
ಬೆಂಗಳೂರು(ಮಾ.25): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದಿನಿಂದ ತವರಿನಲ್ಲಿ ಐಪಿಎಲ್ ಪಂದ್ಯಗಳನ್ನಾಡುತ್ತಿದೆ. ಹೀಗಾಗಿ ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ವರ್ಷದ ಬಳಿಕ ತವರಿನಲ್ಲಿ ಐಪಿಎಲ್ ಪಂದ್ಯ ನೋಡಲು ಫ್ಯಾನ್ಸ್ ಜತನದಿಂದ ಕಾಯ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರನ್ ಹೊಳೆ ಹರಿಯೋದು ಗ್ಯಾರಂಟಿ. ಬೆಂಗಳೂರಿನಲ್ಲಿ ಪಂದ್ಯವಾಡಲು ಆಟಗಾರರು ಸಹ ಕಾಯ್ತಿದ್ದಾರೆ.
ಸದ್ಯ 3 ಮ್ಯಾಚ್ಗಳಿಗೆ ಆತಿಥ್ಯ ವಹಿಸಲಿದೆ ಚಿನ್ನಸ್ವಾಮಿ ಸ್ಟೇಡಿಯಂ
IPLನಲ್ಲಿ ಅತಿಹೆಚ್ಚು ಫ್ಯಾನ್ಸ್ಗಳನ್ನ ಹೊಂದಿರುವ ಮೂರು ತಂಡಗಳಲ್ಲಿ RCB ಸಹ ಒಂದು. ಇಂತಹ ಟೀಮ್, ತವರಿನಲ್ಲಿ ಪಂದ್ಯ ಆಡ್ರಿದೆ ಕೇಳಬೇಕಾ..? IPL ಆರಂಭವಾಗಿ ಮೂರು ದಿನ ಆಗಿದೆ. ಆಗ್ಲೇ ರೆಡ್ ಆರ್ಮಿ ಪಡೆ ಇಂದು ತನ್ನ 2ನೇ ಪಂದ್ಯವಾಡ್ತಿದೆ. ಅದು ತವರಿನಲ್ಲಿ. ಎಲ್ಲಾ 10 ತಂಡಗಳು ತವರಿನಲ್ಲಿ ತಲಾ 7 ಪಂದ್ಯಗಳನ್ನಾಡಿದಂತೆ RCB ಸಹ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 7 ಮ್ಯಾಚ್ಗಳನ್ನಾಡ್ತಿದೆ. ಅದರಲ್ಲಿ ಮೊದಲ ವೇಳಾಪಟ್ಟಿಯಲ್ಲಿ ಬೆಂಗಳೂರಿನಲ್ಲಿ ರೆಡ್ ಆರ್ಮಿ ಪಡೆ ಮೂರು ಪಂದ್ಯ ಆಡುತ್ತಿದೆ. ಅದರಲ್ಲಿ ಮೊದಲ ಪಂದ್ಯವೇ ಇಂದು ನಡೆಯೋ RCB ವರ್ಸಸ್ ಪಂಜಾಬ್ ಕಿಂಗ್ಸ್ ಕದನ. ಆರ್ಸಿಬಿ ತವರಿನಲ್ಲಿ ಆಡೋ ಉಳಿದ ಮ್ಯಾಚ್ಗಳ ವೇಳಾಪಟ್ಟಿ ಇನ್ನಷ್ಟೇ ರಿಲೀಸ್ ಆಗಬೇಕಿದೆ.
IPL ಮ್ಯಾಚ್ ನಡೆಯುವಾಗಲೇ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ ಫ್ಯಾನ್ಸ್ ಬಡಿದಾಟ..! ವಿಡಿಯೋ ವೈರಲ್
ಭರ್ತಿಯಾಗಲಿದೆ ಚಿನ್ನಸ್ವಾಮಿ ಸ್ಟೇಡಿಯಂ
ದೇಶದ ಬೇರೆ ನಗರಗಳಲ್ಲಿ ಹೇಗೋ ಗೊತ್ತಿಲ್ಲ. ಆದ್ರೆ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆದ್ರೆ ಮಾತ್ರ ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಭರ್ತಿಯಾಗುತ್ತೆ. ಕಿಕ್ಕಿರುದು ಜನ ತುಂಬಿರ್ತಾರೆ. ಸ್ಟೇಡಿಯಂ ಒಳಗೆ ಎಷ್ಟು ಮಂದಿ ಇರ್ತಾರೋ ಅಷ್ಟೇ ಮಂದಿ ಟಿಕೆಟ್ ಸಿಗದೆ ಹೊರಗಡೆನೂ ಇರ್ತಾರೆ. ಈಗಾಗಲೇ ಇವತ್ತಿನ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಇಂದು ಚಿನ್ನಸ್ವಾಮಿ ಸ್ಟೇಡಿಯಂ ಭರ್ತಿಯಾಗಲಿದೆ. ಟಿಕೆಟ್ ಖರೀದಿಸಿರುವವರು ಸ್ಟೇಡಿಯಂ ಒಳ ನುಗ್ಗಲು ಹೇಗೆ ಜತನದಿಂದ ಕಾಯ್ತಿದ್ದಾರೋ, ಹಾಗೆ ತವರಿನ ಪ್ರೇಕ್ಷಕರ ಎದುರು ಪಂದ್ಯವಾಡಲು ಆಟಗಾರರು ಸಹ ಕಾಯ್ತಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್ ಕಟ್ಟಿಹಾಕುತ್ತಾ ಆರ್ಸಿಬಿ?
ಸ್ಥಳೀಯ ಆಟಗಾರರು ಹೆಚ್ಚಾಗಿಲ್ಲ ಅನ್ನೋ ಕೊರಗಿದೆ. ಆದ್ರೆ ವಿರಾಟ್ ಕೊಹ್ಲಿ 16 ವರ್ಷಗಳಿಂದ RCB ಪರ ಆಡ್ತಿರೋದ್ರಿಂದ ಅವರೇ ಲೋಕಲ್ ಪ್ಲೇಯರ್ ಆಗಿ ಹೋಗಿದ್ದಾರೆ. ಇನ್ನು ಲೋಕಲ್ ಪ್ಲೇಯರ್ ವೈಶಾಕ್ ವಿಜಯ್ ಕುಮಾರ್ ಮತ್ತು ಮನೋಜ್ ಬಾಂಡಗೆ ಆರ್ಸಿಬಿ ಟೀಮ್ನಲ್ಲಿದ್ದಾರೆ. ಅವರಿಗೆ ಆಡಲು ಚಾನ್ಸ್ ಸಿಗದೆ ಇರಬಹುದು. ಕರ್ನಾಟಕದ ಸ್ಟಾರ್ ಪ್ಲೇಯರ್ಸ್ ಇಲ್ಲದಿರಬಹುದು. ಆದ್ರೂ ಕೊಹ್ಲಿ ಒಬ್ಬರೇ RCB ಫ್ಯಾನ್ಸ್ ಕ್ರೇಜ್ ಹೆಚ್ಚಿಸಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಸಲ ರನ್ ಹೊಳೆ
ಹೊನಲು ಬೆಳಕಿನಲ್ಲಿ ನಡೆಯುವ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರವೇ ಪ್ರಮುಖ ಆಕರ್ಷಣೆ. ಅದರಲ್ಲೂ IPL ಮ್ಯಾಚ್ಗಳಲ್ಲಿ ರನ್ ಹೊಳೆ ಹರಿದರೆ ನೋಡುಗರಿಗೆ ಹಬ್ಬ. ಇಂತಹ ರನ್ ಹೊಳೆ ಹರಿಸಲು ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಿದ್ಧವಾಗಿ ನಿಂತಿದೆ. ಪಿಚ್ ಅನ್ನ ನವೀಕರಿಸಲಾಗಿದ್ದು, ಪಿಚ್ನ ಕೆಳ ಪದರದ ಮಣ್ಣನ್ನು ಎತ್ತರಿಸಲಾಗಿದೆ. ಇದರಿಂದ ಪಿಚ್ನ ಸತ್ವ ಹೆಚ್ಚಿದೆ. ಔಟ್ಫೀಲ್ಡ್ನ ಹುಲ್ಲು ಹಾಸನ್ನೂ ನವೀಕರಿಸಲಾಗಿದೆ. ಹೀಗಾಗಿ ರನ್ ಹೊಳೆ ಹರಿಯೋದು ಗ್ಯಾರಂಟಿ.
ಬಿಗಿ ಭದ್ರತೆ.. ಮಧ್ಯರಾತ್ರಿವರೆಗೆ ಮೆಟ್ರೋ..!
ಸುಮಾರು 35 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಚಿನ್ನಸ್ವಾಮಿ ಸ್ಟೇಡಿಯಂ ಭರ್ತಿಯಾಗಲಿದೆ. ಪಂದ್ಯಕ್ಕೆ ಭಾರೀ ಭದ್ರತೆ ಒದಗಿಸಲಾಗಿದ್ದು, ಸ್ಟೇಡಿಯಂ ಸುತ್ತ ಮುತ್ತ ಹಾಗೂ ಒಳ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ಟೇಡಿಯಂ ಒಳಗಡೆ ಕೆಲ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ. ಸ್ಟೇಡಿಯಂ ಸುತ್ತಾ ಮುತ್ತಾ ಇಂದು ಸಂಜೆ 5ರಿಂದ ಟ್ರಾಫಿಕ್ ಜಾಮ್ ಆಗಲಿದೆ. IPL ಪಂದ್ಯ ಇರೋದ್ರಿಂದ ಮಧ್ಯರಾತ್ರಿ 1.30ರವರೆಗೆ ಮೆಟ್ರೋ ರೈಲು ಓಡಾಡಲಿದೆ. ಒಟ್ನಲ್ಲಿ ಇಂದಿನ IPL ಹಬ್ಬ ನೋಡೋಕೆ ಕನ್ನಡಿಗರು ತುದಿಗಾಲಲ್ಲಿ ನಿಂತಿದ್ದಾರೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.