
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ಫೆಬ್ರವರಿ 07ರಿಂದ ಟಿ20 ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಹೀಗಿರುವಾಗಲೇ ಫೆಬ್ರವರಿ 15ರಂದು ಕೊಲಂಬೋದಲ್ಲಿ ಭಾರತ ವಿರುದ್ದ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಮೈದಾನಕ್ಕಿಳಿಯುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಈಗಾಗಲೇ ಘೋಷಿಸಿರುವುದು ಹೈಡ್ರಾಮಾಗೆ ಸಾಕ್ಷಿಯಾಗಿದೆ.
ಭಾರತ-ಪಾಕಿಸ್ತಾನ ನಡುವಿನ ತಿಕ್ಕಾಟದಲ್ಲಿ ಐಸಿಸಿ ಕೊಂಚ ಇಕ್ಕಟ್ಟಿಗೆ ಸಿಲುಕಿದೆ. ಹೀಗಿರುವಾಗಲೇ ಒಂದು ವೇಳೆ ಭಾರತ ಎದುರಿನ ಪಂದ್ಯವನ್ನು ಪಾಕಿಸ್ತಾನ ಬಾಯ್ಕಾಟ್ ಮಾಡಿದರೇ, ತನ್ನ ತಲೆಯ ಮೇಲೆ ಕಲ್ಲುಹಾಕಿಕೊಂಡಂತೆ ಆಗಲಿದೆ ಎನ್ನುವಂತಹ ಚರ್ಚೆಯೂ ಇದೆ. ಇದೆಲ್ಲದರ ನಡುವೆ ಪಾಕಿಸ್ತಾನದ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಆಡಿರುವ ವಿಡಿಯೋ ತುಣುಕೊಂದು ಇದೀಗ ಮತ್ತೆ ವೈರಲ್ ಆಗಿದ್ದು, ಪಾಕ್ ಕ್ರಿಕೆಟ್ ಬೋರ್ಡ್ನ ಸರ್ವ ಸದಸ್ಯರ ಸಮ್ಮುಖದಲ್ಲೇ ಭಾರತವನ್ನು ಎದುರು ಹಾಕಿಕೊಂಡರೇ ಎಂತಹ ಕಷ್ಟಕ್ಕೆ ಸಿಲುಕಲಿದ್ದೇವೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
ಐಸಿಸಿ ಹಾಗೂ ಬಿಸಿಸಿಐಗೆ ಸೆಡ್ಡು ಹೊಡೆಯಲು ಮುಂದಾಗಿರುವ ಪಾಕಿಸ್ತಾನವು, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಘೋಷಿಸಿದೆ. ಆದರೆ ಹೀಗೆ ಮಾಡಿದರೆ ಪಾಕಿಸ್ತಾನದ ಪರಿಸ್ಥಿತಿ ಏನಾಗಲಿದೆ ಎನ್ನುವುದನ್ನು ಈ ಹಿಂದೆಯೇ ರಮೀಜ್ ರಾಜಾ ಎಚ್ಚರಿಸಿದ್ದರು.
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಸಮ್ಮುಖದಲ್ಲಿ ಈ ಬಗ್ಗೆ ಮಾತನಾಡಿದ ರಮೀಜ್ ರಾಜಾ, ಐಸಿಸಿಗೆ ಪ್ರತಿಶತ 90% ಆದಾಯ ಭಾರತೀಯ ಮಾರುಕಟ್ಟೆಯಿಂದ ಬರುತ್ತದೆ. ಟೂರ್ನಿ ಆಯೋಜಿಸಿದಾಗ ಸಿಗುವ ಹಣವನ್ನು ಬಳಸಿಕೊಂಡು ಐಸಿಸಿಯು, ಜಗತ್ತಿನ ಇನ್ನುಳಿದ ಎಲ್ಲಾ ಕ್ರಿಕೆಟ್ ಬೋರ್ಡ್ಗಳಿಗೆ ಅನುದಾನವನ್ನು ಹಂಚುತ್ತದೆ. ಒಂದು ವೇಳೆ ಈ ಅನುದಾನ ಹಂಚುವುದನ್ನು ನಿಲ್ಲಿಸಿದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಪರಿಸ್ಥಿತಿ ಬಿಗಡಾಯಿಸಲಿದೆ. ಐಸಿಸಿ ನೀಡುವ 50% ಅನುದಾನದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಡೆಯುತ್ತಿದೆ. ಒಂದು ರೀತಿಯಲ್ಲಿ ಭಾರತದ ಬ್ಯುಸಿನೆಸ್ನಿಂದಾಗಿ ಪಾಕಿಸ್ತಾನ ಕ್ರಿಕೆಟ್ ನಡೆಯುತ್ತಿದೆ. ಒಂದು ವೇಳೆ ಭಾರತದ ಪ್ರಧಾನ ಮಂತ್ರಿ, ನಾವು ಪಾಕಿಸ್ತಾನಕ್ಕೆ ಫಂಡ್ ಮಾಡಬಾರದು ಎಂದು ನಿರ್ಧರಿಸಿದರೆ, ಈ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸರ್ವನಾಶ ಕೂಡಾ ಆಗಬಹುದು ಎಂದು ಹೇಳಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ಇದೀಗ ಕ್ರಿಕೆಟ್ ಆಗಿ ಉಳಿದಿಲ್ಲ. ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಮ್ಯಾಚ್ ರದ್ದಾದರೇ ಸುಮಾರು 2200 ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ನಲ್ಲಿ ಪಂದ್ಯದ ಪ್ರಸಾರ ಹಕ್ಕು, ಜಾಹೀರಾತು, ಪ್ರಾಯೋಜಕತ್ವ, ಟಿಕೆಟ್ ಆದಾಯ ಮತ್ತು ಕಾನೂನುಬದ್ಧ ಬೆಟ್ಟಿಂಗ್(ಭಾರತದ ಹೊರಗಡೆ) ಸೇರಿ ಹಲವು ವಿಧದಲ್ಲಿ ಆದಾಯ ಸಿಗಲಿದೆ. ಒಂದು ವೇಳೆ ಭಾರತ-ಪಾಕ್ ಪಂದ್ಯ ರದ್ದಾದರೆ, ಬರೀ ಜಾಹೀರಾತು ಆದಾಯದಲ್ಲೇ 200ರಿಂದ 250 ಕೋಟಿ ರು. ನಷ್ಟ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಈ ಪಂದ್ಯದ ವೇಳೆ ಪ್ರಸಾರವಾಗುವ ಪ್ರತಿ 10 ಸೆಕೆಂಡ್ಗಳ ಜಾಹೀರಾತಿಗೆ ಬ್ರಾಡ್ಕಾಸ್ಟರ್ಗಳು 25ರಿಂದ 40 ಲಕ್ಷ ರು. ಶುಲ್ಕ ವಿಧಿಸುತ್ತಾರೆ. ಅಲ್ಲದೆ, ಭಾರತ-ಪಾಕ್ ದೇಶಗಳ ಕ್ರಿಕೆಟ್ ಮಂಡಳಿಗಳು ನೇರ ಮತ್ತು ಪರೋಕ್ಷ ಆದಾಯದಲ್ಲಿ ತಲಾ ₹200 ಕೋಟಿ ಹಣವನ್ನು ತಕ್ಷಣವೇ ಕಳೆದುಕೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.