
ಹೈದರಾಬಾದ್(ಮೇ.17): ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಫಾಫ್ ಡು ಪ್ಲೆಸಿಸ್ ಇದೀಗ ನಾಯಕನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. ತಾವು ಧೋನಿ ಗರಡಿಯಲ್ಲಿ ಆಡುವಾಗ ಅವರಿಂದ ಎಂತಹದ್ದೇ ಪರಿಸ್ಥಿತಿಯಿದ್ದರೂ ಹೇಗೆ ತಾಳ್ಮೆಯಿಂದಿರಬೇಕು ಎನ್ನುವುದನ್ನು ಕಲಿತುಕೊಂಡಿದ್ದೇನೆ ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ.
ಫಾಫ್ ಡು ಪ್ಲೆಸಿಸ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಡಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಆದಾಗ ಎಂ ಎಸ್ ಧೋನಿ ಹಾಗೂ ಫಾಫ್ ಡು ಪ್ಲೆಸಿಸ್ ಒಟ್ಟಾಗಿಯೇ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು
ಇನ್ನು 2022ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆದ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾ ಮೂಲದ ಸ್ಪೋಟಕ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನು 2021ರ ಐಪಿಎಲ್ ಬಳಿಕ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ 2022ರ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್, ಆರ್ಸಿಬಿ ನಾಯಕರಾಗಿ ನೇಮಕವಾಗಿದ್ದರು.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ ಆಫ್ ಪ್ರವೇಶಿಸಿತ್ತಾದರೂ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಫೈನಲ್ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ಇದೀಗ ಧೋನಿ ಜತೆ ಆಡುವಾಗ ತಾವು ಕಲಿತಿದ್ದೇನು ಎನ್ನುವುದನ್ನು Sportskeeda ಜತೆಗಿನ ಮಾತುಕತೆಯ ವೇಳೆ ತುಟಿಬಿಚ್ಚಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಹೇಗೆ ತಾಳ್ಮೆಯಿಂದ ಇರಬೇಕು ಎನ್ನುವುದನ್ನು ಅವರನ್ನು ನೋಡಿ ನಾನು ಕಲಿತುಕೊಂಡಿದ್ದೇನೆ ಹಾಗೂ ನನ್ನ ನಾಯಕತ್ವದಲ್ಲಿ ಅಳವಡಿಸಿಕೊಂಡಿದ್ದೇನೆ. ನಾನು ಯಾವಾಗಲೂ ನನ್ನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ನ್ನ ಆಟಗಾರರ ಜತೆ ಸ್ಪಷ್ಟವಾಗಿ ತಿಳಿಸುತ್ತೇನೆ. ಆಟಗಾರರಿಗೆ ನಿಮ್ಮಿಂದ ಏನು ಉತ್ತಮವಾದುದ್ದನ್ನು ನೀಡಲು ಸಾಧ್ಯವೋ ಅದನ್ನು ಮಾಡಿ ಎಂದು ಹೇಳುತ್ತೇನೆ. ಇದನ್ನು ಧೋನಿ ಅವರಿಂದ ಕಲಿತುಕೊಂಡ ದೊಡ್ಡ ಅಸ್ತ್ರವಾಗಿದೆ. ಈ ಕಾರಣಕ್ಕಾಗಿಯೇ ಅವರನ್ನು ಕ್ಯಾಪ್ಟನ್ ಕೂಲ್ ಎಂದು ಕರೆಯುತ್ತಾರೆ. ತಾಳ್ಮೆಯಿಂದ ಹೇಗಿರಬೇಕು ಎನ್ನುವುದನ್ನು ಕಲಿಯಲು ಧೋನಿ ಅವರಿಗಿಂತ ದೊಡ್ಡ ಉದಾಹರಣೆ ಮತ್ತೊಬ್ಬರಿಲ್ಲ ಎಂದು ಫಾಫ್ ಹೇಳಿದ್ದಾರೆ.
10 ದಿನ ICU ನಲ್ಲಿದ್ದು ಬಂದ ತಂದೆಗೆ ಮುಂಬೈ ಎದುರಿನ ಗೆಲುವನ್ನು ಅರ್ಪಿಸಿದ ಲಖನೌ ವೇಗಿ ಮೊಯ್ಸಿನ್ ಖಾನ್..!
ಸದ್ಯ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 6 ಸೋಲು ಸಹಿತ್ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಹೊಸ್ತಿಲಲ್ಲಿದೆ. ಆರ್ಸಿಬಿ ತಂಡವು ಇನ್ನು ಎರಡು ಪಂದ್ಯಗಳನ್ನು ಆಡಲಿದ್ದು, ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಪ್ಲೇ ಆಫ್ಗೆ ಲಗ್ಗೆಯಿಡಲಿದೆ.
ಇನ್ನೊಂದೆಡೆ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 13 ಪಂದ್ಯಗಳನ್ನಾಡಿ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಈಗಾಗಲೇ ಪ್ಲೇ ಆಫ್ಗೆ ಒಂದು ಕಾಲಿಟ್ಟಿದ್ದು, ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್ಕೆ ಗೆಲುವು ದಾಖಲಿಸಿದರೆ, ಪ್ಲೇ ಆಫ್ಗೆ ಅಧಿಕೃತವಾಗಿ ಲಗ್ಗೆಯಿಡುವುದರ ಜತೆಗೆ ಮೊದಲ ಕ್ವಾಲಿಫೈಯರ್ಗೂ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈಗಾಗಲೇ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಪ್ಲೇ ಆಫ್ಗೆ ಲಗ್ಗೆಯಿಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.