ವಾಹನ ಚಾಲ​ಕನ ಮಗ ಈಗ ಅಂಡರ್-19 ವಿಶ್ವ​ಕಪ್‌ ತಂಡದ ನಾಯ​ಕ!

By Kannadaprabha NewsFirst Published Dec 4, 2019, 12:34 PM IST
Highlights

ಕಠಿಣ ಪ್ರಯತ್ನ, ಶ್ರದ್ಧೆಯಿದ್ದರೂ ಯಾವುದೂ ಅಸಾಧ್ಯವಲ್ಲ ಎನ್ನುವ ಮತ್ತೊಂದು ಉದಾಹರಣೆಗೆ ಪ್ರಿಯಂ ಗರ್ಗ್‌ ಸಾಕ್ಷಿಯಾಗಿದ್ದಾರೆ. ಇದೀಗ ಪ್ರಿಯಂ ಗರ್ಗ್‌ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಕಡುಬಡತನದಲ್ಲಿ ಅಳಸಿದ ಗರ್ಗ್ ಬಗೆಗಿನ ಸ್ಫೂರ್ತಿದಾಯಕ ಕಥೆ ಇಲ್ಲಿದೆ ನೋಡಿ..

ಲಖ​ನೌ[ಡಿ.04]: ಕ್ರಿಕೆಟ್‌ ಕಿಟ್‌ ಖರೀ​ದಿ​ಸಲು ಸಹ ಹಣ​ವಿ​ಲ್ಲ​ದ ಕುಟುಂಬದ ಬಾಲ​ಕ​ನೊಬ್ಬ ಐಸಿಸಿ ಅಂಡರ್‌-19 ಕ್ರಿಕೆಟ್‌ ವಿಶ್ವ​ಕಪ್‌ನಲ್ಲಿ ಭಾರ​ತ ತಂಡ​ವನ್ನು ಮುನ್ನ​ಡೆ​ಸ​ಲಿ​ದ್ದಾನೆ. ಸೋಮ​ವಾರ ಬಿಸಿ​ಸಿಐ, 2020ರ ವಿಶ್ವ​ಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಿತು. ಉತ್ತರ ಪ್ರದೇ​ಶದ ಪ್ರಿಯಂ ಗರ್ಗ್‌ರನ್ನು ನಾಯ​ಕ​ನ​ನ್ನಾಗಿ ಹೆಸ​ರಿ​ಸಿತು. 

ಅಂಡರ್ 19 ವಿಶ್ವಕಪ್: ಭಾರತ ತಂಡದಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ!

ಕಳೆದ ರಣಜಿ ಋುತು​ವಿ​ನಲ್ಲಿ ಉತ್ತರ ಪ್ರದೇಶ ಪರ ಗರಿಷ್ಠ ರನ್‌ ಕಲೆಹಾಕಿದ್ದ ಪ್ರಿಯಂ, ಭಾರ​ತೀಯ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಸುದ್ದಿ​ಯೇನು ಆಗಿ​ರ​ಲಿಲ್ಲ. ಆದರೆ ವಿಶ್ವ​ಕಪ್‌ ತಂಡದ ನಾಯ​ಕ​ನಾ​ಗು​ತ್ತಿ​ದ್ದಂತೆ ಅವರ ಕ್ರಿಕೆಟ್‌ ಬದು​ಕಿನ ಹಲವು ರೋಚಕ ಕಥೆಗಳು ಹೊರ​ಬೀ​ಳು​ತ್ತಿವೆ. ಅವು ಹಲವು ಯುವ ಕ್ರಿಕೆ​ಟಿ​ಗ​ರಿಗೆ ಸ್ಫೂರ್ತಿಯಾಗ​ಲಿದೆ.

IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ!

ಪ್ರಿಯಂ ಮೀರಠ್‌ ಸಮೀ​ಪದ ಕ್ವಿಲಾ ಪರೀ​ಕ್ಷಿತ್‌ಗಢ ಎಂಬ ಊರಿ​ನ​ವರು. 6ನೇ ವಯ​ಸ್ಸಿ​ನಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ ಬ್ಯಾಟ್‌ ಹಾಗೂ ಬಾಲ್‌ ಹಿಡಿದ ಪ್ರಿಯಂರ ತಂದೆ ಶಾಲಾ ವಾಹನ ಚಾಲಕ. ‘ನನ್ನ ತಂದೆ ನರೇಶ್‌ ಗರ್ಗ್‌ ಶಾಲಾ ವಾಹನ ಚಲಾ​ಯಿ​ಸು​ತ್ತಾರೆ. ಜೀವನ ನಿರ್ವಹಣೆಗಾಗಿ ಹಾಲು ಮಾರುತ್ತಾರೆ. ನನಗೆ ಒಬ್ಬ ಅಣ್ಣ ಹಾಗೂ ಮೂವರು ಅಕ್ಕಂದಿ​ರಿ​ದ್ದಾರೆ. ಕುಟುಂಬದಲ್ಲೇ ನಾನೇ ಕಿರಿಯ. ನಮ್ಮ ದೊಡ್ಡ ಕುಟುಂಬವನ್ನು ನಿಭಾ​ಯಿ​ಸಲು ಹಾಗೂ ನನ್ನ ಕ್ರಿಕೆಟ್‌ ವೃತ್ತಿ​ಬ​ದು​ಕಿಗೆ ನೆರ​ವಾ​ಗಲು ತಂದೆ ಬಳಿ ಹಣ​ವಿ​ರ​ಲಿ​ಲ್ಲ. ಆದರೆ ಕ್ರಿಕೆಟ್‌ ಮೇಲೆ ನನ್ನ​ಗಿ​ರುವ ಪ್ರೀತಿ ಹಾಗೂ ಶ್ರದ್ಧೆಯನ್ನು ನೋಡಿ, ಸ್ನೇಹಿತರಿಂದ ಸಾಲ ಪಡೆದು ನನಗೆ ಕ್ರಿಕೆಟ್‌ ಕಿಟ್‌ ಕೊಡಿ​ಸಿ​ದರು ಕೋಚಿಂಗ್‌ಗೂ ಸೇರಿ​ಸಿ​ದರು. ನನ್ನ ತಂದೆಯ ಪರಿ​ಶ್ರ​ಮದಿಂದಾಗಿ ನಾನು ಅಂಡರ್‌-19 ತಂಡದ ನಾಯ​ಕ​ನಾ​ಗಿ​ದ್ದೇನೆ’ ಎಂದು ಪ್ರಿಯಂ ಹೇಳಿ​ದ್ದಾರೆ.

ಅಂಡರ್-19 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಯಾರಿಗೆಲ್ಲ ಚಾನ್ಸ್..?

2011ರಲ್ಲಿ ತಾಯಿ​ಯನ್ನು ಕಳೆ​ದು​ಕೊಂಡ ಪ್ರಿಯಂ, ಮಾನ​ಸಿಕ ಒತ್ತಡಗಳನ್ನು ಮೀರಿ ಕ್ರಿಕೆಟ್‌ನತ್ತ ಗಮನ ಹರಿ​ಸಲು ಹೆಚ್ಚಿನ ಶ್ರಮ ವಹಿ​ಸಿ​ದ್ದಾಗಿ ಹೇಳಿ​ದ್ದಾರೆ. 2018ರ ರಣಜಿ ಟ್ರೋಫಿ​ಯಲ್ಲಿ ಪದಾ​ರ್ಪಣಾ ಪಂದ್ಯ​ದಲ್ಲೇ ಶತಕ ಬಾರಿ​ಸಿದ್ದ ಪ್ರಿಯಂ, ಲಿಸ್ಟ್‌ ‘ಎ’ (ಏ​ಕ​ದಿ​ನ) ಮಾದರಿಯಲ್ಲೂ ಶತಕ ಬಾರಿ​ಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಆಗಿ​ರುವ ಪ್ರಿಯಂ ಇತ್ತೀ​ಚೆಗೆ ನಡೆದ ದೇವ​ದರ್‌ ಟ್ರೋಫಿ ಟೂರ್ನಿ​ಯಲ್ಲಿ ಭಾರತ ‘ಸಿ’ ತಂಡ​ದ​ಲ್ಲಿ​ದ್ದರು. ‘ಶಾಲೆಗೆ ಹೋಗು​ತ್ತಿದ್ದ ಸಮ​ಯ​ದಲ್ಲೂ ದಿನಕ್ಕೆ 7ರಿಂದ 8 ಗಂಟೆ ಅಭ್ಯಾಸ ನಡೆ​ಸು​ತ್ತಿದ್ದೆ. ನನ್ನ ಕೋಚ್‌ ಸಂಜಯ್‌ ರಸ್ತೋಗಿ ಹಾಗೂ ತಂದೆಯ ನೆರ​ವಿ​ನಿಂದ 2018ರಲ್ಲಿ ಉತ್ತರ ಪ್ರದೇಶ ರಣ​ಜಿ ತಂಡಕ್ಕೆ ಆಯ್ಕೆಯಾದೆ’ ಎಂದು ಪ್ರಿಯಂ ಹಳೆಯ ನೆನ​ಪು​ಗ​ಳನ್ನು ಮೆಲುಕು ಹಾಕಿ​ದ್ದಾರೆ.

ಭುವಿ, ರೈನಾ ನೆರವು

ಉತ್ತರ ಪ್ರದೇ​ಶದ ತಾರಾ ಆಟ​ಗಾ​ರ​ರಾದ ಭುವ​ನೇ​ಶ್ವರ್‌ ಕುಮಾರ್‌ ಹಾಗೂ ಸುರೇಶ್‌ ರೈನಾ ಸಹ ಪ್ರಿಯಂ ಕ್ರಿಕೆಟ್‌ ಪಯಣದಲ್ಲಿ ನೆರ​ವಾ​ಗಿ​ದ್ದಾರೆ. ಭುವ​ನೇ​ಶ್ವರ್‌ರ ಬಾಲ್ಯದ ಕೋಚ್‌ ನಡೆ​ಸುವ ಅಕಾ​ಡೆ​ಮಿ​ಯಲ್ಲೇ ಪ್ರಿಯಂ ಸಹ ತರ​ಬೇತಿ ಪಡೆ​ಯು​ತ್ತಿ​ದ್ದರು. ಪ್ರಿಯಂಗೆ 15 ವರ್ಷ ವಯ​ಸ್ಸಿ​ದ್ದಾಗ ಒಮ್ಮೆ ಭುವ​ನೇ​ಶ್ವರ್‌ ಬೌಲ್‌ ಮಾಡು​ವಾಗ ಕ್ರೀಸ್‌ನಿಂದ ಸ್ವಲ್ಪ ಮುಂದೆ ನಿಂತು ಬ್ಯಾಟ್‌ ಮಾಡು​ತ್ತಿ​ದ್ದರು. ಇದನ್ನು ಗಮನಿಸಿದ ಕೋಚ್‌ ಸಂಜಯ್‌ ಕಾರಣ ಕೇಳಿ​ದಾ​ಗ, ಭುವ​ನೇ​ಶ್ವರ್‌ರ ಸ್ವಿಂಗ್‌ ಬೌಲಿಂಗ್‌ ಎದು​ರಿ​ಸಲು ಕ್ರೀಸ್‌ನಿಂದ ಮುಂದೆ ನಿಂತು ಆಡುತ್ತಿರು​ವು​ದಾಗಿ ಹೇಳಿ​ದ್ದರು. ಚಿಕ್ಕ ವಯ​ಸ್ಸಿ​ನಲ್ಲೇ ಬ್ಯಾಟಿಂಗ್‌ನ ತಾಂತ್ರಿಕ ಅಂಶಗಳನ್ನು ತಿಳಿ​ದು​ಕೊಂಡಿದ್ದ ಪ್ರಿಯಂ ಬಗ್ಗೆ ಭುವ​ನೇ​ಶ್ವರ್‌ ಸಹ ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ್ದರು. ಬಿಡು​ವಿನ ಸಮ​ಯ​ದಲ್ಲಿ ಅಕಾ​ಡೆ​ಮಿಯ ನೆಟ್ಸ್‌ನಲ್ಲಿ ಪ್ರಿಯಂ ಜತೆ ಭುವ​ನೇ​ಶ್ವರ್‌ ಸಹ ಅಭ್ಯಾಸ ನಡೆ​ಸು​ತ್ತಾರೆ ಎಂದು ಕೋಚ್‌ ಸಂಜಯ್‌ ಹೇಳಿ​ದ್ದಾರೆ. ಕಳೆದ ರಣಜಿ ಋುತು​ವಿ​ನಲ್ಲಿ ಉತ್ತರ ಪ್ರದೇ​ಶ ತಂಡದ ಪರ ಆಡು​ವಾಗ ಸುರೇಶ್‌ ರೈನಾ, ಪ್ರಿಯಂ ಜತೆ ಹೆಚ್ಚಿನ ಸಮಯ ಕಳೆದು ಕೆಲ ಮಹ​ತ್ವದ ಸಲ​ಹೆಗಳನ್ನು ನೀಡಿ​ದ್ದರು. ಈಗಲೂ ಬ್ಯಾಟಿಂಗ್‌ ಸಲಹೆಗಳಿಗೆ ರೈನಾರನ್ನು ಸಂಪ​ರ್ಕಿ​ಸು​ವು​ದಾಗಿ ಪ್ರಿಯಂ ಹೇಳಿ​ಕೊಂಡಿ​ದ್ದಾರೆ.
 

click me!