
• ಗಣೇಶ್ ತಮ್ಮಡಿಹಳ್ಳಿ ಕನ್ನಡಪ್ರಭ ವಾರ್ತೆ
ಶಿವಮೊಗ್ಗ: ಸ್ಟಾರ್ ಆಟಗಾರ ಕರುಣ್ ನಾಯರ್ (ಅಜೇಯ 174) ಅವರ ಅಬ್ಬರದ ಶತಕದ ನೆರವಿನಿಂದ ಗೋವಾ ವಿರುದ್ಧ ರಣಜಿ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ತಂಡ ಸವಾಲಿನ ಮೊತ್ತ ಕಲೆ ಹಾಕಿದೆ.
ನವುಲೆ ಕೆಎಸ್ಎ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಭಾನುವಾರ ರಾಜ್ಯ ತಂಡ 110.1 ಓವರ್ಗಳಲ್ಲಿ 371 ರನ್ ಕಲೆಹಾಕಿತು. ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಗೋವಾ 1 ವಿಕೆಟ್ ನಷ್ಟದಲ್ಲಿ 28 ರನ್ ಗಳಿಸಿದ್ದು, ಇನ್ನೂ 343 ರನ್ ಹಿನ್ನಡೆಯಲ್ಲಿದೆ. ಮೊದಲ ದಿನ 86 ರನ್ ಗಳಿಸಿದ್ದ ಕರುಣ್ 2ನೇ ದಿನವೂ ಎಚ್ಚರಿಕೆಯ ಆಟವಾಡಿ 174 ರನ್ ಗಳಿಸಿ ಔಟ್ ಆಗದೇ ಉಳಿದರು. ಇವರ ಜೊತೆ ಮಿಂಚಿದ ಶ್ರೇಯಸ್ ಗೋಪಾಲ್ (57) ಹಾಗೂ ವೈಶಾಕ್ ವಿಜಯಕುಮಾರ್ (31) ತಂಡದ ಮೊತ್ತವನ್ನು 350ರ ಗಡಿ ದಾಟಿಸಲು ಸಾಥ್ ನೀಡಿದರು.
2ನೇ ದಿನ ಆರಂಭದಲ್ಲೇ ಶ್ರೇಯಸ್ ಗೋಪಾಲ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಶತಕ ಚೇತರಿಕೆ ನೀಡಿತು. ಅವರು 163 ಎಸೆತಗಳಲ್ಲಿ ಶತಕ ಬಾರಿಸಿದರು. ಆ ಬಳಿಕವೂ ಉತ್ತಮ ಆಟವಾಡಿದ ಕರುಣ್ ದ್ವಿಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಅವರಿಗೆ ಇತರರಿಂದ ಬೆಂಬಲ ಸಿಗಲಿಲ್ಲ. 267 ಎಸೆತಗಳನ್ನು ಎದುರಿಸಿದ ಕರುಣ್ 3 ಸಿಕ್ಸರ್ ಹಾಗೂ 14 ಬೌಂಡರಿ ಸಮೇತ 174 ರನ್ ಗಳಿಸಿ ಅಜೇಯರಾಗಿ ಉಳಿದರು. ವಿದ್ವತ್ ಕಾವೇರಪ್ಪ ರನ್ ಔಟ್ ಆಗುವುದರೊಂದಿಗೆ ರಾಜ್ಯದ ಇನ್ನಿಂಗ್ಸ್ಗೆ ತೆರೆ ಬಿತ್ತು. ಗೋವಾ ಪರ ಅರ್ಜುನ್ ತೆಂಡುಲ್ಕರ್ ಹಾಗೂ ಕನ್ನಡಿಗ ವೇಗಿ ವಾಸುಕಿ ಕೌಶಿಕ್ ತಲಾ 3 ವಿಕೆಟ್ ಪಡೆದರು.
33 ವರ್ಷದ ಕರುಣ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 25ನೇ ಶತಕ ಪೂರ್ಣಗೊಳಿಸಿದರು. ಅವರು 122ನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿದ್ದು, 48.64 ಸರಾಸರಿಯಲ್ಲಿ 8,930 ರನ್ ಕಲೆಹಾಕಿದ್ದಾರೆ. ಇದರಲ್ಲಿ 25 ಶತಕ, 38 ಅರ್ಧಶತಕ ಒಳಗೊಂಡಿವೆ. 2015ರ ರಣಜಿ ಫೈನಲ್ನಲ್ಲಿ ತಮಿಳುನಾಡು ವಿರುದ್ದ ಗಳಿಸಿದ 328 ರನ್ ಅವರ ಗರಿಷ್ಠ ಸ್ಕೋರ್.
ಬಳಿಕ ಇನ್ನಿಂಗ್ಸ್ ಆರಂಭಿಸಿರುವ ಗೋವಾ ತಂಡಕ್ಕೆ ಅಭಿಲಾಷ್ ಶೆಟ್ಟಿ ಆರಂಭಿಕ ಆಘಾತ ನೀಡಿದರು. ಉತ್ತಮ ಆರಂಭದ ನಿರೀಕ್ಷೆಯನ್ನು ಮೂಡಿಸಿದ್ದ ಮಂಥನ್ ಕೌತುಕರ್ 9 ರನ್ ಗಳಿಸಿ, ಅಭಿಲಾಷ್ ಶೆಟ್ಟಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಮಳೆ ಅಡ್ಡಿ: ಪಂದ್ಯದ 2ನೇ ದಿನವೂ ಮಳೆ ಅಡ್ಡಿಪಡಿಸಿತು. ಗೋವಾ 13 ಓವರ್ಗಳಲ್ಲಿ 28ಕ್ಕೆ 1 ವಿಕೆಟ್ ಕಳೆದುಕೊಂಡಿದ್ದಾಗ ಮಳೆ ಸುರಿಯಿತು. ಕೆಲ ಸಮಯದ ಬಳಿಕವೂ ಮಳೆ ನಿಲ್ಲದ ಕಾರಣ ಎರಡನೇ ದಿನದ ಆಟವನ್ನು ಅಲ್ಲಿಗೇ ಕೊನೆಗೊಳಿಸಲಾಯಿತು.
ಸ್ಕೋರ್: ಕರ್ನಾಟಕ 110.1 ಓವರಲ್ಲಿ 371/10 (ಕರುಣ್ ಅಜೇಯ 174, ಶ್ರೇಯಸ್ 57, ವೈಶಾಕ್ 31, ಅರ್ಜುನ್ 3-100, ವಿ.ಕೌಶಿಕ್ 3-35),
ಗೋವಾ 13 ಓವರ್ಗಳಲ್ಲಿ 28/1 (ಮಂಥನ್ 9, ಅಭಿಲಾಷ್ ಶೆಟ್ಟಿ 1-9)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.