
ಚೆನ್ನೈ(ಮೇ.25): ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್. ಧೋನಿ ಹಾಗೂ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ನಡುವೆ ಮನಸ್ತಾಪ ಮೂಡಿದೆ ಎಂದು ಸಾಮಾಜಿಕ ತಾಣಗಳಲ್ಲಿ ವದಂತಿಗಳು ಹರಿದಾಡುತ್ತಿವೆ. ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡುತ್ತಿರುವುದು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದರ ಬಗ್ಗೆ ಚರ್ಚೆ ಹುಟ್ಟುಹಾಕಿವೆ.
ಇತ್ತೀಚೆಗಷ್ಟೇ ಎಂ ಎಸ್ ಧೋನಿ ಬ್ಯಾಟಿಂಗ್ ನೋಡುವುದಕ್ಕಾಗಿ ಅಭಿಮಾನಿಗಳು ತಾವು ಔಟಾಗಲು ಕಾಯುತ್ತಿದ್ದಾರೆ ಎಂದು ಜಡೇಜಾ ಹೇಳಿದ್ದು ಸುದ್ದಿಯಾಗಿತ್ತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಹಾಗೂ ಜಡೇಜಾ ನಡುವೆ ಮೈದಾನದಲ್ಲೇ ಮಾತಿನ ಚಕಮಕಿಯಂತೆ ಕಂಡುಬಂದ ಸನ್ನಿವೇಶವೂ ನಡೆಯಿತು.
IPL 2023 ಬೇಕಂತಲೇ ಧೋನಿಯಿಂದ ಸಮಯ ವ್ಯರ್ಥ? ಅಂಪೈರ್ ಕೂಡಾ ಸಾಥ್?
ಇನ್ನು ಮಂಗಳವಾರ ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಅವರು ಜಡೇಜಾರನ್ನು ಸಮಾಧಾನಪಡಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಇನ್ನಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ಈ ನಡುವೆ ಸಾಮಾಜಿಕ ತಾಣಗಳಲ್ಲಿ ಇತ್ತೀಚೆಗೆ ಜಡೇಜಾ ಹಾಕುತ್ತಿರುವ ಪೋಸ್ಟ್ಗಳು ಯಾವುದೋ ವಿಚಾರಕ್ಕೆ ಅವರು ಬೇಸರಗೊಂಡಿರುವುದನ್ನು ಸ್ಪಷ್ಟಪಡಿಸುತ್ತಿವೆ.
ಗುಜರಾತ್ ಟೈಟಾನ್ಸ್ ಎದುರಿನ ಮಹತ್ವದ ಪಂದ್ಯದಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಅಪ್ಸ್ಟಾಕ್ಸ್ ಮೋಸ್ಟ್ ವ್ಯಾಲಿಯೇಬಲ್ ಅಸೆಟ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಜಡ್ಡು ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋದೊಂದಿಗೆ, ಅಪ್ಸ್ಟಾಕ್ಸ್ಗೆ ಇದು ಗೊತ್ತು, ಆದರೆ ಕೆಲವು ಅಭಿಮಾನಿಗಳಿಗೆ ಗೊತ್ತಿಲ್ಲ ಎಂದು ನಗುವ ಸಿಂಬಲ್ ಪೋಸ್ಟ್ ಮಾಡುವ ಮೂಲಕ ತಂಡದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರವೀಂದ್ರ ಜಡೇಜಾ 4 ಓವರ್ ಬೌಲಿಂಗ್ ಮಾಡಿ ಕೇವಲ 18 ರನ್ ನೀಡಿ ಡೇವಿಡ್ ಮಿಲ್ಲರ್ ಹಾಗೂ ದಶುನ್ ಶನಕಾ ಅವರ ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿಲ್ಲಿ ಮಹತ್ತರ ಪಾತ್ರವಹಿಸುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯಲ್ಲಿ ಆರಂಭದಲ್ಲಿ ರವೀಂದ್ರ ಜಡೇಜಾಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ತಂಡದ ನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಜಡ್ಡು ನೇತೃತ್ವದಲ್ಲಿ ಸಿಎಸ್ಕೆ ತಂಡವು ಹೀನಾಯ ಪ್ರದರ್ಶನ ತೋರಿತ್ತು. ಹೀಗಾಗಿ ಜಡ್ಡು ಬದಲಿಗೆ ಧೋನಿಯೇ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಗಾಯಗೊಂಡ ಜಡೇಜಾ, ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಜಡೇಜಾ ಹಾಗೂ ಧೋನಿ ನಡುವೆ ಯಾವುದೂ ಸರಿಯಿಲ್ಲ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.
ಕಳೆದ ಆವೃತ್ತಿಯ ಐಪಿಎಲ್ ಮುಗಿದ ಬಳಿಕ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್ ಪಾಳಯವನ್ನು ಕೂಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಕ್ಯಾಪ್ಟನ್ ಕೂಲ್ ಮಧ್ಯ ಪ್ರವೇಶಿಸಿ, ಜಡೇಜಾ ಅವರನ್ನು ಚೆನ್ನೈ ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.