ಜಾಗತಿಕ ಕ್ರಿಕೆಟ್‌ನ ಕೂಲ್ ಕ್ಯಾಪ್ಟನ್ ಮಹೇಂದ್ರ..!

By Suvarna NewsFirst Published Aug 16, 2020, 4:03 PM IST
Highlights

ಯಾವ ಕ್ಷಣದಲ್ಲಿ ಧೋನಿ ಯಾವ ರಣತಂತ್ರ ರೂಪಿಸುತ್ತಾರೆ, ತಂತ್ರಗಾರಿಕೆಯನ್ನು ಹೇಗೆ ಬದಲಿಸುತ್ತಾರೆ ಎನ್ನುವುದು ಸಹ ಆಟಗಾರರಿಗೂ ಗೊತ್ತಾಗುತ್ತಿರಲಿಲ್ಲ. ತಮ್ಮ ತಾಳ್ಮೆ, ಚತುರ ನಡೆ, ಊಹಿಸಲಾಗದ ತಂತ್ರಗಾರಿಕೆಯಿಂದ ಧೋನಿ, ಭಾರತೀಯರಿಗೆ ಮಾತ್ರವಲ್ಲ ಕ್ರಿಕೆಟ್ ಆಡುವ ಎಲ್ಲಾ ರಾಷ್ಟ್ರಗಳ ಯುವ ಆಟಗಾರರಿಗೆ ಸ್ಫೂರ್ತಿಯಾದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.16): ಧೋನಿ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಮಾತಿತ್ತು. ತಮ್ಮ ಮಾಂತ್ರಿಕ ಸ್ಪರ್ಶದಿಂದ ಭಾರತಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದ ಧೋನಿ, ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸುವುದು ಹೇಗೆ ಎನ್ನುವ ರಹಸ್ಯವನ್ನು ತಿಳಿದಿದ್ದರು. 

ಯಾವ ಕ್ಷಣದಲ್ಲಿ ಧೋನಿ ಯಾವ ರಣತಂತ್ರ ರೂಪಿಸುತ್ತಾರೆ, ತಂತ್ರಗಾರಿಕೆಯನ್ನು ಹೇಗೆ ಬದಲಿಸುತ್ತಾರೆ ಎನ್ನುವುದು ಸಹ ಆಟಗಾರರಿಗೂ ಗೊತ್ತಾಗುತ್ತಿರಲಿಲ್ಲ. ತಮ್ಮ ತಾಳ್ಮೆ, ಚತುರ ನಡೆ, ಊಹಿಸಲಾಗದ ತಂತ್ರಗಾರಿಕೆಯಿಂದ ಧೋನಿ, ಭಾರತೀಯರಿಗೆ ಮಾತ್ರವಲ್ಲ ಕ್ರಿಕೆಟ್ ಆಡುವ ಎಲ್ಲಾ ರಾಷ್ಟ್ರಗಳ ಯುವ ಆಟಗಾರರಿಗೆ ಸ್ಫೂರ್ತಿಯಾದರು.

ಕ್ರಿಕೆಟ್ ಲೋಕದ ದಂತಕಥೆ ಎಂ ಎಸ್ ಧೋನಿ; ಧೋನಿಗೆ ಸರಿಸಾಟಿಯುಂಟೇ..?

ಅನಿರೀಕ್ಷಿತ ನಿರ್ಧಾರಗಳ ಸರದಾರ! : ಧೋನಿ ಯಾವಾಗ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಊಹಿಸಲು ಸಾಧ್ಯವಿರಲಿಲ್ಲ. ಅವರ ನಿರ್ಧಾರಗಳು ಬಹುತೇಕ ಬಾರಿ ಸರಿಯಾಗೇ ಇರುತ್ತಿತ್ತು. 2007ರ ಟಿ20 ವಿಶ್ವಕಪ್ ಫೈನಲ್‌ನ ಕೊನೆ ಓವರ್‌ನಲ್ಲಿ ಜೋಗಿಂದರ್ ಶರ್ಮಾಗೆ ಬೌಲಿಂಗ್ ನೀಡಿದ್ದು, 2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಯುವರಾಜ್‌ಗಿಂತ ಮೊದಲೇ ಬ್ಯಾಟಿಂಗ್‌ಗಿಳಿದಿದ್ದು, 2016ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ಒಂದು ಗ್ಲೌಸ್ ಬಿಚ್ಚಿಟ್ಟು ರನೌಟ್ ಮಾಡಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಫೈನಲಲ್ಲಿ ಇಶಾಂತ್‌ರಿಂದ ಬೌಲ್ ಮಾಡಿಸಿದ್ದು ಹೀಗೆ ಅವರ ಅನಿರೀಕ್ಷಿತ ನಿರ್ಧಾರಗಳು ಭಾರತಕ್ಕೆ ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದೆ.

ಅನಧಿಕೃತ ಬೌಲಿಂಗ್ ಕೋಚ್!: ಧೋನಿ ಸ್ಟಂಪ್ಸ್ ಹಿಂದೆ ಇದ್ದಾರೆ ಎಂದರೆ ಬೌಲರ್‌ಗಳಿಗೆ ಆನೆಬಲವಿದ್ದಂತೆ. ಧೋನಿ ಭಾರತ ತಂಡದ ಅನಧಿಕೃತ ಬೌಲಿಂಗ್ ಕೋಚ್ ಆಗಿದ್ದರು ಎಂದರೆ ತಪ್ಪಲ್ಲ. ಬೌಲರ್‌ಗಳಿಗೆ ಸಲಹೆ, ಮಾರ್ಗದರ್ಶನ ನೀಡುವುದಷ್ಟೇ ಅಲ್ಲ, ಯೋಜಿತ ಕ್ಷೇತ್ರರಕ್ಷಣೆ ರೂಪಿಸುವುದರಲ್ಲೂ ಅವರು ನಿಸ್ಸೀಮ.
 

click me!