
ಚೆನ್ನೈ(ಏ.30): ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಅವರದ್ದೇ ನೆಲದಲ್ಲಿ ದಾಖಲೆಯ ಜಯ ಸಾಧಿಸಿದೆ. ಸಿಎಸ್ಕೆ ಎದುರು ಪಂಜಾಬ್ 4 ವಿಕೆಟ್ ಜಯ ಸಾಧಿಸಿದೆ. ಚೆಪಾಕ್ ಮೈದಾನದಲ್ಲಿ 200+ ರನ್ ಗುರಿ ಯಶಸ್ವಿಯಾಗಿ ಚೇಸ್ ಮಾಡಿದ ಮೊದಲ ತಂಡ ಎನ್ನುವ ದಾಖಲೆಗೆ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.
ಇಲ್ಲಿನ ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ 201 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಕೂಡಾ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ಗೆ ಪ್ರಭ್ಸಿಮ್ರನ್ ಸಿಂಗ್ ಹಾಗೂ ನಾಯಕ ಶಿಖರ್ ಧವನ್ ಜೋಡಿ ಕೇವಲ 4.2 ಓವರ್ಗಳಲ್ಲಿ 50 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ನಾಯಕ ಧವನ್ 15 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 28 ರನ್ ಬಾರಿಸಿ ತುಷಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಪ್ರಭ್ಸಿಮ್ರನ್ ಸಿಂಗ್ ಕೇವಲ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 42 ರನ್ ಬಾರಿಸಿ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಇದಾದ ಕೆಲ ಹೊತ್ತಿನಲ್ಲೇ ಅಥರ್ವ ಟೈಡೆ 13 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ಪಂಜಾಬ್ ಕಿಂಗ್ಸ್ ಪಾಳಯದಲ್ಲಿ ಆತಂಕ ಮನೆ ಮಾಡಿತು.
ಸ್ಯಾಮ್-ಲಿವಿಂಗ್ಸ್ಟೋನ್ ಜುಗಲ್ಬಂದಿ: ಒಂದು ಹಂತದಲ್ಲಿ ಟೈಡೆ ವಿಕೆಟ್ ಒಪ್ಪಿಸಿದಾದ ಪಂಜಾಬ್ ತಂಡವು 10.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತ್ತು. ಈ ವೇಳೆ ನಾಲ್ಕನೇ ವಿಕೆಟ್ಗೆ ಜತೆಯಾದ ಇಂಗ್ಲೆಂಡ್ನ ತಾರಾ ಆಲ್ರೌಂಡ್ ಜೋಡಿಯಾದ ಸ್ಯಾಮ್ ಕರ್ರನ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ 57 ರನ್ಗಳ ಜತೆಯಾಟವಾಡುವ ಮೂಲಕ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು. ಕೊನೆಯ 5 ಓವರ್ಗಳಲ್ಲಿ ಗೆಲ್ಲಲು 72 ರನ್ ಅಗತ್ಯವಿದ್ದಾಗ, ತುಷಾರ್ ಪಾಂಡೆ ಬೌಲಿಂಗ್ನಲ್ಲಿ ಪಂಜಾಬ್ ತಂಡವು 24 ರನ್ ಕಲೆಹಾಕಿತು. ಲಿವಿಂಗ್ಸ್ಟೋನ್ ಅದೇ ಓವರ್ನಲ್ಲಿ 3 ಸಿಕ್ಸರ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಲಿವಿಂಗ್ಸ್ಟೋನ್ 24 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 40 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಐಪಿಎಲ್ನ ಅತ್ಯಂತ ದುಬಾರಿ ಆಟಗಾರ ಸ್ಯಾಮ್ ಕರ್ರನ್ 20 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 29 ರನ್ ಬಾರಿಸಿ ಮತೀಶ್ ಪತಿರಣ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
IPL 2023: ಡೆವೊನ್ ಕಾನ್ವೇ ಸ್ಪೋಟಕ ಫಿಫ್ಟಿ; ಪಂಜಾಬ್ಗೆ ಕಠಿಣ ಗುರಿ
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಕೊನೆಯಲ್ಲಿ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 21 ರನ್ ಬಾರಿಸಿ ಸಬ್ಸ್ಟಿಟ್ಯೂಟ್ ಫೀಲ್ಡರ್ ಶೇಕ್ ರಶೀದ್ ಹಿಡಿದ ಅದ್ಭುತ ಕ್ಯಾಚ್ಗೆ ಪೆವಿಲಿಯನ್ ಸೇರಿದರು. ಕೊನೆಯ ಓವರ್ನಲ್ಲಿ ಗೆಲ್ಲಲು 9 ರನ್ಗಳ ಅಗತ್ಯವಿತ್ತು. ಕೊನೆಯ ಓವರ್ ಜವಾಬ್ದಾರಿ ಲಂಕಾದ ಮೊದಲ 3 ಎಸೆತದಲ್ಲಿ ಪಂಜಾಬ್ ಕೇವಲ 2 ರನ್ ಗಳಿಸಿತು. ಇದಾದ ಬಳಿಕ ಸಿಕಂದರ್ ರಾಜಾ 4 ಹಾಗೂ 5ನೇ ಎಸೆತದಲ್ಲಿ ತಲಾ ಎರಡು ರನ್ ಗಳಿಸಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಪಂಜಾಬ್ ಗೆಲ್ಲಲು 3 ರನ್ ಅಗತ್ಯವಿತ್ತು. ರಾಜಾ ಕೊನೆಯ ಎಸೆತದಲ್ಲಿ 3 ರನ್ ಗಳಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಬಿಕ ಬ್ಯಾಟರ್ ಡೆವೊನ್ ಕಾನ್ವೇ ಅಜೇಯ ಅರ್ಧಶತಕ(92) ಹಾಗೂ ಋತುರಾಜ್ ಗಾಯಕ್ವಾಡ್(37) ಹಾಗೂ ಶಿವಂ ದುಬೆ ಸಮಯೋಚಿತ ಬ್ಯಾಟಿಂಗ್(28) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.