ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆ: ಎರಡು ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾದ ರೋಹಿತ್ ಶರ್ಮಾ..!

By Naveen KodaseFirst Published Apr 30, 2024, 12:05 PM IST
Highlights

ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಬಹುತೇಕ ಆಟಗಾರ ಹೆಸರು ಅಂತಿಮವಾಗಿದೆಯಾದರೂ ಒಂದೆರಡು ಆಟಗಾರರ ಸ್ಥಾನದ ಕುರಿತಂತೆ ಚರ್ಚೆ ಮುಂದುವರೆದಿದೆ ಎನ್ನಲಾಗಿದೆ. ಈ ಕುರಿತಂತೆ ಬ್ಯಾಕ್‌ಅಪ್ ಓಪನ್ನರ್, ಬ್ಯಾಕ್‌ಅಪ್ ವಿಕೆಟ್ ಕೀಪರ್ ಹಾಗೂ ಬ್ಯಾಕ್‌ಅಪ್ ವೇಗಿ ಯಾರಾಗಬೇಕು ಎನ್ನುವುದರ ಕುರಿತಂತೆ ಜೋರಾದ ಚರ್ಚೆ ನಡೆಯುತ್ತಿದೆ.

ನವದೆಹಲಿ(ಏ.30): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡದ ಆಯ್ಕೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇಂದು ಸಂಜೆಯೊಳಗಾಗಿ ಭಾರತ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸುವ ಸಾಧ್ಯತೆಯಿದೆ. ಹೀಗಿರುವಾಗಲೇ ಭಾರತ ತಂಡದ ಆಯ್ಕೆಯ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎರಡು ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡಕ್ಕೆ ಬಹುತೇಕ ಆಟಗಾರ ಹೆಸರು ಅಂತಿಮವಾಗಿದೆಯಾದರೂ ಒಂದೆರಡು ಆಟಗಾರರ ಸ್ಥಾನದ ಕುರಿತಂತೆ ಚರ್ಚೆ ಮುಂದುವರೆದಿದೆ ಎನ್ನಲಾಗಿದೆ. ಈ ಕುರಿತಂತೆ ಬ್ಯಾಕ್‌ಅಪ್ ಓಪನ್ನರ್, ಬ್ಯಾಕ್‌ಅಪ್ ವಿಕೆಟ್ ಕೀಪರ್ ಹಾಗೂ ಬ್ಯಾಕ್‌ಅಪ್ ವೇಗಿ ಯಾರಾಗಬೇಕು ಎನ್ನುವುದರ ಕುರಿತಂತೆ ಜೋರಾದ ಚರ್ಚೆ ನಡೆಯುತ್ತಿದೆ.

ಟಿ20 ವಿಶ್ವಕಪ್‌ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ಮೇ 01 ಡೆಡ್‌ಲೈನ್‌

ಖ್ಯಾತ ಕ್ರಿಕೆಟ್ ವೆಬ್‌ಸೈಟ್ Crickbuzz ವರದಿಯ ಪ್ರಕಾರ, ರೋಹಿತ್ ಶರ್ಮಾ ತಂಡದ ಆಯ್ಕೆಯ ಕುರಿತಂತೆ ಎರಡು ವಿಚಾರದ ಬಗ್ಗೆ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ ತಂಡದೊಳಗೆ ಸ್ಥಾನ ಪಡೆಯುವುದರಿಂದ ನಾಲ್ಕನೇ ಸ್ಪೆಷಲಿಸ್ಟ್ ವೇಗಿಯ ಅಗತ್ಯವಿದೆಯೇ? ಇನ್ನು ಬ್ಯಾಕ್‌ಅಪ್ ಓಪನ್ನರ್ ಆಗಿ ಶುಭ್‌ಮನ್ ಗಿಲ್‌ಗೆ ತಂಡದೊಳಗೆ ಸ್ಥಾನ ನೀಡಬೇಕೇ ಎನ್ನುವುದರ ಗೊಂದಲದಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಇದೇ ವರದಿಯಲ್ಲಿ ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕ ಪಟ್ಟ ಕಳೆದುಕೊಳ್ಳಲಿದ್ದು, ಆ ಸ್ಥಾನ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಪಾಲಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಿಷಭ್ ಪಂತ್ ನಾಯಕನಾಗಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ಆಗಿ ಯಶಸ್ವಿಯಾಗಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಯುಜುವೇಂದ್ರ ಚಹಲ್ ಮತ್ತೊಮ್ಮೆ ಕಡೆಗಣಿಸುವ ಸಾಧ್ಯತೆಯಿದ್ದು, ಕುಲ್ದೀಪ್ ಯಾದವ್ ಮೊದಲ ಆಯ್ಕೆಯ ಸ್ಪಿನ್ನರ್ ಆಗಿ ನೇಮಕವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಸ್ಥಾನದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗುತ್ತಿದ್ದು, ಮತ್ತೋರ್ವ ಸ್ಪಿನ್ನರ್ ರವಿ ಬಿಷ್ಣೋಯಿ ಎರಡನೇ ಆಯ್ಕೆಯ ಸ್ಪಿನ್ನರ್ ಆಗಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.

'ಕೂತು ಮಾತಾಡೋದು ಸುಲಭ..': ನಗುನಗುತ್ತಲೇ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

ಈ ವರದಿಯ ಪ್ರಕಾರ, ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾದರೆ, ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಮೊದಲ 4 ಕ್ರಮಾಂಕದ ಬ್ಯಾಟರ್ ಆಗಿರಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆಯಲಿದ್ದಾರೆ. ಇದರ ಜತೆಗೆ ಹಾರ್ಡ್ ಹಿಟ್ಟರ್‌ಗಳಾದ ಶಿವಂ ದುಬೆ ಹಾಗೂ ರಿಂಕು ಸಿಂಗ್ ನಡುವೆ ಒಂದು ಸ್ಥಾನಕ್ಕೆ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಇನ್ನು ಎರಡನೇ ಆಯ್ಕೆಯ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಹಾಗೂ ಕೆ ಎಲ್ ರಾಹುಲ್ ನಡುವೆ ಕೂಡಾ ಸಾಕಷ್ಟು ಸ್ಪರ್ಧೆ ಏರ್ಪಟ್ಟಿದೆ.

ಇನ್ನು ಹಾರ್ದಿಕ್ ಪಾಂಡ್ಯ ಫಾರ್ಮ್ ಕುರಿತಂತೆ ಕೂಡಾ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ 9ಪಂದ್ಯಗಳನ್ನಾಡಿ 197 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 4 ವಿಕೆಟ್ ಕಬಳಿಸಿದ್ದಾರೆ.

click me!