
ಬೆಂಗಳೂರು(ಜೂ.02): 2021-2022ನೇ ಸಾಲಿನ ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ (Ranji Trophy Knock out match) 20 ಸದಸ್ಯರ ಕರ್ನಾಟಕ ತಂಡ (Karnataka Cricket Squad) ಪ್ರಕಟಗೊಂಡಿದ್ದು, ತಾರಾ ಆಟಗಾರರಾದ ಮಯಾಂಕ್ ಅಗರ್ವಾಲ್ (Mayank Agarwal), ದೇವದತ್ ಪಡಿಕ್ಕಲ್ (Devdutt Padikkal) ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮನೀಶ್ ಪಾಂಡೆ (Manish Pandey) ನಾಯಕರಾಗಿ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗಿರುವ ಕೆ.ಎಲ್.ರಾಹುಲ್ (KL Rahul) ಮತ್ತು ಪ್ರಸಿದ್ಧ್ ಕೃಷ್ಣ ಅವರ ಸೇವೆ ಲಭ್ಯವಿಲ್ಲ. ಜೂನ್ 6ರಿಂದ ಬೆಂಗಳೂರು ಸಮೀಪದ ಆಲೂರು ಮೈದಾನದಲ್ಲಿ ಕರ್ನಾಟಕ, ಉತ್ತರ ಪ್ರದೇಶ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿದೆ.
ದಕ್ಷಿಣ ಆಫ್ರಿಕಾ ವಿರುದ್ದದ 5 ಪಂದ್ಯಗಳ ಟಿ20 ಸರಣಿಗೆ ಕೆ ಎಲ್ ರಾಹುಲ್, ಟೀಂ ಇಂಡಿಯಾ (Team India) ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ದ ಮರು ನಿಗದಿಪಡಿಸಲಾಗಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ. ವರ್ಕ್ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಪ್ರಸಿದ್ಧ್ ಕೃಷ್ಣಗೆ (Prasidh Krishna) ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಪ್ರಸಿದ್ಧ್ ಕೃಷ್ಣಗೆ ವಿಶ್ರಾಂತಿ ನೀಡಿರುವುದರಿಂದ ವಿ ಕೌಶಿಕ್ಗೆ ರಾಜ್ಯ ತಂಡದಲ್ಲಿ ಮಣೆ ಹಾಕಲಾಗಿದೆ.
ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಸ್ಪಿನ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ. ರಾಜ್ಯ ತಂಡದಲ್ಲಿ ಅನುಭವಿ ಸ್ಪಿನ್ನರ್ಗಳಾದ ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ ಸುಚಿತ್, ಕೆ ಸಿ ಕರಿಯಪ್ಪ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿ ತಾರಾ ಆಟಗಾರರಾದ ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್ (Karun Nair), ದೇವದತ್ ಪಡಿಕ್ಕಲ್ ತಮ್ಮ ಅನುಭವವನ್ನು ನಾಕೌಟ್ ಪಂದ್ಯಗಳಲ್ಲಿ ಉತ್ತಮವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮೇಲ್ನೋಟಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಕರ್ನಾಟಕ ತಂಡವು ಸಾಕಷ್ಟು ಸಮತೋಲಿತವಾಗಿ ಕಂಡು ಬಂದಿದ್ದು, ಉತ್ತರ ಪ್ರದೇಶ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕರ್ನಾಟಕ ತಂಡವು, ನಾಕೌಟ್ ಹಂತದಲ್ಲಿ ತನ್ನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
2022ರ ಐಪಿಎಲ್ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್ಗಳಿವರು..!
ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕನ್ನಡಿಗರಾದ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಗಮನಾರ್ಹ ಪ್ರದರ್ಶನ ತೋರಲು ವಿಫಲರಾಗಿದ್ದರು. ಐಪಿಎಲ್ ಟೂರ್ನಿಯಲ್ಲಿ ಮಾಡಿದ ಯಡವಟ್ಟುಗಳನ್ನು ತಿದ್ದಿಕೊಂಡು ರಣಜಿ ಟ್ರೋಫಿ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಈ ಎಲ್ಲಾ ಆಟಗಾರರು ಯಾವ ರೀತಿಯ ಪ್ರದರ್ಶನ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕರ್ನಾಟಕ ಕ್ರಿಕೆಟ್ ತಂಡ: ಮನೀಶ್ ಪಾಂಡೆ(ನಾಯಕ), ಆರ್.ಸಮರ್ಥ್(ಉಪನಾಯಕ), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಕೆ.ವಿ.ಸಿದ್ಧಾರ್ಥ್, ನಿಶ್ಚಲ್ ಡಿ., ಶರತ್ ಶ್ರೀನಿವಾಸ್, ಬಿ.ಆರ್.ಶರತ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಶುಭಾಂಗ್, ಜೆ.ಸುಚಿತ್, ಕೆ.ಸಿ.ಕಾರ್ಯಪ್ಪ, ರೋನಿತ್ ಮೋರೆ, ವಿ.ಕೌಶಿಕ್, ವೈಶಾಖ್ ವಿ., ವೆಂಕಟೇಶ್ ಎಂ., ವಿದ್ವತ್ ಕಾವೇರಪ್ಪ, ಕಿಶನ್ ಎಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.