ರಿಷಬ್ ಪಂತ್ ಅಪಘಾತಕ್ಕೆ ಆತಂಕ, ಕ್ರಿಕೆಟಿಗನ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ!

By Suvarna NewsFirst Published Dec 30, 2022, 7:59 PM IST
Highlights

ಕ್ರಿಕೆಟಿಗ ರಿಷಬ್ ಪಂತ್ ಅಪಘಾತಕ್ಕೆ ತೀವ್ರ ನೋವು ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಪಂತ್ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 
 

ನವದೆಹಲಿ(ಡಿ.30): ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ತೀವ್ರತೆಗೆ ರಿಷಬ್ ಪಂತ್ ಮರ್ಸಿಡಿಸ್ ಬೆಂಜ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇಷ್ಟೇ ಅಲ್ಲ ಅಪಘಾತದ ಬೆನ್ನಲ್ಲೇ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ರಿಷಬ್ ಪಂತ್ ದೇಹದ ಹಲವು ಮೂಳೆಗಳು ಮುರಿತಕ್ಕೊಳಗಾಗಿದೆ. ಸದ್ಯ ಪಂತ್ ಆರೋಗ್ಯ ಸ್ಥಿರವಾಗಿದೆ. ರಿಷಬ್ ಪಂತ್ ಅಪಘಾತ ಸುದ್ದಿ ಕೇಳಿದ ಪ್ರಧಾನಿ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಪಂತ್ ಕಾರು ಅಪಘಾತಕ್ಕೆ ನೋವು ವ್ಯಕ್ತಪಡಿಸಿದ ಮೋದಿ, ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ. ಖುದ್ದು ಮೋದಿ ತೀವ್ರ ದುಃಖದಲ್ಲಿದ್ದಾರೆ. ತಾಯಿ ಹೀರಾಬೆನ್ ಮೋದಿ ನಿಧನದಿಂದ ದುಃಖಿತರಾಗಿರುವ ಮೋದಿ, ನಿಗದಿಯಾಗಿದ್ದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ದುಃಖ, ಪ್ರಯಾಣ, ಕಾರ್ಯಕ್ರಮ ಸೇರಿದಂತೆ ಬಿಡುವಿಲ್ಲದ ಸಮಯದಲ್ಲಿ ಮೋದಿ ರಿಷಬ್ ಪಂತ್ ಆರೋಗ್ಯ ಕುರಿತು ಮಾಹಿತಿ ಪಡೆದಿದ್ದಾರೆ. 

ಕ್ರಿಕೆಟಿಗ ರಿಷಬ್ ಪಂತ್ ಅಪಘಾತಕ್ಕೊಳಗಾಗಿರುವುದು ತೀವ್ರ ನೋವು ತರಿಸಿದೆ. ಅವರ ಶೀಘ್ರ ಚೇತರಿಕೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

 

Distressed by the accident of noted cricketer Rishabh Pant. I pray for his good health and well-being.

— Narendra Modi (@narendramodi)

 

ರಿಷಬ್ ಪಂತ್(Rishabh pant Accident) ಸದ್ಯ ಉತ್ತರಖಂಡದ ಡೆಹ್ರಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮುಂಜಾನೆ ದೆಹಲಿಯಿಂದ ಉತ್ತರಖಂಡಕ್ಕೆ(Delhi to Uttarakhand) ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೊಳಗಾಗಿದೆ. ರಿಷಬ್ ಪಂತ್ ಮಾತ್ರ ಸಂಚರಿಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯಾದ ಬೆನ್ನಲ್ಲೇ ಕಾರು ಹೊತ್ತಿ ಉರಿದಿದೆ.  ತೀವ್ರವಾಗಿ ಗಾಯಗೊಂಡ ರಿಷಬ್ ಪಂತ್‌ರನ್ನು ರಕ್ಷಿಸಿ ಸ್ಥಳೀಯ ಸಕ್ಷಮ್ ಆಸ್ಪತ್ರಗೆ ದಾಖಲಿಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಆರೋಗ್ಯ ಮಾಹಿತಿ ಬಹಿರಂಗ ಪಡಿಸಿದ ಬಿಸಿಸಿಐ!

ರಿಷಬ್ ಪಂತ್ ಆರೋಗ್ಯ ಕುರಿತು ಈಗಾಗಲೇ ಬಿಸಿಸಿಐ ಮಾಹಿತಿ ನೀಡಿದೆ. ಆರೋಗ್ಯ ಸ್ಥಿರವಾಗಿದೆ. ಆದರೆ ಗಾಯದ ಸಂಖ್ಯೆಯೂ ಹೆಚ್ಚಿದೆ. ಕೆಲ ಮೂಳೆಗಳು ಮುರಿತಕ್ಕೊಳಗಾಗಿದೆ ಎಂದಿದೆ. ಇಂದು ಮುಂಜಾನೆ ಈ ಅಪಾಘತ ಸಂಭಲಿಸಿದೆ. ಇತ್ತ ಪ್ರಧಾನಿ ಮುಂಜಾನೆಯಿಂದಲೇ ತೀವ್ರ ಒತ್ತಡದ ನಡುವೆ ಕೆಲಸ ಮಾಡಿದ್ದಾರೆ. ಮೋದಿ ತಾಯಿ ಹೀರಾಬೆನ್ ಮೋದಿ ನಿಧನರಾದ ಕಾರಣ ಅಹಮ್ಮದಾಬಾದ್‌ಗೆ ತೆರಳಿದ ಮೋದಿ ತಾಯಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಸರಳವಾಗಿ ಶ್ರೀಸಾಮಾನ್ಯರಂತೆ ಅಂತ್ಯಸಂಸ್ಕಾರ ನಡೆಸಲಾಗಿತ್ತು. 

ಅಂತ್ಯಸಂಸ್ಕಾರದ ಬಳಿಕ ಪಶ್ಚಿಮ ಬಂಗಾಳದಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಉದ್ಘಾಟನೆ, ಹಲವು ಯೋಜನಗೆಳ ಲೋಕಾರ್ಪಣೆ ಮಾಡಿದರು. ಅಹಮ್ಮಾದಾಬಾದ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ, ಯೋಜನೆ ಉದ್ಘಾಟಿಸಿದರು. ಹೀಗಾಗಿ ಇಂದು ಇಡೀ ದಿನ ಪ್ರಧಾನಿ ನೇರಂದ್ರ ಮೋದಿ ಒತ್ತಡ, ದುಃಖದ ನಡುವೆ ಕೆಲಸ ಮಾಡಿದ್ದಾರೆ. 

ವಾಸೀಂ ಅಕ್ರಂನಿಂದ ವಿರಾಟ್ ಕೊಹ್ಲಿವರೆಗೆ; ರಿಷಭ್ ಪಂತ್ ಚೇತರಿಕೆಗೆ ಪ್ರಾರ್ಥಿಸಿದ ಕ್ರಿಕೆಟಿಗರು..!

ಇದರ ನಡುವೆ ರಿಷಬ್ ಪಂತ್ ಅಪಘಾತ ಸುದ್ದಿ ತಿಳಿದು ನೋವು ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಪಂತ್ ಸದ್ಯದ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. 

click me!