
ದುಬೈ(ಮಾ.30): 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆದರೂ, ಪಾಕಿಸ್ತಾನ ಮಾತ್ರ ತನ್ನ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ಆಡುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಾಗಲೇ ಐಸಿಸಿ, ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಡುವೆ ಚರ್ಚೆ ಆರಂಭವಾಗಿದೆ ಎಂದು ಐಸಿಸಿಯ ಪ್ರಧಾನ ವ್ಯವಸ್ಥಾಪಕ, ಪಾಕಿಸ್ತಾನ ಮೂಲದ ವಾಸಿಂ ಖಾನ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ವಿಶ್ವಕಪ್ಗೂ ಮುನ್ನ ನಡೆಯಲಿರುವ ಏಷ್ಯಾಕಪ್ಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸಲು ಪಿಸಿಬಿ ಒಪ್ಪಿಕೊಂಡಿದೆ. ಇದೀಗ ತನ್ನ ತಂಡವನ್ನೂ ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿರುವ ಪಿಸಿಬಿ, ಬಾಂಗ್ಲಾದಲ್ಲಿ ಪಂದ್ಯಗಳನ್ನು ಆಯೋಜಿಸುವಂತೆ ಐಸಿಸಿ ಹಾಗೂ ಬಿಸಿಸಿಐ ಮೇಲೆ ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ. ಆದರೆ ಮತ್ತೊಂದು ಮೂಲದ ಪ್ರಕಾರ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಪಿಸಿಬಿ ಸುಳ್ಳು ಸುದ್ದಿ ಹರಡುತ್ತಿದೆ ಎನ್ನಲಾಗಿದೆ.
ಏಕದಿನ: 8ನೇ ಸ್ಥಾನಕ್ಕೆ ಏರಿದ ರೋಹಿತ್ ಶರ್ಮಾ
ದುಬೈ: ಐಸಿಸಿ ಏಕದಿನ ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ. 10 ಸ್ಥಾನ ಜಿಗಿತ ಕಂಡಿರುವ ಹಾರ್ದಿಕ್ ಪಾಂಡ್ಯ ಬೌಲರ್ಗಳ ಪಟ್ಟಿಯಲ್ಲಿ 76ನೇ ಸ್ಥಾನ ಪಡೆದರೆ, ಸಿರಾಜ್ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಆಫ್ಘಾನಿಸ್ತಾನದ ರಶೀದ್ ಖಾನ್ ಟಿ20 ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಲಂಕಾದ ಹಸರಂಗ ಅವರನ್ನು ಹಿಂದಿಕ್ಕಿ ನಂ.1 ಸ್ಥಾನ ಪಡೆದಿದ್ದಾರೆ.
ಅಂ.ರಾ.ಟಿ20: ಶಕೀಬ್ ಗರಿಷ್ಟವಿಕೆಟ್ ದಾಖಲೆ!
ಚಟ್ಟೋಗ್ರಾಮ: ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮೊದಲ ಸ್ಥಾನಕ್ಕೇರಿದ್ದಾರೆ. ಐರ್ಲೆಂಡ್ ವಿರುದ್ಧ ಬುಧವಾರ ನಡೆದ 2ನೇ ಟಿ20 ಪಂದ್ಯದಲ್ಲಿ 22 ರನ್ಗೆ 5 ವಿಕೆಟ್ ಕಬಳಿಸಿದ ಶಕೀಬ್, ನ್ಯೂಜಿಲೆಂಡ್ನ ಟಿಮ್ ಸೌಥಿಯನ್ನು ಹಿಂದಿಕ್ಕಿದರು.
IPL 2023 ಟೂರ್ನಿ ಆರಂಭಕ್ಕೂ ಮುನ್ನ ಮುಂಬೈಗೆ ಶಾಕ್, ಕೆಲ ಪಂದ್ಯಕ್ಕೆ ರೋಹಿತ್ ಅಲಭ್ಯರಾಗುವ ಸಾಧ್ಯತೆ!
ಶಕೀಬ್ ಸದ್ಯ 114 ಪಂದ್ಯಗಳಲ್ಲಿ 136 ವಿಕೆಟ್ ಕಬಳಿಸಿ ಮೊದಲ ಸ್ಥಾನದಲ್ಲಿದ್ದರೆ, ಸೌಥಿ 107 ಪಂದ್ಯದಲ್ಲಿ 134 ವಿಕೆಟ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 80 ಪಂದ್ಯದಲ್ಲಿ 129 ವಿಕೆಟ್ ಪಡೆದಿರುವ ಆಫ್ಘನ್ನ ರಶೀದ್ ಖಾನ್ 3ನೇ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಗೆದ್ದ ವಿಂಡೀಸ್
ಜೊಹಾನ್ಸ್ಬರ್ಗ್: ವೇಗಿ ಅಲ್ಜಾರಿ ಜೋಸೆಫ್ 19ನೇ ಓವರಲ್ಲಿ 3 ವಿಕೆಟ್ ಕಿತ್ತ ಪರಿಣಾಮ ದ.ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 7 ರನ್ ಜಯ ಸಾಧಿಸಿದ ವಿಂಡೀಸ್ 2-1ರಲ್ಲಿ ಸರಣಿ ವಶಪಡಿಸಿಕೊಂಡಿದೆ. ಗೆಲ್ಲಲು 221 ರನ್ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಕೊನೆ 2 ಓವರಲ್ಲಿ 35 ರನ್ ಬೇಕಿತ್ತು. ಜೋಸೆಫ್ 19ನೇ ಓವರಲ್ಲಿ 3 ಪ್ರಮುಖ ವಿಕೆಟ್ ಕಬಳಿಸಿ ಆತಿಥೇಯರಿಗೆ ಆಘಾತ ನೀಡಿದರು. ಕೊನೆ ಓವರಲ್ಲಿ 26 ರನ್ ಬೇಕಿದ್ದಾಗ ನಾಯಕ ಮಾರ್ಕ್ರಮ್ 18 ರನ್ ಸಿಡಿಸಿದರೂ ತಂಡ ಸೋಲೊಪ್ಪಿಕೊಳ್ಳಬೇಕಾಯಿತು. ದಕ್ಷಿಣ ಆಫ್ರಿಕಾ 8 ವಿಕೆಟ್ಗೆ 220 ರನ್ ಕಲೆಹಾಕಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.