Syed Mushtaq Ali Trophy: 4 ಮೇಡನ್‌ ಓವರ್‌ ಎಸೆದ ಮರುದಿನವೇ ಅಕ್ಷಯ್‌ಗೆ ಹ್ಯಾಟ್ರಿಕ್‌ !

By Suvarna NewsFirst Published Nov 11, 2021, 8:46 AM IST
Highlights

* ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮತ್ತೊಮ್ಮೆ ಮಿಂಚಿದ ಅಕ್ಷಯ್‌

* ವಿಶ್ವದಾಖಲೆ ಬೆನ್ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಅಕ್ಷಯ್

* ಸಿಕ್ಕಿಂ ಎದುರು ಭರ್ಜರಿ ಗೆಲುವು ಸಾಧಿಸಿದ ವಿದರ್ಭ

ವಿಜಯವಾಡ(ನ.11): ನಾಲ್ಕು ಮೇಡನ್‌ ಓವರ್‌ ಎಸೆದು ಟಿ20ಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮರುದಿನವೇ ವಿದರ್ಭ ತಂಡದ ಅಕ್ಷಯ್‌ ಕಾರ್ನೆವಾರ್‌ (Akshay Karnewar) ಹ್ಯಾಟ್ರಿಕ್‌ ವಿಕೆಟ್‌ ಪಡೆದು ಗಮನ ಸೆಳೆದಿದ್ದಾರೆ. 

ಮಂಗಳವಾರ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ (Syed Mushtaq Ali Trophy) ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ 8ನೇ ಓವರ್‌ನ ಕೊನೆಯ 2 ಎಸೆತ ಹಾಗೂ 10ನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಕಿತ್ತು ಅಕ್ಷಯ್‌ ಕಾರ್ನೆವಾರ್‌ ಹ್ಯಾಟ್ರಿಕ್‌ ಪೂರೈಸಿದರು. ಪಂದ್ಯದಲ್ಲಿ ಅವರು 4 ಓವರ್‌ ಎಸೆದು 1 ಮೇಡನ್‌ ಸಹಿತ ಕೇವಲ 5 ರನ್‌ ನೀಡಿ 4 ವಿಕೆಟ್‌ ಕಿತ್ತರು. 

ಸಿಕ್ಕಿಂ ವಿರುದ್ದ ಭರ್ಜರಿ ಗೆಲುವು ಸಾಧಿಸಿದ ವಿದರ್ಭ:

ಸಿಕ್ಕಿಂ (Sikkim) ವಿರುದ್ದ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಉತ್ತಮ ಆರಂಭವನ್ನೇ ಪಡೆಯಿತು. ಅಥರ್ವ ತೈಡೆ(35) ಹಾಗೂ ನಾಯಕ ಅಕ್ಷಯ್ ವಾಡ್ಕರ್ ಚುರುಕಿನ 40 ರನ್‌ ಬಾರಿಸಿದರು. ಶುಭಂ ದುಬೆ 24 ರನ್ ಚಚ್ಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ ಸ್ಪೋಟಕ ಅರ್ಧಶತಕ ಚಚ್ಚಿದರು. ಕೇವಲ 20 ಎಸೆತಗಳನ್ನು ಎದುರಿಸಿದ ಜಿತೇಶ್ ಶರ್ಮಾ 2 ಬೌಂಡರಿ ಹಾಗೂ 6 ಸಿಕ್ಸರ್‌ ನೆರವಿನಿಂದ ಅಜೇಯ 54 ರನ್‌ ಸಿಡಿಸಿದರು. ಇನ್ನು ವಾಂಖೆಡೆ 14 ಎಸೆತಗಳಲ್ಲಿ 29 ರನ್‌ ಸಿಡಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ವಿದರ್ಭ ತಂಡವು 5 ವಿಕೆಟ್ ಕಳೆದುಕೊಂಡು 205 ರನ್‌ ಬಾರಿಸಿದೆ.

Syed Mushtaq Ali Trophy ಕರ್ನಾಟಕ ಪ್ರೀ ಕ್ವಾರ್ಟರ್‌ಗೆ ಲಗ್ಗೆ

ಇನ್ನು ಕಠಿಣ ಗುರಿ ಬೆನ್ನತ್ತಿದ ಸಿಕ್ಕಿಂ ತಂಡವು ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅಜಿತ್ ಕಾರ್ತಿಕ್‌(15), ಲಿಯಾನ್ ಖಾನ್(30), ಸುಮಿತ್ ಸಿಂಗ್(16*) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ. ಅಕ್ಷಯ್‌ ಕಾರ್ನೆವಾರ್‌ ಮಾರಕ ದಾಳಿಗೆ ಸಿಕ್ಕಿಂ ಬ್ಯಾಟರ್‌ಗಳು ಅಕ್ಷರಶಃ ತತ್ತರಿಸಿ ಹೋಯಿತು. ಅಂತಿಮವಾಗಿ 20 ಓವರ್‌ಗಳಲ್ಲಿ ಸಿಕ್ಕಿಂ 8 ವಿಕೆಟ್ ಕಳೆದುಕೊಂಡು 75 ರನ್‌ ಬಾರಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ವಿದರ್ಭ ತಂಡವು 130 ರನ್‌ಗಳ ಅಂತರ ಗೆಲುವು ದಾಖಲಿಸಿತು.

ಸೋಮವಾರ ಮಣಿಪುರ ವಿರುದ್ಧ ನಡೆದ ಪಂದ್ಯದಲ್ಲಿ ಅಕ್ಷಯ್‌ ಕಾರ್ನೆವಾರ್‌ 4 ಮೇಡನ್‌ ಓವರ್‌ ಎಸೆದು 2 ವಿಕೆಟ್‌ ಪಡೆದಿದ್ದು ವಿಶ್ವ ದಾಖಲೆ ಎನಿಸಿಕೊಂಡಿತ್ತು. ಇದಕ್ಕೂ ಮೊದಲು ಪಾಕಿಸ್ತಾನದ ವೇಗಿ ಮೊಹಮ್ಮದ್ ಇರ್ಫಾನ್‌ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ 4 ಓವರ್‌ ಬೌಲಿಂಗ್ ಮಾಡಿ ಮೂರು ಮೇಡನ್ ಸಹಿತ ಕೇವಲ ಒಂದು ರನ್‌ ನೀಡಿದ್ದು ದಾಖಲೆಯಾಗಿತ್ತು.

T20 World Cup 2021: ಇಂಗ್ಲೆಂಡ್ ಮಣಿಸಿ ಚೊಚ್ಚಲ ಭಾರಿಗೆ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್!

ಸದ್ಯ ವಿದರ್ಭ ತಂಡವು ಸಯ್ಯದ್ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ಗೆ ಅಹರ್ತೆಗಿಟ್ಟಿಸಿಕೊಂಡಿದೆ. ನವೆಂಬರ್ 16ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ (Arun Jaitley Stadium) ನಡೆಯಲಿರುವ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. ಇನ್ನು ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡವು (Karnataka Cricket Team) ಕೂಡಾ ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೌರಾಷ್ಟ್ರ ಕ್ರಿಕೆಟ್ ತಂಡವನ್ನು ಎದುರಿಸಲಿದೆ.

click me!