ಐರ್ಲೆಂಡ್ ಪ್ರವಾಸಕ್ಕೆ ಈ ಆಟಗಾರ ಭಾರತ ತಂಡದಲ್ಲಿರಬೇಕಿತ್ತು: ಸುನಿಲ್ ಗವಾಸ್ಕರ್

By Naveen KodaseFirst Published Jun 21, 2022, 4:36 PM IST
Highlights

* ಐರ್ಲೆಂಡ್ ಎದುರು ಟಿ20 ಸರಣಿಯನ್ನಾಡಲು ಸಜ್ಜಾದ ಟೀಂ ಇಂಡಿಯಾ
* ಐರ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ರಾಹುಲ್ ತೆವಾಟಿಯಾ
* ಇದೇ ಜೂನ್ 26 ಹಾಗೂ 28ರಂದು ಐರ್ಲೆಂಡ್ ಎದುರು ಟಿ20 ಸರಣಿಯನ್ನಾಡಲಿರುವ ಭಾರತ

ನವದೆಹಲಿ(ಜೂ.21): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾದ ಐರ್ಲೆಂಡ್‌ ಪ್ರವಾಸದತ್ತ ನೆಟ್ಟಿದೆ. ಇದೇ ಜೂನ್ 26 ಹಾಗೂ 28ರಂದು ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ (Team India), ಐರ್ಲೆಂಡ್ ಎದುರು ಎರಡು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗೆ 17 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ (Hardik Pandya) ನೇಮಕವಾಗಿದ್ದಾರೆ. ಇನ್ನು ಐರ್ಲೆಂಡ್ ಪ್ರವಾಸಕ್ಕೆ ಭಾರತದ ಪ್ರತಿಭಾನ್ವಿತ ಆಲ್ರೌಂಡರ್ ರಾಹುಲ್ ತೆವಾಟಿಯಾ (Rahul Tewatia) ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ (BCCI) ಆಯ್ಕೆ ಸಮಿತಿಯು 17 ಯುವ ಆಟಗಾರರಿಗೆ ಮಣೆ ಹಾಕಿದೆ. ಆದರೆ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದ ರಾಹುಲ್ ತೆವಾಟಿಯಾ ಅವರಿಗೆ ಸ್ಥಾನ ಸಿಗದೇ ಹೋದದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಈ ಕುರಿತಂತೆ ಇದೀಗ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ತುಟಿಬಿಚ್ಚಿದ್ದಾರೆ.

ರಾಹುಲ್ ತೆವಾಟಿಯಾ, ಒಂದು ರೀತಿ ಐಸ್ ಮ್ಯಾನ್. 15 ಆಟಗಾರರನ್ನು ಆಯ್ಕೆ ಮಾಡುವಾಗ ಕೊಂಚ ಸವಾಲಾಗಬಹುದೇನೋ. ಆದರೆ 15ರ ಬದಲಾಗಿ 17 ಆಟಗಾರರನ್ನು ಆಯ್ಕೆ ಮಾಡಿಕೊಂಡಾಗ ಸಾಕಷ್ಟು ಸಮಯದಿಂದ ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವವರನ್ನು ಕೈಬಿಡಬಾರದು. ಅವರು ಅದ್ಭುತ ಆಟಗಾರ. ಸೋಲುವಂತಿದ್ದ ಕೆಲ ಪಂದ್ಯಗಳನ್ನು ಅವರು ಗೆಲ್ಲಿಸಿಕೊಟ್ಟಿದ್ದಾರೆ. ಅವರು ಮೈದಾನಕ್ಕಿಳಿದು ಸಾಕಷ್ಟು ಬುದ್ದಿವಂತಿಕೆಯಿಂದಲೇ ಚೆಂಡನ್ನು ನಾನಾ ಮೂಲೆಗಳಿಗೆ ಅಟ್ಟುತ್ತಿದ್ದರು. ಅವರು ಕೇವಲ ಆಫ್‌ ಸೈಡ್ ಮಾತ್ರವಲ್ಲದೇ ಆನ್‌ ಸೈಡ್‌ನಲ್ಲೂ ರನ್ ಗಳಿಸುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಚೊಚ್ಚಲ ಬಾರಿಗೆ ಟೀಂ ಇಂಡಿಯಾ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆ..!

ಯಾರಾದರೂ ಈ ರೀತಿ ಕ್ರಿಕೆಟ್‌ನಲ್ಲಿ ಮನೋಧರ್ಮ ಹೊಂದಿದ್ದಾರೆ ಎಂದಾದರೇ ನೀವು ಆತನನ್ನು 16ನೇ ಆಟಗಾರನನ್ನಾಗಿಯಾದರೂ ಐರ್ಲೆಂಡ್ ಪ್ರವಾಸಕ್ಕೆ ಕೊಂಡೊಯ್ಯಬೇಕಿತ್ತು. ಈ ಮೂಲಕ ನೀನು ಮತ್ತಷ್ಟು ಕಠಿಣ ಪರಿಶ್ರಮ ಪಡು. ನೀನೂ ಕೂಡಾ ನಮ್ಮ ಗಮನದಲ್ಲಿದ್ದೀಯಾ ಎನ್ನುವ ಸಂದೇಶ ರವಾನಿಸುವುದಕ್ಕಾದರೂ ಆತನನ್ನು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಐರ್ಲೆಂಡ್ ಎದುರಿನ 2 ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ (Indian Cricket Team) ಪ್ರಕಟವಾದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ರಾಹುಲ್ ತೆವಾಟಿಯಾ, ನಿರೀಕ್ಷೆಗಳು ನೋವನ್ನುಂಟು ಮಾಡುತ್ತವೆ (Expectations hurt) ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

ಐರ್ಲೆಂಡ್ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ ನೋಡಿ

ಹಾರ್ದಿಕ್ ಪಾಂಡ್ಯ(ನಾಯಕ), ಭುವನೇಶ್ವರ್ ಕುಮಾರ್(ಉಪನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್.

click me!