Ashes 2021: ಆಸ್ಟ್ರೇಲಿಯಾ ಟೆಸ್ಟ್‌ ತಂಡಕ್ಕೆ ಮತ್ತೆ ಸ್ಟೀವ್ ಸ್ಮಿತ್‌ ನಾಯಕ ?

By Suvarna NewsFirst Published Nov 21, 2021, 12:08 PM IST
Highlights

* ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಟೆಸ್ಟ್‌ ತಂಡದ ನಾಯಕರಾಗುವ ಸಾಧ್ಯತೆ

* ಆ್ಯಷಸ್‌ ಸರಣಿಗೂ ಮುನ್ನ ಟಿಮ್ ಪೈನ್‌ ನಾಯಕತ್ವಕ್ಕೆ ವಿದಾಯ ಹೇಳಿದ್ದರು

* ಹೊಸ ನಾಯಕನ ಹುಡುಕಾಟದಲ್ಲಿದೆ ಕ್ರಿಕೆಟ್ ಆಸ್ಟ್ರೇಲಿಯಾ

ಮೆಲ್ಬರ್ನ್(ನ.21)‌: ಆಸ್ಪ್ರೇಲಿಯಾ ಟೆಸ್ಟ್‌ ತಂಡದ ಮಾಜಿ ನಾಯಕ ಸ್ವೀವ್‌ ಸ್ಮಿತ್‌ (Steve Smith) ಮತ್ತೊಮ್ಮೆ ಟೆಸ್ಟ್‌ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆ್ಯಷಸ್‌ ಸರಣಿ (Ashes Test Series) ಕೆಲವೇ ದಿನಗಳು ಬಾಕಿ ಇರುವಾಗಲೇ ಟಿಮ್ ಪೈನ್ (Tim Paine) ಆಸೀಸ್ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದರು. 

ಶನಿವಾರ ಈ ಬಗ್ಗೆ ತಂಡದ ಆಯ್ಕೆ ಸಮಿತಿಯು ಆಡಳಿತ ಮಂಡಳಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಸ್ಮಿತ್‌ ಅವರಿಗೆ ನಾಯಕತ್ವ ವಹಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ, ಆ್ಯಷಸ್‌ ಸರಣಿಗೆ ತಂಡದ ಉಪನಾಯಕನಾಗಿ ಆಯ್ಕೆಯಾಗಿರುವ ವೇಗಿ ಪ್ಯಾಟ್‌ ಕಮಿನ್ಸ್‌ಗೆ ತಂಡದ ನಾಯಕತ್ವ ವಹಿಸಿ, ಸ್ಮಿತ್‌ಗೆ ಉಪನಾಯಕನ ಪಟ್ಟವಹಿಸುವ ಸಾಧ್ಯತೆಯೂ ಇದೆ ಎಂದು ಗೊತ್ತಾಗಿದೆ.

ಈ ಮೊದಲು ತಂಡದ ನಾಯಕನಾಗಿದ್ದ ಸ್ಮಿತ್‌ ಚೆಂಡು ವಿರೂಪ ಪ್ರಕರಣದಲ್ಲಿ (Ball Tampering Scandal) ನಿಷೇಧಕ್ಕೊಳಗಾದ ಬಳಿಕ 2018ರಲ್ಲಿ ಟಿಮ್‌ ಪೈನ್‌ ತಂಡದ ನಾಯಕನಾಗಿದ್ದರು. ಆದರೆ ಮಹಿಳಾ ಸಿಬ್ಬಂದಿಗೆ ಅಶ್ಲೀಲ ಸಂದೇಶ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಶುಕ್ರವಾರವಷ್ಟೇ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಕಾರಣ, ಕ್ರಿಕೆಟ್‌ ಆಸ್ಪ್ರೇಲಿಯಾ ಹೊಸ ನಾಯಕನ ಹುಡುಕಾಟದಲ್ಲಿದೆ.

Sexting Scandal: ಆಸೀಸ್‌ ಟೆಸ್ಟ್ ನಾಯಕತ್ವಕ್ಕೆ ಟಿಮ್ ಪೈನ್‌ ದಿಢೀರ್ ರಾಜೀನಾಮೆ..!

ಕರ್ನಾಟಕದ ಚೊಚ್ಚಲ ಪ್ರಶಸ್ತಿ ಕನಸು ನುಚ್ಚುನೂರು

ಬೆಂಗಳೂರು: ಭಾರತ ತಂಡದಲ್ಲಿ ಆಡುವ ಬಹುತೇಕ ಆಟಗಾರ್ತಿಯರನ್ನು ಹೊಂದಿರುವ ಮಿಥಾಲಿ ರಾಜ್‌ ನೇತೃತ್ವದ ರೈಲ್ವೇಸ್‌ ತಂಡ 13ನೇ ಬಾರಿಗೆ ರಾಷ್ಟ್ರೀಯ ಹಿರಿಯ ಮಹಿಳಾ ಏಕದಿನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಚೊಚ್ಚಲ ಬಾರಿಗೆ ಫೈನಲ್‌ ಪ್ರವೇಶಿಸಿದ್ದ ಕರ್ನಾಟಕ, 8 ವಿಕೆಟ್‌ಗಳ ಸೋಲು ಕಾಣುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದ ಕರ್ನಾಟಕ, ಫೈನಲ್‌ನಲ್ಲಿ ಕಳಪೆ ಬ್ಯಾಟಿಂಗ್‌ನಿಂದಾಗಿ ಮುಗ್ಗರಿಸಿತು.

Syed Mushtaq Ali Trophy: ವಿದರ್ಭ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕದ ಹುಡುಗರು..!

ಮೋಡ ಕವಿದ ವಾತಾವರವಿದ್ದ ಕಾರಣ ಟಾಸ್‌ ಗೆದ್ದ ರೈಲ್ವೇಸ್‌, ಕರ್ನಾಟಕವನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ರೈಲ್ವೇಸ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಕರ್ನಾಟಕ 38 ಓವರಲ್ಲಿ ಕೇವಲ 78 ರನ್‌ಗೆ ಆಲೌಟ್‌ ಆಯಿತು. ಸುಲಭ ಗುರಿಯನ್ನು ರೈಲ್ವೇಸ್‌ 22.2 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು ಬೆನ್ನತ್ತಿತು. ಎಸ್‌.ಮೇಘನಾ 36, ನುಜ್ಹತ್‌ ಪರ್ವಿನ್  ಔಟಾಗದೆ 20, ಡಿ.ಹೇಮಲತಾ ಔಟಾಗದೆ 17 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ರೇಣುಕಾ ಸಿಂಗ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ಕರ್ನಾಟಕ 28 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತು. 51 ರನ್‌ ಗಳಿಸುವಷ್ಟರಲ್ಲಿ 8 ವಿಕೆಟ್‌ ಪತನಗೊಂಡವು. ನಿಕಿ ಪ್ರಸಾದ್‌ 21 ರನ್‌ ಗಳಿಸಿದರು. ಮೇಘನಾ ಸಿಂಗ್‌, ಸ್ನೇಹ್‌ ರಾಣಾ, ಸ್ವಾಗತಿಕಾ ರಥ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌: 
ಕರ್ನಾಟಕ 38 ಓವರಲ್ಲಿ 78/10(ನಿಕಿ 21, ಕೆ.ಪ್ರತ್ಯೂಷಾ 16, ರೇಣುಕಾ 4-14) 
ರೈಲ್ವೇಸ್‌ 22.2 ಓವರಲ್ಲಿ 76/2(ಮೇಘನಾ 36, ಸಹನಾ 1-19)

ಬಾಂಗ್ಲಾ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ

ಢಾಕಾ: ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಪಾಕಿಸ್ತಾನ ತಂಡ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ವಶಪಡಿಸಿಕೊಂಡಿದೆ. ಶನಿವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್‌ ಭರ್ಜರಿ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಅತಿಥೇಯ ಬಾಂಗ್ಲಾ 7 ವಿಕೆಟ್‌ ಕಳೆದುಕೊಂಡು ಕೇವಲ 108 ರನ್‌ ಗಳಿಸಿತು. ಪಾಕಿಸ್ತಾನ 18.1 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು. ಮೊಹಮದ್‌ ರಿಜ್ವಾನ್‌ 39 ಹಾಗೂ ಫಖರ್‌ ಜಮಾನ್‌ ಔಟಾಗದೆ 57 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕೊನೆಯ ಪಂದ್ಯ ಸೋಮವಾರ ನಡೆಯಲಿದೆ.

click me!