
ಮುಂಬೈ: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತೀಯ ತಂಡದಲ್ಲಿ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಬೇಕಾದರೆ, ಅವರು ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿರಬೇಕು ಎಂದು ಬಿಸಿಸಿಐ ಸ್ಪಷ್ಟ ಸಂದೇಶ ರವಾನಿಸಿದೆ. 2025ರ ವಿಜಯ್ ಹಜಾರೆ ಏಕದಿನ ಸರಣಿಯು ಮುಂಬರುವ ಡಿಸೆಂಬರ್ 24ರಿಂದ ಆರಂಭವಾಗಲಿದೆ. ಅದಕ್ಕೂ ಮೊದಲು, ಡಿಸೆಂಬರ್ 3 ರಿಂದ 9 ರವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲೂ ಇಬ್ಬರೂ ಮೈದಾನಕ್ಕಿಳಿಯಲಿದ್ದಾರೆ. ನಂತರ ಜನವರಿ 11 ರಿಂದ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಏಕದಿನ ಸರಣಿಯಲ್ಲಿ ಭಾರತ ಆಡಲಿದೆ. ಈ ಎರಡು ಸರಣಿಗಳ ನಡುವೆ ಇಬ್ಬರೂ ವಿಜಯ್ ಹಜಾರೆ ಟ್ರೋಫಿ ಆಡಬೇಕಾಗುತ್ತದೆ. ಇಬ್ಬರೂ ಟೆಸ್ಟ್ ಮತ್ತು ಟಿ20 ಮಾದರಿಗಳಿಂದ ನಿವೃತ್ತರಾಗಿದ್ದರೂ, ಏಕದಿನ ಪಂದ್ಯಗಳಲ್ಲಿ ಮುಂದುವರಿದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ತಾನು ಲಭ್ಯವಿರುವುದಾಗಿ ರೋಹಿತ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ (ಎಂಸಿಎ) ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಅಷ್ಟೇ ಅಲ್ಲ, ನವೆಂಬರ್ 26 ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೂ ರೋಹಿತ್ ಶರ್ಮಾ ಮೈದಾನಕ್ಕಿಳಿಯಲು ಒಲವು ತೋರಿದ್ದಾರೆ. ಅವರು ಮುಂಬೈನ ಶರದ್ ಪವಾರ್ ಒಳಾಂಗಣ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೊಹ್ಲಿ ಲಭ್ಯತೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಲಂಡನ್ನಲ್ಲಿ ವಾಸಿಸುತ್ತಿರುವ ಕೊಹ್ಲಿ ದೇಶೀಯ ಕ್ರಿಕೆಟ್ ಆಡುತ್ತಾರೆ ಎಂದು ಬಿಸಿಸಿಐ ನಿರೀಕ್ಷಿಸುತ್ತಿದೆ. ಕಳೆದ ತಿಂಗಳು, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿರಬೇಕಾದ ಅಗತ್ಯದ ಬಗ್ಗೆ ಮಾತನಾಡಿದ್ದರು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ಪರ ಕೊನೆಯ ಬಾರಿಗೆ ಆಡಿದ್ದರು. ಕೊನೆಯ ಪಂದ್ಯದಲ್ಲಿ ಇಬ್ಬರ ಜೊತೆಯಾಟವೇ ಭಾರತವನ್ನು ಗೆಲುವಿನತ್ತ ಮುನ್ನಡೆಸಿತ್ತು. ಮೂರು ಪಂದ್ಯಗಳಲ್ಲಿ ಎರಡರಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡಿದರು. ಮೂರನೇ ಪಂದ್ಯದಲ್ಲಿ ಶತಕ ಬಾರಿಸಿದರು. ಕೊಹ್ಲಿ ಮೊದಲ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರೂ, ಕೊನೆಯ ಪಂದ್ಯದಲ್ಲಿ ಅಜೇಯ 74 ರನ್ ಗಳಿಸಿದರು.
''ಭಾರತಕ್ಕಾಗಿ ಆಡಬೇಕಾದರೆ ದೇಶೀಯ ಕ್ರಿಕೆಟ್ ಆಡಬೇಕು ಎಂದು ಬೋರ್ಡ್ ಮತ್ತು ತಂಡದ ಆಡಳಿತ ಮಂಡಳಿ ಇಬ್ಬರಿಗೂ ತಿಳಿಸಿದೆ. ಎರಡು ಮಾದರಿಗಳಿಂದ ನಿವೃತ್ತರಾಗಿರುವುದರಿಂದ, ಫಿಟ್ನೆಸ್ ಕಾಪಾಡಿಕೊಳ್ಳಲು ಅವರು ದೇಶೀಯ ಕ್ರಿಕೆಟ್ ಆಡಬೇಕು,'' ಎಂದು ಬೋರ್ಡ್ ಮೂಲಗಳು ತಿಳಿಸಿವೆ. 2024ರ ವಿಶ್ವಕಪ್ ನಂತರ ರೋಹಿತ್ ಮತ್ತು ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತರಾಗಿದ್ದರು. 2024-25ರ ಆಸ್ಟ್ರೇಲಿಯಾ ಪ್ರವಾಸದ ನಂತರ ಟೆಸ್ಟ್ ವೃತ್ತಿಜೀವನವನ್ನೂ ಈ ಇಬ್ಬರು ದಿಗ್ಗಜರು ಕೊನೆಗೊಳಿಸಿದರು.
ಕಳೆದ ಸೀಸನ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಲಾ ಒಂದು ರಣಜಿ ಟ್ರೋಫಿ ಪಂದ್ಯವನ್ನು ಆಡಿದ್ದರು. ಜನವರಿಯಲ್ಲಿ, ಕೊಹ್ಲಿ 12 ವರ್ಷಗಳ ನಂತರ ದೆಹಲಿ ಪರ ಮತ್ತು ರೋಹಿತ್ 10 ವರ್ಷಗಳ ನಂತರ ಮುಂಬೈ ಪರ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.