
ಜೆದ್ದಾ: ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಆರ್ಸಿಬಿ ಫ್ರಾಂಚೈಸಿಯ ನಡೆಗೆ ಅಭಿಮಾನಿಗಳಿಂದ ಈ ಬಾರಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ ಕರ್ನಾಟಕದ ತಾರಾ ಆಟಗಾರರ ಕಡೆಗಣನೆ ಅಭಿಮಾನಿಗಳನ್ನು ಕೆರಳಿಸಿದೆ. ಕೆ.ಎಲ್.ರಾಹುಲ್ರನ್ನು ಆರ್ಸಿಬಿ ಹರಾಜಿನಲ್ಲಿ ಕೊಂಡುಕೊಳ್ಳಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದರು. ರಾಹುಲ್ ಹರಾಜು ಆರಂಭಗೊಂಡಾಗ ಆರ್ಸಿಬಿ ಬಳಿ ಇನ್ನೂ 70 ಕೋಟಿ ರು. ಬಾಕಿ ಇತ್ತು. ಆದರೂ, ಕರ್ನಾಟಕದ ತಾರಾ ಆಟಗಾರನನ್ನು ಖರೀದಿಸದೆ ಇರಲು ನಿರ್ಧರಿಸಿದ್ದಕ್ಕೆ ಸಾಮಾಜಿಕ ತಾಣದಲ್ಲಿ ಫ್ಯಾನ್ಸ್ ಆರ್ಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಲ ಮಾಜಿ ಕ್ರಿಕೆಟಿಗರು, ಸೆಲೆಬ್ರಿಟಿಗಳು ಸಹ ಆರ್ಸಿಬಿ ನಿರ್ಧಾರವನ್ನು ಖಂಡಿಸಿದ್ದಾರೆ. ಇನ್ನು ಪ್ರಸಿದ್ಧ ಕೃಷ್ಣ, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ವೈಶಾಖ್ ವಿಜಯ್ಕುಮಾರ್ರನ್ನೂ ಖರೀದಿಸಲು ಆರ್ಸಿಬಿ ಹಿಂದೇಟು ಹಾಕಿದ್ದಕ್ಕೂ ಟೀಕೆ ವ್ಯಕ್ತವಾಗಿದೆ. ಅಲ್ಲದೇ, ಫ್ರಾಂಚೈಸಿಯು ಹರಾಜು ಪ್ರಕ್ರಿಯೆಯಲ್ಲಿ ತೋರಿದ ತಂತ್ರಗಾರಿಕೆ ಬಗ್ಗೆಯೂ ಅನೇಕರಿಂದ ಆಕ್ಷೇಪ ವ್ಯಕ್ತವಾಗಿದೆ. ಹೇಜಲ್ವುಡ್ಗೆ 12.5 ಕೋಟಿ, ಜಿತೇಶ್ 11 ಕೋಟಿ ಅಗತ್ಯವಿತ್ತೇ ಎಂದು ಅಭಿಮಾನಿಗಳು ತಂಡದ ಆಡಳಿತವನ್ನು ಪ್ರಶ್ನಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ಮಾಜಿ ಸ್ಪಿನ್ನರ್ಗೆ ಜಾಕ್ಪಾಟ್; ಆರ್ಸಿಬಿ ಮಾಜಿ ಹುಲಿ ಚಹಲ್ ಜಾಲಿ ಜಾಲಿ!
ಮ್ಯಾಕ್ಸಿಗೆ 4.2 ಕೋಟಿಗೆ ಸಿಕ್ಕರೂ ಆರ್ಟಿಎಂ ಇಲ್ಲ!
ತಾರಾ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ಗೆ ಕೇವಲ ₹4.2 ಕೋಟಿ ಸಿಕ್ಕರೂ, ಆರ್ಸಿಬಿ ಆರ್ಟಿಎಂ ಕಾರ್ಡ್ ಬಳಕೆ ಮಾಡದೆ ಅಚ್ಚರಿ ಮೂಡಿಸಿತು. ಮ್ಯಾಕ್ಸ್ವೆಲ್ರನ್ನು ಪಂಜಾಬ್ ₹4.2 ಕೋಟಿಗೆ ಖರೀದಿ ಮಾಡಿತು. ಹರಾಜುಗಾರ್ತಿ ಆರ್ಸಿಬಿ ಮಾಲಿಕರನ್ನು ಆರ್ಟಿಎಂ ಬಳಕೆ ಮಾಡುತ್ತೀರಾ ಎಂದು ಕೇಳಿದಾಗ, ಇಲ್ಲ ಎನ್ನುವ ಉತ್ತರ ಬಂತು. ಇದು ಆರ್ಸಿಬಿ ಅಭಿಮಾನಿಗಳಿಗೆ ಆಘಾತ ಮೂಡಿಸಿತು.
ಸ್ಟಾರ್ಕ್, ಮಿಲ್ಲರ್, ರಾಹುಲ್ ಎಲ್ಲರಿಗೂ ಆರ್ಸಿಬಿ ಬಿಡ್, ಆದ್ರೆ ಯಾರನ್ನೂ ಖರೀದಿಸಿಲ್ಲ!
ಆರ್ಸಿಬಿ ಬಿಡ್ಡಿಂಗ್ ನಡೆಸಿದ ರೀತಿ ಅಭಿಮಾನಿಗಳನ್ನು ಭಾರೀ ಗೊಂದಲಕ್ಕೆ ಸಿಲುಕಿಸಿತು. ಮಿಚೆಲ್ ಸ್ಟಾರ್ಕ್ಗೆ 11.5 ಕೋಟಿ ವರೆಗೂ ಬಿಡ್ ಮಾಡಿ ಆರ್ಬಿ ಹಿಂದೆ ಸರಿಯಿತು. ಸ್ಟಾರ್ಕ್ ₹11.75 ಕೋಟಿಗೆ ಡೆಲ್ಲಿ ಪಾಲಾದರು. ಕೆ.ಎಲ್.ರಾಹುಲ್ಗೆ ₹10.5 ಕೋಟಿ ವರೆಗೂ ಬಿಡ್ ಸಲ್ಲಿಸಿ ಆರ್ಸಿಬಿ ಸುಮ್ಮನಾಯಿತು. ರಾಹುಲ್ ₹14 ಕೋಟಿಗೆ ಡೆಲ್ಲಿ ಪಾಲಾದರು. ಡೇವಿಡ್ ಮಿಲ್ಲರ್ಗೆ ₹7.25 ಕೋಟಿ ಕೊಡಲು ಸಿದ್ಧ ಎಂದು ಬಿಡ್ ಸಲ್ಲಿಕೆ ಮಾಡಿದ್ದ ಆರ್ಬಿ, ಮುಂದಕ್ಕೆ ಬಿಡ್ ಮಾಡಲಿಲ್ಲ. ಮಿಲ್ಲರ್ ₹7.5 ಕೋಟಿಗೆ ಲಖನೌಗೆ ಸೇರ್ಪಡೆಗೊಂಡರು. ರಾಜ್ಯದ ಸ್ಫೋಟಕ ಆಟಗಾರ ಅಭಿನವ್ ಮನೋಹರ್ಗೂ ಬಿಡ್ ಆರಂಭಿಸಿ, ₹1 ಕೋಟಿ ತಲುಪಿದ ಬಳಿಕ ಬಿಡ್ ಮುಂದುವರಿಸಲಿಲ್ಲ.
ಜಿತೇಶ್ಗೆ ಏಕಾಏಕಿ 4 ಕೋಟಿ ಹೆಚ್ಚಿಸಿ ₹11 ಕೋಟಿಗೆ ಖರೀದಿ
ಹರಾಜಿನಲ್ಲಿ ಜಿತೇಶ್ ಶರ್ಮಾಗೆ ಆರ್ಸಿಬಿ ನೀಡಿದ ಮೊತ್ತದ ಬಗ್ಗೆಯೂ ಸಾಮಾಜಿಕ ತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ವಿಕೆಟ್ ಕೀಪರ್ ಜಿತೇಶ್ರನ್ನು ಖರೀದಿಸಲು ಚೆನ್ನೈ, ಆರ್ಸಿಬಿ, ಪಂಜಾಬ್ ಪೈಪೋಟಿಗೆ ಇಳಿದಿದ್ದವು. ಒಂದು ಹಂತದಲ್ಲಿ ಜಿತೇಶ್ಗೆ ಆರ್ಸಿಬಿ ₹7 ಕೋಟಿ ಬಿಡ್ ಮಾಡಿತು. ಆಗ ಪಂಜಾಬ್ ಆರ್ಟಿಎಂ ಕಾರ್ಡ್ ಬಳಸಿತು. ಈ ವೇಳೆ ಆರ್ಸಿಬಿ ಬಿಡ್ ಮೊತ್ತವನ್ನು ಏಕಾಏಕಿ ₹11 ಕೋಟಿಗೆ ಹೆಚ್ಚಿಸಿತು. ಪಂಜಾಬ್ ಆರ್ಟಿಎಂ ಕಾರ್ಡ್ ಹಿಂಪಡೆದು, ಜಿತೇಶ್ ರನ್ನು ಆರ್ಸಿಬಿಗೆ ಬಿಟ್ಟುಕೊಟ್ಟಿತು.
ವೆಂಕಿ ಅಯ್ಯರ್ಗೆ ₹22 ಕೋಟಿ ನೀಡಲು ಸಿದ್ಧವಿದ್ದ ಆರ್ಸಿಬಿ!
ಕೆ.ಎಲ್.ರಾಹುಲ್ಗೆ ₹14 ಕೋಟಿ ಕೊಡಲು ಹಿಂದೇಟು ಹಾಕಿದ ಆರ್ಸಿಬಿ, ವೆಂಕಟೇಶ್ ಅಯ್ಯರ್ಗೆ ₹22 ಕೋಟಿ ವರೆಗೂ ಬಿಡ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಇನ್ನು ಕಳೆದ ವಾರ ನಡೆದ ಆರ್ಸಿಬಿ ಟ್ರಯಲ್ಸ್ನಲ್ಲಿ ಅಬ್ಬರಿಸಿದ್ದ ಅಂಗ್ಕೃಷ್ ರಘುವಂಶಿಯನ್ನೂ ಖರೀದಿಸದೆ ಅಚ್ಚರಿ ಮೂಡಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.