
ಬೆಂಗಳೂರು(ಡಿ.09): ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ಗೆ ಈ ಬಾರಿ ತವರಲ್ಲೂ ಅದೃಷ್ಟ ಕೈಕೊಟ್ಟಿದೆ. 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬುಲ್ಸ್ ಶುಕ್ರವಾರ ದಬಾಂಗ್ ಡೆಲ್ಲಿ ವಿರುದ್ಧ 31-38 ಅಂಕಗಳಿಂದ ಪರಾಭವಗೊಂಡಿತು. ಇದು ಟೂರ್ನಿಯಲ್ಲಿ ಬುಲ್ಸ್ ಸೇನೆಗೆ ಎದುರಾದ ಹ್ಯಾಟ್ರಿಕ್ ಸೋಲು. ಅತ್ತ ಡೆಲ್ಲಿ ಟೂರ್ನಿಯ ಮೊದಲ ಜಯ ದಾಖಲಿಸಿತು.
ತಾರಾ ಆಟಗಾರರು ಮತ್ತೆ ಕೈಕೊಟ್ಟಿದ್ದರಿಂದ ಬುಲ್ಸ್ ತನ್ನ ತವರು ಕಂಠೀರವ ಕ್ರೀಡಾಂಗಣದಲ್ಲೂ ಗೆಲುವಿನಿಂದ ವಂಚಿತವಾಯಿತು. ಆರಂಭದಲ್ಲೇ ಪ್ರಾಬಲ್ಯ ಮೆರೆದ ಡೆಲ್ಲಿ, ಯಾವ ಕ್ಷಣದಲ್ಲೂ ಬುಲ್ಸ್ಗೆ ಮುನ್ನಡೆ ಸಾಧಿಸಲು ಅವಕಾಶ ನೀಡಲಿಲ್ಲ. ಮೊದಲಾರ್ಧದಲ್ಲಿ ಬುಲ್ಸ್ 11-17 ಅಂಕಗಳಿಂದ ಹಿನ್ನಡೆಗೊಳಗಾಯಿತು.
ಆದರೆ ದ್ವಿತೀಯಾರ್ಧದ ಆರಂಭದಲ್ಲೇ ತಿರುಗಿಬಿದ್ದ ಬುಲ್ಸ್ ಆಟಗಾರರು, ಮೊದಲ 4 ನಿಮಿಷಗಳಲ್ಲಿ ಅಂಕವನ್ನು 20-20ರಲ್ಲಿ ಸಮಬಲಗೊಳಿಸಿದರು. ಆದರೆ ಬುಲ್ಸ್ ಆಲೌಟಾ ಆಗುವುದರೊಂದಿಗೆ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಡೆಲ್ಲಿ, ಆ ಬಳಿಕ ಹಿಂದಿರುಗಿ ನೋಡಲಿಲ್ಲ. ಭರತ್ ಮಿಂಚಿನ ವೇಗದಲ್ಲಿ ಅಂಕಗಳನ್ನು ಗಳಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಅವರು 12 ಅಂಕ ಗಳಿಸಿದರು. ಡೆಲ್ಲಿಯ ನವೀನ್ 12, ಆಶು ಮಲಿಕ್ 8 ರೈಡ್ ಅಂಕ ಸಂಪಾದಿಸಿ ತಂಡವನ್ನು ಗೆಲ್ಲಿಸಿದರು.
Pro Kabaddi League: ಗೆಲುವಿನ ಖಾತೆ ತೆರೆದ ಪಾಟ್ನಾ, ಯೋಧಾಸ್..!
ಮತ್ತೆ ಕೈಕೊಟ್ಟ ಸ್ಟಾರ್ಸ್
ಬುಲ್ಸ್ಗೆ ಈ ಪಂದ್ಯದಲ್ಲೂ ತಾರಾ ಆಟಗಾರರು ಕೈಕೊಟ್ಟರು. ವಿಕಾಸ್ 7 ರೈಡ್ಗಳಲ್ಲಿ ಕೇವಲ ಒಂದೂ ಅಂಕ ಗಳಿಸಲಿಲ್ಲ. ನೀರಜ್ 4 ರೈಡ್ಗಳಲ್ಲಿ 1 ಅಂಕ ಪಡೆದರು. ಡಿಫೆಂಡರ್ಗಳೂ ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಸೌರಭ್ 2, ಅನುಭವಿ ಸುರ್ಜೀತ್ ಕೇವಲ 1 ಅಂಕ ಗಳಿಸಿದ್ದು ತಂಡಕ್ಕೆ ಮುಳುವಾಯಿತು.
ಪುಣೆಗೆ ಸತತ ಎರಡನೇ ಜಯ
ಶುಕ್ರವಾರ ನಡೆದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ದ ಪುಣೇರಿ ಪಲ್ಟನ್ 43-32 ಅಂಕಗಳಿಂದ ಜಯಭೇರಿ ಬಾರಿಸಿತು. ಪುಣೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದರೆ, ಮುಂಬೈ 3 ಪಂದ್ಯಗಳಲ್ಲಿ ಎರಡನೇ ಸೋಲನುಭವಿಸಿತು. ಮೊದಲಾರ್ಧದಲ್ಲೇ 21-13 ರಿಂದ ಮುನ್ನಡೆ ಸಾಧಿಸಿದ್ದ ಪುಣೆ ಕೊನೆಯವರೆಗೂ ಪಂದ್ಯದ ಮೇಲಿನ ಹಿಡಿತ ಸಡಿಲಗೊಳಿಸದೆ ಜಯ ತನ್ನದಾಗಿಸಿಕೊಂಡಿತು. ಯುವ ಆಟಗಾರ ಮೋಹಿತ್ 3 ಟ್ಯಾಕಲ್ ಸೇರಿ ಒಟ್ಟು 12 ಅಂಕ ಸಂಪಾದಿಸಿ ಪುಣೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬಾದ ಪ್ರಣಯ್ 5 ರೈಡ್ ಅಂಕ ಸಂಪಾದಿಸಿದರು.
ಆ್ಯಂಕರ್ ಮದ್ವೆಯಾದ ಜಸ್ಪ್ರೀತ್ ಬುಮ್ರಾ ಮಡದಿ ಮಿಸ್ ಇಂಡಿಯಾ ಫೈನಲಿಸ್ಟ್!
ಇಂದು ಬುಲ್ಸ್ -ಹರ್ಯಾಣ ಕದನ
ಬೆಂಗಳೂರು ಬುಲ್ಸ್ ತಂಡ ಟೂರ್ನಿಯ 4ನೇ ಪಂದ್ಯದಲ್ಲಿ ಶನಿವಾರ ಹರ್ಯಾಣ ಸ್ಟೀಲರ್ಸ್ ವಿರುದ್ದ ಸೆಣಸಾಡಲಿದ್ದು, ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ. ಹರ್ಯಾಣ ಆರಂಭಿಕ ಪಂದ್ಯದಲ್ಲಿ ಸೋಲನನ್ನುಭವಿಸಿದ್ದು, ಮೊದಲ ಜಯದ ಕಾತರದಲ್ಲಿದೆ.
ಇಂದಿನ ಪಂದ್ಯಗಳು
ಬೆಂಗಳೂರು-ಹರ್ಯಾಣ, ರಾತ್ರಿ 8ಕ್ಕೆ
ಯೋಧಾಸ್-ಟೈಟಾನ್ಸ್, ರಾತ್ರಿ 9ಕ್ಕೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.