ಭಾರತ ಕ್ರಿಕೆಟ್‌ಗೆ ಕಳಂಕ ಮೆತ್ತಿದ KPL!

By Kannadaprabha NewsFirst Published Nov 9, 2019, 12:52 PM IST
Highlights

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಇದೀಗ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ದಿಗ್ಗಜ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡಕ್ಕೆ ನೀಡಿದ್ದ ಕೆಎಸ್‌ಸಿಎ ಸಂಸ್ಥೆ ಕೆಪಿಎಲ್ ಟೂರ್ನಿಯಿಂದಾಗಿ ಅಪವಾದ ಎದುರಿಸುವಂತಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

ಬೆಂಗ​ಳೂರು(ನ.09): ಭಾರ​ತೀಯ ಕ್ರಿಕೆಟ್‌ನಲ್ಲಿ ಕರ್ನಾ​ಟಕ ತಂಡಕ್ಕೆ ದೊಡ್ಡ ಹೆಸರಿದೆ. ಕರ್ನಾ​ಟಕದ ಆಟ​ಗಾ​ರರ ಬಗ್ಗೆ ದೇಶಾ​ದ್ಯಂತ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಲ್ಲಿ ವಿಶೇಷ ಪ್ರೀತಿ ಇದೆ. ಬಿ.ಎಸ್‌.ಚಂದ್ರಶೇಖರ್‌, ಇಎಎಸ್‌ ಪ್ರಸನ್ನ, ಜಿ.ಆರ್‌.ವಿಶ್ವನಾಥ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಜಾವ​ಗಲ್‌ ಶ್ರೀನಾಥ್‌ರಂತ​ಹ ಸಾರ್ವ​ಕಾಲಿಕ ಶ್ರೇಷ್ಠ ಕ್ರಿಕೆ​ಟಿ​ಗ​ರನ್ನು ರಾಜ್ಯ ಕೊಡುಗೆ ನೀಡಿದೆ. ಹೆಚ್ಚಿನ ವಿವಾದಗಳಿ​ಲ್ಲದೆ ದೇಶದ ಕ್ರಿಕೆಟ್‌ಗೆ ಪ್ರತಿಭೆಗಳನ್ನು ಪೂರೈ​ಸು​ತ್ತಿದ್ದ ಕರ್ನಾ​ಟಕದಲ್ಲೀಗ ಕೆಪಿ​ಎಲ್‌ ಟಿ20 ಟೂರ್ನಿಯಿಂದಾಗಿ ಕಳಂಕ ಮೆತ್ತಿಕೊಂಡಿದೆ.

KPL ಫಿಕ್ಸಿಂಗ್: ಗೌತಮ್, ಖಾಜಿ ಅಮಾನತು ಮಾಡಿದ KSCA

ಕರ್ನಾ​ಟಕ ಪ್ರೀಮಿ​ಯರ್‌ ಲೀಗ್‌ನ ಸ್ಪಾಟ್‌ ಫಿಕ್ಸಿಂಗ್‌, ಬೆಟ್ಟಿಂಗ್‌ ಪ್ರಕ​ರ​ಣ ದೇಶದ ಕ್ರಿಕೆಟ್‌ ಅಭಿ​ಮಾ​ನಿ​ಗ​ಳಲ್ಲಿ ಭಾರೀ ಆಘಾತ ಮೂಡಿ​ಸಿದೆ. ರಾಜ್ಯದ ಯುವ ಪ್ರತಿಭೆಗಳನ್ನು ಮುಖ್ಯ​ವಾ​ಹಿ​ನಿಗೆ ತಂದು, ಭಾರತ ತಂಡ ಇಲ್ಲವೇ ಐಪಿ​ಎಲ್‌ ತಂಡ​ಗ​ಳಲ್ಲಿ ಸ್ಥಾನ ಗಿಟ್ಟಿಸಲು ನೆರ​ವಾ​ಗುವ ಉದ್ದೇ​ಶ​ದಿಂದ ಆರಂಭ​ಗೊಂಡ ಟೂರ್ನಿ ಇದೀಗ ಅನ​ಗತ್ಯ ವಿವಾದಕ್ಕೆ ಸಿಲು​ಕಿದೆ.

KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್

ಕೆಪಿಎಲ್‌ನಿಂದಾಗೇ ಕೆ.ಸಿ.​ಕಾ​ರ್ಯಪ್ಪ, ಶಿವಿಲ್‌ ಕೌಶಿಕ್‌ರಂತ​ಹ ಆಟ​ಗಾ​ರರು ಐಪಿ​ಎಲ್‌ ತಂಡ​ಗ​ಳಿಗೆ ಆಯ್ಕೆಯಾದರು. ದೇಶದ ನಂ.1 ಟಿ20 ಲೀಗ್‌ ಎಂದು ಕರೆ​ಸಿ​ಕೊ​ಳ್ಳುವ ಕೆಪಿ​ಎಲ್‌, ಭ್ರಷ್ಟಾ​ಚಾರದ ಗೂಡಾಗಿರುವುದು ಕ್ರಿಕೆಟ್‌ ವಲ​ಯ​ದಲ್ಲಿ ಬೇಸರಕ್ಕೆ ಕಾರ​ಣ​ವಾ​ಗಿದೆ. ಸಿ.ಎಂ.ಗೌ​ತಮ್‌, ಅಬ್ರಾರ್‌ ಖಾಜಿ​ಯಂತಹ ಹಿರಿಯ ಹಾಗೂ ರಣಜಿ ತಂಡ​ದಲ್ಲಿ ಹಲವು ವರ್ಷಗಳ ಕಾಲ ಆಡಿದ ಆಟ​ಗಾ​ರರೇ ಭ್ರಷ್ಟಾ​ಚಾರದಲ್ಲಿ ಭಾಗಿ​ಯಾ​ಗಿ​ರು​ವುದು ಅಭಿ​ಮಾ​ನಿ​ಗ​ಳಿಗೆ ಇನ್ನೂ ನಂಬ​ಲಾ​ಗದ ಸಂಗ​ತಿ​ಯಾ​ಗಿದೆ.

ಆಜೀವ ನಿಷೇ​ಧಕ್ಕೆ ಆಗ್ರ​ಹ: ಆಟಕ್ಕೆ ಕಳಂಕ ತಂದಿ​ರುವ ಆಟ​ಗಾ​ರ​ರನ್ನು ಕೆಎಸ್‌ಸಿಎ ತಕ್ಷಣ ಅಮಾ​ನ​ತು​ಗೊ​ಳಿ​ಸಿದೆ. ಆದರೆ ಅವರ ಮೇಲೆ ಆಜೀವ ನಿಷೇಧ ಹೇರ​ಬೇಕು ಎಂದು ಹಲವರು ಆಗ್ರ​ಹಿ​ಸು​ತ್ತಿ​ದ್ದಾರೆ. ಐಪಿ​ಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕರಣದಲ್ಲಿ ಸಿಲುಕಿದ ಕಾರಣಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜ​ಸ್ಥಾನ ರಾಯಲ್ಸ್‌ ತಂಡ​ವನ್ನು 2 ವರ್ಷಗಳ ಕಾಲ ನಿಷೇಧಗೊಳಿ​ಸ​ಲಾ​ಗಿತ್ತು. ಕೆಪಿಎಲ್‌ನಲ್ಲಿ ಭ್ರಷ್ಟಾಚಾರ ನಡೆ​ಸಿ​ರುವ ತಂಡ​ಗ​ಳನ್ನೂ ನಿಷೇಧಗೊ​ಳಿ​ಸು​ವಂತೆ ಕೂಗು ಕೇಳಿ​ಬ​ರು​ತ್ತಿದೆ. ನಂಬ​ಲಾ​ರ್ಹ ಮೂಲ​ಗಳ ಪ್ರಕಾರ, ಕೆಪಿ​ಎಲ್‌ ಪ್ರಕ​ರಣ ಬಿಸಿ​ಸಿಐಗೆ ಭಾರೀ ಮುಜು​ಗರ ತಂದಿದ್ದು, ಟೂರ್ನಿಯ ಮಾನ್ಯತೆಯನ್ನು ರದ್ದು​ಗೊ​ಳಿ​ಸುವ ಸಾಧ್ಯತೆ ಇದೆ ಎನ್ನ​ಲಾ​ಗಿದೆ.

ದೊಡ್ಡ ವ್ಯಕ್ತಿಗಳು ಭಾಗಿ?

ಕೆಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕ​ರ​ಣ ದಿನೇ ದಿನೇ ಹೊಸ ತಿರು​ವು​ಗ​ಳನ್ನು ಪಡೆ​ದು​ಕೊ​ಳ್ಳು​ತ್ತಿದೆ. ಆಟ​ಗಾ​ರರು, ಕೋಚ್‌, ತಂಡ​ಗಳ ಮಾಲೀ​ಕ ಸಿಕ್ಕಿ​ಬಿ​ದ್ದಿ​ದ್ದಾರೆ. ಮೂಲ​ಗಳ ಪ್ರಕಾ​ರ ಮತ್ತಷ್ಟು ಆಟ​ಗಾ​ರರು ಭ್ರಷ್ಟಾಚಾರದಲ್ಲಿ ತೊಡ​ಗಿ​ರು​ವು​ದಾಗಿ ತಿಳಿ​ದು​ಬಂದಿದೆ. ಅಷ್ಟೇ ಅಲ್ಲ, ಹಗರಣದಲ್ಲಿ ರಾಜ್ಯ ಕ್ರಿಕೆಟ್‌ನ ಕೆಲ ದೊಡ್ಡ ವ್ಯಕ್ತಿ​ಗಳ ಹೆಸರು ಸಹ ಇದೆ ಎಂಬ ಸುದ್ದಿ ಹರಿ​ದಾ​ಡು​ತ್ತಿದೆ. ಸದ್ಯ​ದಲ್ಲೇ ಈ ಪ್ರಕ​ರಣದಲ್ಲಿ ಇನ್ನೂ ಕೆಲ​ವರು ಸಿಕ್ಕಿ​ಬೀ​ಳಬ​ಹುದು ಎನ್ನಲಾ​ಗಿದೆ.
 

click me!