2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೆಕೆಆರ್ ಸೋತಿದೆ. ನಾಯಕ ರಹಾನೆ ಬ್ಯಾಟಿಂಗ್ನಲ್ಲಿ ಮಿಂಚಿದರೂ, ಬೌಲಿಂಗ್ ತಂತ್ರಗಳಿಂದ ತಂಡಕ್ಕೆ ಮುಳುವಾದರು.
ಕೋಲ್ಕತಾ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಎದುರು ಭರ್ಜರಿ ಗೆಲುವು ಸಾಧಿಸುವಲ್ಲಿ ಆರ್ಸಿಬಿ ತಂಡವು ಯಶಸ್ವಿಯಾಗಿದೆ. ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದರಾದರೂ, ನಾಯಕನಾಗಿ ಎರಡು ಮಹಾ ಯಡವಟ್ಟು ಮಾಡುವ ಮೂಲಕ ಟೀಂ ಇಂಡಿಯಾ ಸೋಲಿಗೆ ಕಾರಣ ಎನಿಸಿಕೊಂಡರು.
ಏನು ಆ ಎರಡು ಮಹಾ ಯಡವಟ್ಟುಗಳು?:
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ನಾಯಕ ಅಜಿಂಕ್ಯ ರಹಾನೆ ಕೇವಲ 31 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 56 ರನ್ ಸಿಡಿಸಿ ಮಿಂಚಿದರು. ಆದರೆ ಬೌಲಿಂಗ್ ಮಾಡಲಿಳಿದಾಗ ನಾಯಕ ರಹಾನೆ ಮಾಡಿದ ತಪ್ಪಿಗೆ ಕೆಕೆಆರ್ ಬೆಲೆ ತೆರುವಂತೆ ಮಾಡಿತು. ಅಷ್ಟಕ್ಕೂ ಏನವು ತಪ್ಪುಗಳು ನೋಡೋಣ ಬನ್ನಿ.
ಇದನ್ನೂ ಓದಿ: ಬ್ಯಾಟ್ ವಿಕೆಟ್ಗೆ ಬಡಿದರೂ ಸುನಿಲ್ ನರೈನ್ ಅಂಪೈರ್ ಔಟ್ ಎಂದು ಯಾಕೆ ಘೋಷಿಸಲಿಲ್ಲ? ಅಷ್ಟಕ್ಕೂ ರೂಲ್ಸ್ ಏನು?
1. ಸುನಿಲ್ ನರೈನ್ ಅವರನ್ನು ತಡವಾಗಿ ಬೌಲಿಂಗ್ ಮಾಡಲಿಳಿಸಿದ್ದು:
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ಗಳು ಮೊದಲ ಪಂದ್ಯದಲ್ಲೇ ಬಲವಾಗಿ ದಂಡನೆಗೊಳಗಾದರು. ಆರ್ಸಿಬಿ ಆರಂಭಿಕ ಜೋಡಿಯಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 95 ರನ್ಗಳ ಜತೆಯಾಟವಾಡಿತು. ಪವರ್ ಪ್ಲೇ ನಲ್ಲಿ ತಂಡದ ಪ್ರಮುಖ ಸ್ಪಿನ್ ಅಸ್ತ್ರ ಸುನಿಲ್ ನರೈನ್ ಅವರನ್ನು ಬೌಲಿಂಗ್ ಮಾಡಲು ಕಣಕ್ಕಿಳಿಸಲಿಲ್ಲ. ವೈಭವ್ ಅರೋರ, ವರುಣ್ ಚಕ್ರವರ್ತಿ ಹಾಗೂ ಸ್ಪೆನ್ಸರ್ ಜಾನ್ಸನ್ ಮೊದಲ ಪವರ್ ಪ್ಲೇನಲ್ಲೇ 80 ರನ್ ಚಚ್ಚಿಸಿಕೊಂಡರು. ಆದರೆ ಇದಾದ ಬಳಿಕ ಬೌಲಿಂಗ್ ಮಾಡಲಿಳಿದ ಸುನಿಲ್ ನರೈನ್ 4 ಓವರ್ನಲ್ಲಿ ಕೇವಲ 27 ರನ್ ನೀಡಿ ಒಂದು ವಿಕೆಟ್ ಕಬಳಿಸಿ ಕೆಕೆಆರ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಒಂದು ವೇಳೆ ನರೈನ್ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡಲಿಳಿದಿದ್ದರೇ ಬಹುಶಃ ಫಲಿತಾಂಶ ಬೇರೆಯಾಗುವ ಸಾಧ್ಯತೆಯಿತ್ತು.
ಇದನ್ನೂ ಓದಿ: ಕಪ್ ಗೆಲ್ಲಲು ರಾಯಲ್ ಎಂಟ್ರಿ ಕೊಟ್ಟ RCB; ಸೋಲಿನ ಸರಪಳಿ ಕಳಚಿಕೊಂಡ ಆರ್ಸಿಬಿ
2. ಆಂಡ್ರೆ ರಸೆಲ್ಗೆ ಬೌಲಿಂಗ್ ನೀಡದೇ ಇದ್ದದ್ದು:
ಆರ್ಸಿಬಿ ಎದುರಿನ ಪಂದ್ಯದಲ್ಲಿ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಕೇವಲ ಐವರು ಬೌಲರ್ಗಳನ್ನು ಮಾತ್ರ ಬೌಲಿಂಗ್ ಮಾಡಲು ಬಳಸಿಕೊಂಡರು. ವೈಭವ್ ಅರೋರ, ವರುಣ್ ಚಕ್ರವರ್ತಿ, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ ಹಾಗೂ ಸುನಿಲ್ ನರೈನ್ ಮಾತ್ರ ಬೌಲಿಂಗ್ ಮಾಡಿದರು. ಅಜಿಂಕ್ಯ ರಹಾನೆ ಬಳಿ ಆಂಡ್ರೆ ರಸೆಲ್ ಬಳಿ ಬೌಲಿಂಗ್ ಮಾಡಿಸುವ ಅವಕಾಶವಿದ್ದರೂ ಬೌಲಿಂಗ್ ಮಾಡಿಸದೇ ತಪ್ಪು ಮಾಡಿದರು. ಸಾಕಷ್ಟು ಅನುಭವಿ ಬೌಲರ್ ಆಗಿರುವ ರಸೆಲ್ ಅವರಿಗೆ ಬೌಲಿಂಗ್ ನೀಡದೇ ರಹಾನೆ ತಪ್ಪು ಮಾಡಿದರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.