Ranji Trophy: ಕುಸಿದ ರಾಜ್ಯಕ್ಕೆ ಮಯಾಂಕ್‌ ಅಗರ್‌ವಾಲ್ ಶತಕದಾಸರೆ..!

By Naveen KodaseFirst Published Feb 9, 2023, 9:01 AM IST
Highlights

ಸೆಮಿಫೈನಲ್‌ನಲ್ಲಿ ಸೌರಾಷ್ಟ್ರ ಎದುರು ಶತಕ ಚಚ್ಚಿದ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್
ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 229 ರನ್‌ ಗಳಿಸಿದ ಕರ್ನಾಟಕ
ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಮಯಾಂಕ್‌ ಅಗರ್‌ವಾಲ್

ಬೆಂಗಳೂರು(ಫೆ.09): ನಾಯಕ ಮಯಾಂಕ್‌ ಅಗರ್‌ವಾಲ್‌ರ ತಾಳ್ಮೆಯುತ, ಅಜೇಯ ಶತಕದ ನೆರವಿನಿಂದ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಸೆಮಿಫೈನಲ್‌ನ ಮೊದಲ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್‌ಗೆ 229 ರನ್‌ ಕಲೆಹಾಕಿದೆ.

ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ, ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಕರ್ನಾಟಕ, ದಿನದಾಟದ ಮೊದಲ ಅವಧಿಯಲ್ಲಿ ಸೌರಾಷ್ಟ್ರ ವೇಗಿಗಳ ಸ್ವಿಂಗ್‌ ಬೌಲಿಂಗ್‌ ದಾಳಿಯನ್ನು ಎದುರಿಸಲು ಪರದಾಡಿತು. ಮೊದಲ ಅವಧಿಯಲ್ಲೇ 3 ವಿಕೆಟ್‌ ಪತನಗೊಂಡ ಪರಿಣಾಮ ಸಂಕಷ್ಟದಲ್ಲಿದ್ದ ರಾಜ್ಯ ತಂಡ 40.3 ಓವರಲ್ಲಿ 112 ರನ್‌ಗೆ 5 ವಿಕೆಟ್‌ ಕಳೆದುಕೊಂಡಿತು. ಆದರೆ ಆರಂಭಿಕ ಬ್ಯಾಟರ್‌ ಮಯಾಂಕ್‌ ತಮ್ಮ ನೈಜ ಆಕ್ರಮಣಕಾರಿ ಆಟವಾಡದೆ, ಎದುರಾಳಿ ಬೌಲರ್‌ಗಳ ಉತ್ತಮ ಎಸೆತಗಳನ್ನು ಗೌರವಿಸುತ್ತ ಅತ್ಯುತ್ತಮ ಇನ್ನಿಂಗ್‌್ಸ ಕಟ್ಟಿದರು.

ವಿಕೆಟ್‌ ಕೀಪರ್‌ ಶರತ್‌ ಶ್ರೀನಿವಾಸ್‌ ಜೊತೆ ಮುರಿಯದ 6ನೇ ವಿಕೆಟ್‌ಗೆ 117 ರನ್‌ ಸೇರಿಸಿ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಆರಂಭದಲ್ಲೇ ಜೀವದಾನ ಪಡೆದ ಮಯಾಂಕ್‌, 246 ಎಸೆತ ಎದುರಿಸಿದ್ದು 11 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 110 ರನ್‌ ಗಳಿಸಿದ್ದಾರೆ. ಶರತ್‌ 143 ಎಸೆತದಲ್ಲಿ 4 ಬೌಂಡರಿಗಳೊಂದಿಗೆ 58 ರನ್‌ ಕಲೆಹಾಕಿ ಔಟಾಗದೆ ಉಳಿದಿದ್ದಾರೆ.

ಆರಂಭಿಕ ಆಘಾತ: ಕರ್ನಾಟಕ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್‌್ಸನ 6ನೇ ಓವರಲ್ಲಿ ಆರ್‌.ಸಮಥ್‌ರ್‍(03) ದುಬಾರಿ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ದೇವದತ್‌ ಪಡಿಕ್ಕಲ್‌(09) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ನಿಕಿನ್‌ ಜೋಸ್‌(66 ಎಸೆತದಲ್ಲಿ 18 ರನ್‌) ಸೌರಾಷ್ಟ್ರದ ವೇಗಿಗಳ ದಾಳಿಯನ್ನು ಬಹಳ ಹೊತ್ತು ಸಮರ್ಥವಾಗಿ ಎದುರಿಸಿ ನಾಯಕನ ಜೊತೆ 3ನೇ ವಿಕೆಟ್‌ಗೆ 47 ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು.

Ranji Trophy: ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್

ಮನೀಶ್‌ ಪಾಂಡೆ 7 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರೆ, ಕ್ವಾರ್ಟರ್‌ ಫೈನಲ್‌ ಹೀರೋ ಶ್ರೇಯಸ್‌ ಗೋಪಾಲ್‌ 15 ರನ್‌ ಗಳಿಸಿದ್ದಾಗ ರನೌಟ್‌ ಬಲೆಗೆ ಬಿದ್ದರು. ಸೌರಾಷ್ಟ್ರ ಪರ ಮಧ್ಯಮ ವೇಗಿ ಕುಶಾಂಗ್‌ ಪಟೇಲ್‌ 2 ವಿಕೆಟ್‌ ಕಿತ್ತರೆ, ಚೇತನ್‌ ಸಕಾರಿಯಾ ಹಾಗೂ ಪ್ರೇರಕ್‌ ಮಂಕಡ್‌ ತಲಾ ಒಂದು 1 ವಿಕೆಟ್‌ ಕಬಳಿಸಿದರು.

ಸ್ಕೋರ್‌: ಕರ್ನಾಟಕ: 229/5 (ಮೊದಲ ದಿನದಂತ್ಯಕ್ಕೆ)

(ಮಯಾಂಕ್‌ 110*, ಶರತ್‌ 58, ಶ್ರೇಯಸ್‌ 15, ಕುಶಾಂಗ್‌ 2-64, ಚೇತನ್‌ 1-39, ಪ್ರೇರಕ್‌ 1-42)

ಮಧ್ಯಪ್ರದೇಶ ವಿರುದ್ಧ ಬಂಗಾಳ 307ಕ್ಕೆ 4

ಇಂದೋರ್‌: ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ವಿರುದ್ಧ ಬಂಗಾಳ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 307 ರನ್‌ ಗಳಿಸಿ ಮೇಲುಗೈ ಸಾಧಿಸಿದೆ. ಅನುಸ್ತೂಪ್‌ ಮಜುಂದಾರ್‌(120) ಹಾಗೂ ಸುದೀಪ್‌ ಕುಮಾರ್‌ ಘರಾಮಿ(112) ಶತಕಗಳ ನೆರವಿನಿಂದ ಬಂಗಾಳ ದೊಡ್ಡ ಮೊತ್ತದತ್ತ ಹೆಜ್ಜೆ ಹಾಕಿದೆ. 

ದಿನದಾಟದ ಮೊದಲ ಒಂದು ಗಂಟೆಯೊಳಗೆ ಬಂಗಾಳ 51 ರನ್‌ಗೆ 2 ವಿಕೆಟ್‌ ಕಳೆದುಕೊಂಡಿತ್ತು. 3ನೇ ವಿಕೆಟ್‌ಗೆ ಅನುಸ್ತೂಪ್‌ ಹಾಗೂ ಸುದೀಪ್‌ ಜೋಡಿ 414 ಎಸೆತಗಳನ್ನು ಎದುರಿಸಿ 241 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ನಾಯಕ ಮನೋಜ್‌ ತಿವಾರಿ ಹಾಗೂ ಶಾಬಾಜ್‌ ಅಹ್ಮದ್‌ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

click me!