳುವ ಸಾಧ್ಯತೆ ಇದ್ದು, ಅವರ ಸ್ಥಾನವನ್ನು ಮಯಾಂಕ್‌ ತುಂಬಲಿದ್ದಾರೆ ಎನ್ನಲಾಗಿದೆ.

ರಣಜಿ ಟ್ರೋಫಿ: ಗೌತಮ್‌ ಆಲ್ರೌಂಡ್‌ ಶೋ!

ಡಿ.15ರಿಂದ ಮೂರು ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು ಚೆನ್ನೈನಲ್ಲಿ ಮೊದಲ ಪಂದ್ಯ ನಡೆಯಲಿದೆ. ಡಿ.18ರಂದು ವಿಶಾಖಪಟ್ಟಣಂನಲ್ಲಿ 2ನೇ ಪಂದ್ಯ ನಡೆಯಲಿದ್ದು, 3ನೇ ಪಂದ್ಯಕ್ಕೆ ಕಟಕ್‌ (ಡಿ.22) ಆತಿಥ್ಯ ವಹಿಸಲಿದೆ.

ನಿರ್ಣಾಯಕ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ವೇಳೆ ಧವನ್‌ ಮಂಡಿ ಗಾಯಕ್ಕೆ ತುತ್ತಾಗಿದ್ದರು. ವಿಂಡೀಸ್‌ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಅವರು ಏಕದಿನ ಸರಣಿ ವೇಳೆಗೆ ಗುಣಮುಖರಾಗುವ ನಿರೀಕ್ಷೆ ಇತ್ತು. ಆದರೆ ಅವರು ತಂಡಕ್ಕೆ ವಾಪಸಾಗಲು ಇನ್ನೂ ಕೆಲ ದಿನಗಳ ಸಮಯ ಬೇಕಿದೆ ಎಂದು ವರದಿಯಾಗಿದೆ. ತಂಡದ ಆಡಳಿತದೊಂದಿಗೆ ಚರ್ಚಿಸಿ, ಧವನ್‌ ಬದಲಿಗೆ ಮಯಾಂಕ್‌ರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 2019ರ ಐಸಿಸಿ ಏಕದಿನ ವಿಶ್ವಕಪ್‌ ವೇಳೆ ಆಲ್ರೌಂಡರ್‌ ವಿಜಯ್‌ ಶಂಕರ್‌ ಗಾಯಗೊಂಡ ಕಾರಣ, ಅವರ ಬದಲು ಮಯಾಂಕ್‌ ತಂಡ ಕೂಡಿಕೊಂಡಿದ್ದರು. ಆದರೆ ಅವರಿನ್ನೂ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಲ್ಲ.

ಮಯಾಂಕ್‌ ಸದ್ಯ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ತಮಿಳುನಾಡು ವಿರುದ್ಧ ದಿಂಡಿಗಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಡುತ್ತಿದ್ದಾರೆ.
 

click me!