
ಮುಂಬೈ(ಏ.19): ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದಿತ್ತು, ಆದರೆ ಇದೀಗ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಕೊಂಚ ಹಿನ್ನೆಡೆ ಅನುಭವಿಸಿದೆ. ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ದದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು 7 ರನ್ಗಳ ರೋಚಕ ಸೋಲು ಅನುಭವಿಸಿದೆ. ಇದೆಲ್ಲದರ ಹೊರತಾಗಿಯೂ ರಾಯಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ಕೆಕೆಆರ್ ಅಭಿಮಾನಿಯೊಬ್ಬರು ನಾಯಕ ಶ್ರೇಯಸ್ ಅಯ್ಯರ್ಗೆ ವಿನೂತನವಾಗಿ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯ ಆರಂಭಕ್ಕೂ ಮುನ್ನ ಮಹಿಳಾ ಅಭಿಮಾನಿಯೊಬ್ಬರು, ಭಿತ್ತಿ ಪತ್ರ ಹಿಡಿದು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ಗೆ ಮದುವೆಯ ಪ್ರಪೋಸ್ ಮಾಡಿ ಗಮನ ಸೆಳೆದಿದ್ದಾರೆ. ಈ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಸಾರ್ವಜನಿಕವಾಗಿ ಅತ್ಯಂತ ವಿನೂತನವಾಗಿ ಅಯ್ಯರ್ಗೆ ಮದುವೆಯ ಪ್ರಪೋಸ್ ಮಾಡಿದ್ದು ಸಾಕಷ್ಟು ವೈರಲ್ ಆಗಲು ಕಾರಣ ಎನಿಸಿದೆ.
ಅಪ್ಪಟ ಅಭಿಮಾನಿಯಿಂದ ಶ್ರೇಯಸ್ ಅಯ್ಯರ್ಗೆ ಮದುವೆ ಪ್ರಪೋಸ್:
ಕೋಲ್ಕತಾ ನೈಟ್ ರೈಡರ್ಸ್ ತಂಡದ ಅಪ್ಪಟ ಅಭಿಮಾನಿಯೊಬ್ಬರು ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಪ್ಲೆಕಾರ್ಡ್ ಹಿಡಿದು, ನನ್ನ ಅಮ್ಮ ಮದುವೆಯಾಗಲು ಹುಡುಗನನ್ನು ಹುಡುಕಿಕೋ ಎನ್ನುತ್ತಿದ್ದಾರೆ. ಹಾಗಾಗಿ ನನ್ನನ್ನು ಮದುವೆಯಾಗುತ್ತೀರಾ ಶ್ರೇಯಸ್ ಅಯ್ಯರ್? ಎಂದು ಪ್ರಪೋಸ್ ಮಾಡಿದ್ದಾರೆ. ಈ ಫೋಟೋವನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ಈ ರೀತಿಯ ಮದುವೆ ಪ್ರಪೋಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೇ ಜೋಸ್ ಬಟ್ಲರ್ ಭರ್ಜರಿ ಶತಕ, ಯಜುವೇಂದ್ರ ಚಹಲ್ ಹ್ಯಾಟ್ರಿಕ್ ವಿಕೆಟ್ ಸಾಹಸದಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 7 ರನ್ ರೋಚಕ ಗೆಲುವು ಸಾಧಿಸಿದೆ. ಶ್ರೇಯಸ್ ಅಯ್ಯರ್ ಹಾಗೂ ಆ್ಯರೋನ್ ಫಿಂಚ್ ಸ್ಫೋಟಕ ಆಟವಾಡಿದರೂ ನಿರ್ಣಾಯಕ ಘಟ್ಟದಲ್ಲಿ ಚಹಲ್ ಪಡೆದ ಹ್ಯಾಟ್ರಿಕ್ ವಿಕೆಟ್ನಿಂದಾಗಿ ಕೋಲ್ಕತಾ ಸೋಲನುಭವಿಸಿತು. ಇದರೊಂದಿಗೆ ರಾಜಸ್ಥಾನ 6 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ಕೆಕೆಆರ್ ಹ್ಯಾಟ್ರಿಕ್ ಸೋಲುಂಡು 6ನೇ ಸ್ಥಾನಕ್ಕೆ ಕುಸಿಯಿತು.
IPL 2022: 14 ವರ್ಷಗಳ ವನವಾಸ ಅಂತ್ಯ. ಈ 5 ಕಾರಣಗಳಿಂದ ಈ ಸಲ ಕಪ್ ಗೆದ್ದೇ ಗೆಲ್ಲುತ್ತೆ ಆರ್ಸಿಬಿ..!
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಜೋಸ್ ಬಟ್ಲರ್ ಈ ಐಪಿಎಲ್ನಲ್ಲಿ ಬಾರಿಸಿದ 2ನೇ ಶತಕದ ನೆರವಿನಿಂದ 20 ಓವರಲ್ಲಿ 5 ವಿಕೆಟ್ ಕಳೆದುಕೊಂಡು 217 ರನ್ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದ ಕೋಲ್ಕತಾ 19.4 ಓವರ್ಗಳಲ್ಲಿ 210 ರನ್ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು.
ಆರಂಭಿಕನಾಗಿ ಭಡ್ತಿ ಪಡೆದು ಬಂದ ಸುನಿಲ್ ನರೈನ್ ಶೂನ್ಯಕ್ಕೆ ರನ್ ಔಟಾಗಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್ಗೆ ಜೊತೆಯಾದ ಆ್ಯರೋನ್ ಫಿಂಚ್ ಹಾಗೂ ಶ್ರೇಯಸ್ ರಾಜಸ್ಥಾನ ಬೌಲರ್ಗಳನ್ನು ಮನಬಂದಂತೆ ದಂಡಿಸಿತು. ಈ ಇಬ್ಬರು 107 ರನ್ ಜೊತೆಯಾಟವಾಡಿ ತಂಡವನ್ನು ಮೇಲಕ್ಕೆತ್ತಿದರು. ಫಿಂಚ್ 28 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಒಳಗೊಂಡ 58 ರನ್ ಸಿಡಿಸಿದರು. ಬಳಿಕ ಬಂದ ನಿತೀಶ್ ರಾಣಾ 18 ರನ್ಗೆ ವಿಕೆಟ್ ಒಪ್ಪಿಸಿದರು. ಆ್ಯಂಡ್ರೆ ರಸೆಲ್(00), ಆರ್.ಅಶ್ವಿನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಕೊನೆ 4 ಓವರಲ್ಲಿ ತಂಡಕ್ಕೆ 40 ರನ್ ಅಗತ್ಯವಿತ್ತು. ಆದರೆ ಚಹಲ್ ಎಸೆದ 17ನೇ ಓವರ್ನಲ್ಲಿ ಹ್ಯಾಟ್ರಿಕ್ ಸೇರಿದಂತೆ 4 ವಿಕೆಟ್ ಕಬಳಿಸಿ ದುಸ್ವಪ್ನವಾಗಿ ಕಾಡಿದರು. ಮೊದಲ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ವಿಕೆಟ್ ಕಿತ್ತ ಚಹಲ್, 4,5,6 ಎಸೆತಗಳಲ್ಲಿ ಕ್ರಮವಾಗಿ ಶ್ರೇಯಸ್ ಅಯ್ಯರ್(51 ಎಸೆತಗಳಲ್ಲಿ 85), ಶಿವಂ ಮಾವಿ ಹಾಗೂ ಪ್ಯಾಟ್ ಕಮಿನ್ಸ್ ವಿಕೆಟ್ ಎಗರಿಸಿದರು. ಕೊನೆಯಲ್ಲಿ ಉಮೇಶ್ ಯಾದವ್( 9 ಎಸೆತಗಳಲ್ಲಿ 21) ಸಿಡಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.