Syed Mushtaq Ali Trophy: ಫೈನಲ್‌ಗಾಗಿಂದು ಕರ್ನಾಟಕ-ವಿದರ್ಭ ಸೆಣಸಾಟ

By Suvarna NewsFirst Published Nov 20, 2021, 10:43 AM IST
Highlights

* ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮೀಸ್‌ನಲ್ಲಿಂದು ಕರ್ನಾಟಕ-ವಿದರ್ಭ ಸೆಣಸಾಟ

* ಫೈನಲ್‌ ಸ್ಥಾನದ ಮೇಲೆ ಚಿತ್ತ ನೆಟ್ಟಿದೆ ಮನೀಶ್ ಪಾಂಡೆ ಬಳಗ

* ಮೊದಲ ಸೆಮೀಸ್‌ನಲ್ಲಿ ತಮಿಳುನಾಡಿಗೆ ಸಾಧಾರಣ ಗುರಿ ನೀಡಿದ ಹೈದರಾಬಾದ್

ನವದೆಹಲಿ(ನ.20): ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಸೂಪರ್‌ ಓವರ್‌ನಲ್ಲಿ ಗೆದ್ದು ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿಯನ್ನು (Syed Mushtaq Ali Trophy) ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ಕರ್ನಾಟಕ, ಶನಿವಾರ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೆಣಸಲಿದೆ.

ಮನೀಶ್‌ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ತಂಡಕ್ಕೆ (Karnataka Cricket Team) ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ವಿದರ್ಭದ ಅಥರ್ವ ತೈಡೆ, ಗಣೇಶ್‌ ಸತೀಶ್‌, ನಾಯಕ ಅಕ್ಷಯ್‌ ವಾಡ್ಕರ್‌ ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ನರ್‌ಗಳಾದ ಅಕ್ಷಯ್‌ ಕರ್ನೇವಾರ್‌ ಹಾಗೂ ಅಕ್ಷರ್‌ ವಾಖರೆ ಎದುರು ಮೇಲುಗೈ ಸಾಧಿಸಿದರಷ್ಟೇ ಕರ್ನಾಟಕ ಯಶಸ್ಸು ಗಳಿಸಬಹುದು. ಪಾಂಡೆ, ಕರುಣ್‌ ನಾಯರ್‌ (Karun Nair), ರೋಹನ್‌ ಕದಂ ಜವಾಬ್ದಾರಿಯುತ ಇನ್ನಿಂಗ್ಸ್‌ ಕಟ್ಟಬೇಕಿದೆ. ಅಭಿನವ್‌ ಮನೋಹರ್‌ರಿಂದ ಮತ್ತೊಂದು ಸ್ಫೋಟಕ ಇನ್ನಿಂಗ್ಸ್‌ ಅನ್ನು ರಾಜ್ಯ ತಂಡ ನಿರೀಕ್ಷೆ ಮಾಡುತ್ತಿದೆ.

Syed Mushtaq Ali Trophy: ಸೂಪರ್ ಓವರ್ ಗೆದ್ದು, ಸೆಮೀಸ್‌ಗೆ ಎಂಟ್ರಿ ಕೊಟ್ಟ ಕರ್ನಾಟಕ ಹುಡುಗರು

ಯುವ ವೇಗಿಗಳಾದ ವೈಶಾಖ್‌, ವಿದ್ಯಾಧರ್‌ ಹಾಗೂ ದರ್ಶನ್‌ ಜೊತೆ ಸ್ಪಿನ್ನರ್‌ಗಳಾದ ಸುಚಿತ್‌ ಹಾಗೂ ಕೆ.ಸಿ.ಕರಿಯಪ್ಪ ತಂಡಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಬೇಕು. ಪ್ರಮುಖ ಆಟಗಾರರ ಸೇವೆ ಲಭ್ಯವಾಗದಿದ್ದರೂ ಕರ್ನಾಟಕ ಎಲ್ಲಾ ಅಡೆತಡೆಗಳನ್ನು ಮೀರಿ ಸೆಮೀಸ್‌ ಪ್ರವೇಶಿಸಿದೆ. ತಂಡ ಫೈನಲ್‌ಗೇರುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದೆ.

ಪಂದ್ಯ ಆರಂಭ: 
ಕರ್ನಾಟಕ-ವಿದರ್ಭ, ಮಧ್ಯಾಹ್ನ 1.30ಕ್ಕೆ

ಮೊದಲ ಸೆಮೀಸ್‌ನಲ್ಲಿ ತಮಿಳುನಾಡಿಗೆ ಸಾಧಾರಣ ಗುರಿ

ದೆಹಲಿ: ದಕ್ಷಿಣ ಭಾರತದ ಎರಡು ಬಲಾಢ್ಯ ತಂಡಗಳೆಂದು ಗುರುತಿಸಿಕೊಂಡಿರುವ ತಮಿಳುನಾಡು ಹಾಗೂ ಹೈದರಾಬಾದ್ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, ಹೈದರಾಬಾದ್ ತಂಡವು ಕೇವಲ 90 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ, ತಮಿಳುನಾಡು ತಂಡಕ್ಕೆ ಸಾಧಾರಣ ಗುರಿ ನೀಡಿದೆ.

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ತಮಿಳುನಾಡು ತಂಡದ ನಾಯಕ ವಿಜಯ್ ಶಂಕರ್ ಮೊದಲು ಬೌಲಿಂಗ್‌ ಮಾಡುವ ತೀರ್ಮಾನವನ್ನು ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ತಮಿಳುನಾಡು ಬೌಲರ್‌ಗಳು ನೆರೆಯ ಹೈದರಾಬಾದ್ ಬ್ಯಾಟರ್‌ಗಳನ್ನು ಪೆವಿಲಿಯನ್ ಪೆರೆಡ್ ಮಾಡುವಂತೆ ಮಾಡಿದರು.

India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್‌

ಶರವಣ ಕುಮಾರ್ ಬೌಲಿಂಗ್ ಎದುರು ಹೈದರಾಬಾದ್ ಬ್ಯಾಟರ್‌ಗಳು ತತ್ತರಿಸಿ ಹೋದರು. ಒಂದು ಹಂತದಲ್ಲಿ ಹೈದರಾಬಾದ್ ತಂಡವು ಕೇವಲ 44 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಕಂಗಾಲಾಗಿ ಹೋಗಿತ್ತು. ಆದರೆ ತಾನ್ಯ ತಂಗರಾಜನ್ 24 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 25 ರನ್‌ ಬಾರಿಸುವ ಮೂಲಕ ಹೈದರಾಬಾದ್ ತಂಡವನ್ನು 100ರ ಗಡಿಯತ್ತ ಕೊಂಡೊಯ್ದರು.  

ಇನ್ನು ತಮಿಳುನಾಡು ಪರ ಶರವಣ ಕುಮಾರ್ 3.3 ಓವರ್‌ಗಳಲ್ಲಿ 2 ಮೇಡನ್ ಓವರ್‌ ಸಹಿತ 21 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಮುರುಗನ್ ಅಶ್ವಿನ್ ಹಾಗೂ ಎಂ ಮೊಹಮ್ಮದ್ ತಲಾ ಎರಡು ವಿಕೆಟ್ ಪಡೆದರೆ, ಸಾಯಿ ಕಿಶೋರ್ ಒಂದು ವಿಕೆಟ್ ಕಬಳಿಸಿದರು.

ಸಾಧಾರಣ ಗುರಿ ಬೆನ್ನತ್ತಿರುವ ತಮಿಳುನಾಡು ತಂಡ ಕೂಡಾ ಆರಂಭಿಕ ಆಘಾತ ಅನುಭವಿಸಿದ್ದು, ಮೂರು ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು ಕೇವಲ 20 ರನ್ ಬಾರಿಸಿದ್ದು, ಫೈನಲ್ ಪ್ರವೇಶಿಸಬೇಕಿದ್ದರೇ ಇನ್ನೂ 71 ರನ್ ಬಾರಿಸಬೇಕಿದೆ.
 

click me!