
ಧರ್ಮಶಾಲಾ: ಮಳೆಬಾಧಿತ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಮಳೆಯಿಂದಾಗಿ ಪಂದ್ಯವನ್ನು ತಲಾ 25 ಓವರ್ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್ 24.5 ಓವರ್ಗಳಲ್ಲಿ 194 ರನ್ಗೆ ಆಲೌಟಾಯಿತು. ಆರಂಭಿಕ ಆಟಗಾರ ರಹ್ಮಾನುಲ್ಲಾ ಗುರ್ಬಾಜ್ ಕೇವಲ 51 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್ನೊಂದಿಗೆ 102 ರನ್ ಸಿಡಿಸಿದರು. ಆದರೆ ಇತರ ಆಟಗಾರರನ್ನು ಕ್ರೀಸ್ನಲ್ಲಿ ನೆಲೆಯೂರಲು ಭಾರತೀಯ ಬೌಲರ್ಸ್ ಬಿಡಲಿಲ್ಲ. ಓಮರ್ಜೈ 26, ನಾಯಕ ಹಶ್ಮತುಲ್ಲಾ 27 ರನ್ ಗಳಿಸಿದರು. ಪಾದಾರ್ಪಣಾ ಪಂದ್ಯದಲ್ಲೇ ಮಿಂಚಿದ ಸ್ಪಿನ್ನರ್ ಹರ್ಷ್ ದುಬೆ ಹಾಗೂ ವೇಗಿ ಗುರ್ನೂರ್ ಬ್ರಾರ್ ತಲಾ 3 ವಿಕೆಟ್ ಕಿತ್ತರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ 22.5 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ನಾಯಕ ಶುಭ್ಮನ್ ಗಿಲ್ 66 ಎಸೆತಕ್ಕೆ ಔಟಾಗದೆ 84 ರನ್ ಸಿಡಿಸಿದರೆ, ಕೆ.ಎಲ್.ರಾಹುಲ್ ಸ್ಫೋಟಕ ಆಟವಾಡಿ 19 ಎಸೆತಗಳಲ್ಲಿ ಔಟಾಗದೆ 39 ರನ್ ಗಳಿಸಿದರು. ಇಶಾನ್ ಕಿಶನ್ 34 ರನ್ ಕೊಡುಗೆ ನೀಡಿದರು.
ಸ್ಕೋರ್: ಅಫ್ಘಾನಿಸ್ತಾನ 24.5 ಓವರ್ನಲ್ಲಿ 194/10 (ಗುರ್ಬಾಜ್ 102, ಗುರ್ನೂರ್ 3-27, ಹರ್ಷ್ 3-47), ಭಾರತ 22.5 ಓವರ್ನಲ್ಲಿ 195/3 (ಗಿಲ್ ಔಟಾಗದೆ 84, ರಾಹುಲ್ ಔಟಾಗದೆ 39, ರಶೀದ್ 1-37)
ಪಂದ್ಯದಲ್ಲಿ ಗುರ್ಬಾಜ್ 48 ಎಸೆತಕ್ಕೆ ಶತಕ ಪೂರೈಸಿದರು. ಇದು ಭಾರತ ವಿರುದ್ಧ ಏಕದಿನದಲ್ಲಿ ದಾಖಲಾದ 2ನೇ ಅತಿ ವೇಗದ ಶತಕ. 2005ರಲ್ಲಿ ಕಾನ್ಪುರದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ 45 ಎಸೆತಗಳಲ್ಲೇ ಶತಕ ಸಿಡಿಸಿದ್ದು ಈಗಲೂ ದಾಖಲೆ. ಏಕದಿನದಲ್ಲಿ ಈ ಇಬ್ಬರು ಮಾತ್ರ ಭಾರತದ ವಿರುದ್ಧ 50ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
ಧರ್ಮಶಾಲಾ: ಮಾಜಿ ನಾಯಕ ರೋಹಿತ್ ಶರ್ಮಾ ಭಾರತದ ಪರ ಏಕದಿನ ಪಂದ್ಯ ಆಡಿದ ಅತಿ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶನಿವಾರ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು ಈ ಸಾಧನೆ ಮಾಡಿದರು. ಅವರಿಗೆ ಈಗ 39 ವರ್ಷ, 44 ದಿನ ವಯಸ್ಸು. ಈ ಹಿಂದೆ ಮೊಹಿಂದರ್ ಅಮರ್ನಾಥ್ ತಮಗೆ 39 ವರ್ಷ, 36 ದಿನಗಳಾಗಿದ್ದಾಗ ಭಾರತದ ಏಕದಿನ ತಂಡದ ಪರ ಆಡಿದ್ದರು. ಅವರನ್ನು ಈಗ ರೋಹಿತ್ ಹಿಂದಿಕ್ಕಿದ್ದಾರೆ.
ಧರ್ಮಶಾಲಾ: ಏಕದಿನ ಕ್ರಿಕೆಟ್ನಲ್ಲಿ 2ನೇ ಅತಿ ವೇಗವಾಗಿ 3000 ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ಶುಭ್ಮನ್ ಗಿಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು ಶನಿವಾರ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಈ ಮೈಲುಗಲ್ಲು ಸಾಧಿಸಿದರು.
ಗಿಲ್ 62 ಇನ್ನಿಂಗ್ಸ್ಗಳಲ್ಲಿ 3000 ರನ್ ಪೂರ್ಣಗೊಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲ 57 ಇನ್ನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದು, ಅತಿ ವೇಗದ 3000 ರನ್ ದಾಖಲೆ ಈಗಲೂ ಅವರ ಹೆಸರಲ್ಲೇ ಇದೆ. ಉಳಿದಂತೆ ವಿಂಡೀಸ್ನ ಶಾಯ್ ಹೋಪ್ 62, ಪಾಕಿಸ್ತಾನದ ಫಖರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ತಲಾ 67 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಈ ಮೈಲುಗಲ್ಲು ತಲುಪಲು 75 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ ಭಾರೀ ಮಳೆಯಿಂದಾಗಿ ಬರೋಬ್ಬರಿ 4 ಗಂಟೆಗೂ ಹೆಚ್ಚು ಕಾಲ ವಿಳಂಬಗೊಂಡಿತು. ಸಂಜೆ 5.15ಕ್ಕೆ ಟಾಸ್ ನಡೆಯಿತು. ಓವರ್ಗಳನ್ನು ಕಡಿತಗೊಳಿಸಿ ತಲಾ 25 ಓವರ್ ಆಟ ಆಡಿಸಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.