ರಿಷಭ್ ಪಂತ್‌ಗೆ ವಿಶೇಷ ಮನವಿ ಮಾಡಿದ ರವಿಚಂದ್ರನ್ ಅಶ್ವಿನ್!

Published : Jun 28, 2025, 04:15 PM IST
Rishabh Pant-R Ashwin

ಸಾರಾಂಶ

ಭಾರತ ತಂಡದ ಬ್ಯಾಟಿಂಗ್‌ ಅವಧಿ ವಿಸ್ತರಣೆಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ರಿಷಭ್ ಪಂತ್ ತಮ್ಮ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸಬೇಕೆಂದು ಆರ್. ಅಶ್ವಿನ್ ಸಲಹೆ ನೀಡಿದ್ದಾರೆ. ಕೆಳ ಕ್ರಮಾಂಕ ಬಲಿಷ್ಠವಾಗಿಲ್ಲದಿದ್ದಾಗ ಪಂತ್ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ನವದೆಹಲಿ: ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ತನ್ನ ಬ್ಯಾಟಿಂಗ್‌ ಅವಧಿಯನ್ನು ವಿಸ್ತರಿಸುವತ್ತ ಹೆಚ್ಚು ಗಮನ ಹರಿಸಬೇಕು ಹಾಗೂ ರಿಷಭ್‌ ಪಂತ್‌ ತಮ್ಮ ಶತಕಗಳನ್ನು ದ್ವಿಶತಕಗಳಾಗಿ ಪರಿವರ್ತಿಸಬೇಕು ಎಂದು ಮಾಜಿ ಕ್ರಿಕೆಟಿಗ ಆರ್‌.ಅಶ್ವಿನ್‌ ಸಲಹೆ ನೀಡಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್‌, ‘ನಿಮಗೊಂದು ಸಲಹೆ ನೀಡಲಾ?, ಮುಂದಿನ ಬಾರಿ 130 ರನ್‌ ಗಳಿಸಿದಾಗ ದಯವಿಟ್ಟು ದ್ವಿಶತಕ ಬಾರಿಸುವತ್ತ ಗಮನ ನೀಡಿ. ತಂಡದ ಕೆಳ ಕ್ರಮಾಂಕ ಬಲಿಷ್ಠವಾಗಿಲ್ಲದಿದ್ದಾಗ ನೀವೇ ಹೆಚ್ಚು ಕೊಡುಗೆ ನೀಡಬೇಕು’ ಎಂದು ಪಂತ್‌ಗೆ ಕೇಳಿಕೊಂಡಿದ್ದಾರೆ.

‘ಭಾರತ ತಂಡ ಪ್ರತಿ ಇನ್ನಿಂಗ್ಸ್‌ನಲ್ಲಿ ಹೆಚ್ಚು ರನ್‌ ಗಳಿಸುವುದರ ಕಡೆಗಷ್ಟೇ ಅಲ್ಲ, ಹೆಚ್ಚು ಸಮಯ ಕ್ರೀಸ್‌ನಲ್ಲಿರಲು ಸಹ ಗಮನ ನೀಡಬೇಕಿದೆ. ಇಂಗ್ಲೆಂಡ್‌ ಆಟಗಾರರು ಹೆಚ್ಚು ಸಮಯ ಫೀಲ್ಡಿಂಗ್‌ನಲ್ಲಿ ಕಳೆಯುವಂತೆ ಮಾಡಬೇಕು. ಮೊದಲ ಟೆಸ್ಟ್‌ನಲ್ಲಿ ಯಾವಾಗ ನಮ್ಮ ಬ್ಯಾಟಿಂಗ್‌ 5ನೇ ದಿನಕ್ಕೆ ವಿಸ್ತರಣೆಗೊಳ್ಳಲಿಲ್ಲವೋ ಆಗಲೇ ಪಂದ್ಯ ಕೈಜಾರಿತ್ತು. ಇಂಗ್ಲೆಂಡ್‌ ಅನುಸರಿಸುತ್ತಿರುವ ತಂತ್ರಗಳನ್ನು ಅರಿಯದಿದ್ದರೆ ಸೋಲಿನಿಂದ ಪಾರಾಗುವುದು ಕಷ್ಟ’ ಎಂದು ಅಶ್ವಿನ್‌ ಹೇಳಿದ್ದಾರೆ. ‘ಇಂಗ್ಲೆಂಡ್‌ಗೆ ಕನಿಷ್ಠ 450 ರನ್‌ ಗುರಿ ನಿಗದಿಪಡಿಸಬೇಕು ಜೊತೆಗೆ ಅದನ್ನು ಬೆನ್ನತ್ತಲು ಹೆಚ್ಚು ಸಮಯ ನೀಡಬಾರದು. ಇಂಗ್ಲೆಂಡ್‌ ಅತಿಯಾದ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಸೋಲಿನತ್ತ ಮುಖ ಮಾಡುವ ಸಾಧ್ಯತೆ ಇರಲಿದೆ’ ಎಂದು ಅಶ್ವಿನ್‌ ಸಲಹೆ ನೀಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಭಾರತ ನೀಡಿದ್ದ 371 ರನ್‌ಗಳ ಸವಾಲಿನ ಗುರಿ ಯಶಸ್ವಿಯಾಗಿ ಬೆನ್ನತ್ತುವಲ್ಲಿ ಬೆನ್ ಸ್ಟೋಕ್ಸ್ ಪಡೆ ಸಫಲವಾಗಿತ್ತು. ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ(149) ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜತೆಗೆ ಇಂಗ್ಲೆಂಡ್ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ಅಭ್ಯಾಸ ಶಿಬಿರಕ್ಕೆ ಬುಮ್ರಾ, ಪ್ರಸಿದ್ಧ್‌ ಗೈರು

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯಕ್ಕೆ ಭಾರತೀಯ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದ್ದಾರೆ. ಆದರೆ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಪ್ರಸಿದ್ಧ್‌ ಕೃಷ್ಣ ಗೈರಾದರು. ಮೊಹಮ್ಮದ್‌ ಸಿರಾಜ್‌ ಮೈದಾನದಲ್ಲಿ ಕಾಣಿಸಿಕೊಂಡರೂ, ಬೌಲಿಂಗ್ ಬದಲು ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಆಕಾಶ್‌ದೀಪ್‌, ಅರ್ಶ್‌ದೀಪ್‌ ಸಿಂಗ್‌ ಕೂಡಾ ದೀರ್ಘ ಕಾಲ ಅಭ್ಯಾಸ ನಿರತರಾದರು. ಉಳಿದಂತೆ ಬಹುತೇಕ ಎಲ್ಲಾ ಬ್ಯಾಟರ್‌ಗಳು ನೆಟ್ಸ್‌ನಲ್ಲಿ ಕೆಲ ಕಾಲ ಬೆವರಿಳಿಸಿದರು. 2ನೇ ಪಂದ್ಯ ಬುಧವಾರ ಆರಂಭಗೊಳ್ಳಲಿದೆ.

ಭಾರತ-ಆಸ್ಟ್ರೇಲಿಯಾ ಏಕದಿನ, ಟಿ20 ಪಂದ್ಯಗಳ ಟಿಕೆಟ್‌ಗೆ ಭಾರೀ ಬೇಡಿಕೆ

ಮೆಲ್ಬರ್ನ್‌: ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕೆ ಇನ್ನೂ 4 ತಿಂಗಳು ಬಾಕಿ ಇದ್ದು, ಈಗಾಗಲೇ ಏಕದಿನ ಹಾಗೂ ಟಿ20 ಪಂದ್ಯಗಳ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ಕಂಡು ಬರುತ್ತಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ) ತಿಳಿಸಿದೆ. ಈಗಾಗಲೇ 90000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಸಿಡ್ನಿಯಲ್ಲಿ ನಡೆಯಲಿರುವ 3ನೇ ಏಕದಿನ ಹಾಗೂ ಕ್ಯಾನ್‌ಬೆರ್ರಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಗಳ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ ಎಂದು ಸಿಎ ಹೇಳಿದೆ. ಭಾರತ ತಂಡ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ, 5 ಟಿ20 ಪಂದ್ಯಗಳ ಸರಣಿಗಳನ್ನು ಆಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ