Ranji Trophy ಮಯಾಂಕ್‌ ಅಗರ್‌ವಾಲ್ ಕೆಚ್ಚೆದೆಯ ದ್ವಿಶತಕ; ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ..!

By Naveen KodaseFirst Published Feb 9, 2023, 2:15 PM IST
Highlights

ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ನಾಯಕನ ಆಟವಾಡಿದ ಮಯಾಂಕ್‌ ಅಗರ್‌ವಾಲ್
ಸೌರಾಷ್ಟ್ರ ಎದುರು ಆಕರ್ಷಕ 249 ರನ್ ಸಿಡಿಸಿದ ಮಯಾಂಕ್‌ ಅಗರ್‌ವಾಲ್
ಮೊದಲ ಇನಿಂಗ್ಸ್‌ನಲ್ಲಿ 407 ರನ್ ಕಲೆಹಾಕಿದ ಕರ್ನಾಟಕ ಕ್ರಿಕೆಟ್ ತಂಡ

ಬೆಂಗಳೂರು(ಫೆ.09): ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ನಾಯಕನ ಆಟ ಆಡುವಲ್ಲಿ ಕನ್ನಡಿಗ ಮಯಾಂಕ್‌ ಅಗರ್‌ವಾಲ್(249) ಯಶಸ್ವಿಯಾಗಿದ್ದಾರೆ. ಆರಂಭಿಕ ಆಘಾತದಲ್ಲಿದ್ದ ಕರ್ನಾಟಕ ತಂಡಕ್ಕೆ ಕೆಚ್ಚೆದೆಯ ದ್ವಿಶತಕ ಸಿಡಿಸಿದ ಮಯಾಂಕ್‌ ಅಗರ್‌ವಾಲ್‌, ರಾಜ್ಯ ತಂಡ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಲು ಯಶಸ್ವಿಯಾಗಿದ್ದಾರೆ. ಸೌರಾಷ್ಟ್ರ ಎದುರು ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 407 ರನ್ ಬಾರಿಸಿ ಸರ್ವಪತನ ಕಂಡಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಒಂದು ಹಂತದಲ್ಲಿ 112 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ ಆರನೇ ವಿಕೆಟ್‌ಗೆ ಜತೆಯಾದ ಶರತ್ ಶ್ರೀನಿವಾಸ್ ಹಾಗೂ ಮಯಾಂಕ್‌ ಅಗರ್‌ವಾಲ್ ಜೋಡಿ 117 ರನ್‌ಗಳ ಜತೆಯಾಟವಾಡುವ ಮೂಲಕ ಮೊದಲ ದಿನದಾಟದಂತ್ಯದ ವೇಳೆಗೆ ಕರ್ನಾಟಕ ತಂಡವು 5 ವಿಕೆಟ್ ಕಳೆದುಕೊಂಡು 229 ರನ್ ಕಲೆಹಾಕಿತ್ತು. ಇನ್ನು ಎರಡನೇ ದಿನದಾಟದಲ್ಲಿ ಶರತ್ ತನ್ನ ಖಾತೆಗೆ ಕೇವಲ 8 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೃಷ್ಣಪ್ಪ ಗೌತಮ್(2) ಹಾಗೂ ವಿ. ವೈಶಾಕ್(6) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

Lunch break: Karnataka - 335/8 in 115.6 overs (Vidwath Kaverappa 11 off 29, Mayank Agarwal 185 off 346)

— BCCI Domestic (@BCCIdomestic)

ಮಯಾಂಕ್‌ ಅಗರ್‌ವಾಲ್ ಕೆಚ್ಚೆದೆಯ ದ್ವಿಶತಕ: ಮೊದಲ ದಿನದಾಟದಲ್ಲೇ ಅಜೇಯ 110 ರನ್ ಬಾರಿಸಿದ್ದ ನಾಯಕ ಮಯಾಂಕ್‌ ಅಗರ್‌ವಾಲ್, ಎರಡನೇ ದಿನವೂ ಜವಾಬ್ದಾರಿ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ದಿನದಾಟದಲ್ಲೂ ಆರಂಭದಲ್ಲೇ ಕರ್ನಾಟಕ ತಂಡವು 3 ವಿಕೆಟ್ ಕಳೆದುಕೊಂಡಿತಾದರೂ, 9ನೇ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್ ಹಾಗೂ ವಿದ್ವತ್ ಕಾವೇರಪ್ಪ 91 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 360ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ವಿದ್ವತ್ ಕಾವೇರಪ್ಪ 42 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

Ranji Trophy: ಕುಸಿದ ರಾಜ್ಯಕ್ಕೆ ಮಯಾಂಕ್‌ ಅಗರ್‌ವಾಲ್ ಶತಕದಾಸರೆ..!

ಸೌರಾಷ್ಟ್ರ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಮಯಾಂಕ್‌ ಅಗರ್‌ವಾಲ್‌ ಒಟ್ಟು 367 ಎಸೆತಗಳನ್ನು ಎದುರಿಸಿ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು. ದ್ವಿಶತಕ ಬಾರಿಸಿದ ಬಳಿಕ ಮಯಾಂಕ್ ಅಗರ್‌ವಾಲ್‌, ಮತ್ತಷ್ಟು ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು.  ಅಂತಿಮವಾಗಿ ಮಯಾಂಕ್‌ ಅಗರ್‌ವಾಲ್‌ 429 ಎಸೆತಗಳನ್ನು ಎದುರಿಸಿ 28 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 249 ರನ್ ಬಾರಿಸಿ ಕೊನೆಯವರಾಗಿ ರನೌಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು.

ಇನ್ನು ಸೌರಾಷ್ಟ್ರ ತಂಡದ ಪರ ವೇಗಿಗಳಾದ ಚೇತನ್ ಸಕಾರಿಯಾ ಹಾಗೂ ಕುಸಾಂಗ್‌ ಪಟೇಲ್‌ ತಲಾ 3 ವಿಕೆಟ್ ಪಡೆದರೆ, ಚಿರಾಗ್ ಜಾನಿ ಹಾಗೂ ಪ್ರೇರಕ್ ಮಂಕಡ್ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು.
 

click me!