
ಸೂರತ್[ನ.29]: ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ಹರ್ಯಾಣ ತಂಡವನ್ನು 8 ವಿಕೆಟ್ ವಿಕೆಟ್’ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಹರ್ಯಾಣ ಗೆಲುವಿನ ನಾಗಾಲೋಟಕ್ಕೆ ತೆರೆಬಿದ್ದಿದೆ. 195 ರನ್ಗಳ ಗುರಿಯನ್ನು ಇನ್ನೂ 5 ಓವರ್ ಬಾಕಿ ಇರುವಂತೆಯೇ ಗೆಲುವು ದಾಖಲಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಮನೀಶ್ ಪಾಂಡೆ ಪಡೆ ಹೊಸ ದಾಖಲೆ ಬರೆದಿದೆ.
ಮುಷ್ತಾಕ್ ಅಲಿ ಟ್ರೋಫಿ: ಮಿಥುನ್ ಹ್ಯಾಟ್ರಿಕ್, ಆದರೂ ಕರ್ನಾಟಕಕ್ಕೆ ಕಠಿಣ ಗುರಿ
ಹರ್ಯಾಣ ನೀಡಿದ್ದ 195 ರನ್’ಗಳ ಗುರಿ ಕರ್ನಾಟಕದ ಪಾಲಿಗೆ ಸವಾಲಾಗಲೇ ಇಲ್ಲ. ಕೆ.ಎಲ್. ರಾಹುಲ್[66] ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್’ಗೆ 9.3 ಓವರ್’ಗಳಲ್ಲಿ 125 ರನ್’ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿದರು. ರಾಹುಲ್-ಪಡಿಕ್ಕಲ್ ಜೋಡಿ ಹರ್ಯಾಣ ಬೌಲರ್’ಗಳನ್ನು ಇನ್ನಿಲ್ಲದಂತೆ ಕಾಡಿದರು. ರಾಹುಲ್ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಮನಮೋಹಕ ಸಿಕ್ಸರ್’ಗಳ ನೆರವಿನಿಂದ 66 ರನ್ ಬಾರಿಸಿ ಜಯಂತ್ ಯಾದವ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಮಯಾಂಕ್ ಕೂಡಿಕೊಂಡ ದೇವದತ್ ಮಿಂಚಿನ ಬ್ಯಾಟಿಂಗ್ ಮುಂದುವರೆಸಿದರು. ವೃತ್ತಿಜೀವನದ ಅದ್ಭುತ ಫಾರ್ಮ್’ನಲ್ಲಿರುವ ದೇವದತ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದರು. ಅಂತಿಮವಾಗಿ ಪಡಿಕ್ಕಲ್ 42 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 87 ರನ್ ಬಾರಿಸಿ ಹರ್ಷಲ್ ಪಟೇಲ್’ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಮನೀಶ್ ಪಾಂಡೆ, ಮಯಾಂಕ್ ಅಗರ್’ವಾಲ್ ತಂಡವನ್ನು ಇನ್ನೂ 5 ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಹರ್ಯಾಣ ಚೈತನ್ಯ ಬಿಷ್ಣೋಯಿ[55], ಹಿಮಾಂಶು ರಾಣಾ[61] ಅರ್ಧಶತಕಗಳ ನೆರವಿನಿಂದ 194 ರನ್ ಬಾರಿಸಿತ್ತು. ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಹಿತ ಒಂದೇ ಓವರ್’ನಲ್ಲಿ 5 ವಿಕೆಟ್ ಪಡೆದು ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.