
ಅಹಮದಾಬಾದ್ (ಮೇ.28): ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ನಾಳೆ ಎಂದಿನ ಸಮಯದಲ್ಲಿಯೇ ಫೈನಲ್ ಪಂದ್ಯ ನಡೆಯಲಿದೆ. ಭಾನುವಾರ ಕನಿಷ್ಠ ಟಾಸ್ ಪ್ರಕ್ರಿಯೆಗೂ ಮಳೆ ಅವಕಾಶ ನೀಡಲಿಲ್ಲ. ಈಗಿರುವ ಮಾಹಿತಿಯ ಪ್ರಕಾರ ಸೋಮವಾರ ಅಹಮದಾಬಾದ್ನಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಪೂರ್ಣ ಪಣದ್ಯ ನಡೆಯವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಲಾಗಿದೆ. ಸಿಂದು ಸಂಜೆಯಿಂದಲೇ ಭಾರೀ ಮಳೆ ಸುರಿದ ಕಾರಣ ಸ್ಟೇಡಿಯಂನಲ್ಲಿ ನೆರೆದಿದ್ದ ಅಪಾರ ಪ್ರೇಕ್ಷಕರಿಗೆ ನಿರಾಸೆ ಕಾಡಿತ್ತು. ಅಂತಿಮವಾಗಿ ಅಂಪೈರ್ಗಳು ಫೈನಲ್ ಪಂದ್ಯವನ್ನು ಮುಂದೂಡಿಕೆ ಮಾಡುವ ನಿರ್ಧಾರ ಮಾಡಿದರು. ಸೋಮವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ನಿರಂತರ ಮಳೆಯ ಕಾರಣದಿಂದಾಗಿ ಕನಿಷ್ಠ ಐದು ಓವರ್ ಪಂದ್ಯ ನಡೆಸಲು ಕೂಡ ಪಿಚ್ ಸೂಕ್ತವಾಗಿರದ ಹಿನ್ನಲೆಯಲ್ಲಿ ರಾತ್ರಿ 10.50ರ ವೇಳೆ ಪಂದ್ಯವನ್ನು ಮುಂದೂಡಿಕೆ ಮಾಡುವ ನಿರ್ಧಾರವನ್ನು ಎರಡೂ ತಂಡಗಳ ಕೋಚ್ಗಳ ಸಮ್ಮುಖದಲ್ಲಿ ಅಂಪೈರ್ಗಳು ನಿರ್ಧಾರ ಮಾಡಿದರು. ಐದು ಓವರ್ಗಳ ಪಂದ್ಯಕ್ಕೆ ರಾತ್ರಿ 12 ಗಂಟೆಯವರೆಗೆ ಕಟ್ ಆಫ್ ಸಮಯವಿತ್ತು.
ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಬೇಕಾದಲ್ಲಿ ಕನಿಷ್ಠ 5 ಓವರ್ಗಳ ಪಂದ್ಯವಾದರೂ ನಡೆಯಬೇಕು. ಇಲ್ಲದೇ ಇದ್ದಲ್ಲಿ ಸೂಪರ್ ಓವರ್ನಲ್ಲಿಯಾದರೂ ಫಲಿತಾಂಶ ತಿಳಿಯಬೇಕು. ಫೈನಲ್ ಪಂದ್ಯದ ಮೀಸಲು ದಿನದಲ್ಲೂ ಒಂದೇ ಒಂದು ಎಸೆತ ಹಾಕಲು ಸಾಧ್ಯವಾಗದೇ ಇದ್ದಲ್ಲಿ, ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಎನಿಸಿಕೊಳ್ಳಲಿದೆ. ಅದಕ್ಕೆ, ಕಾರಣ ಲೀಗ್ ಹಂತದಲ್ಲಿ ಗುಜರಾತ್ ಟೈಟಾನ್ಸ್ ತಂಡ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಪ್ಲೇ ಆಫ್ಗೆ ಏರಿತ್ತು. ಗುಜರಾತ್ ಲೀಗ್ನಲ್ಲಿ ಅಡಿದ 14 ಪಂದ್ಯಗಳ ಪೈಕಿ 10ರಲ್ಲಿ ಗೆಲುವು ಕಾಣುವ ಮೂಲಕ 20 ಅಂಕ ಸಂಪಾದನೆ ಮಾಡಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯದಲ್ಲಿ 8 ಗೆಲುವು ಕಾಣುವ ಮೂಲಕ 17 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಪ್ಲೇಆಫ್ ಹಂತಕ್ಕೇರಿತ್ತು. 16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ.
ಧೋನಿ ಕೊನೆಯ ಪಂದ್ಯಕ್ಕೆ ಮೀಸಲು ಸಂಕಷ್ಟ: ಎಂಎಸ್ ಧೋನಿ ಎಲ್ಲಿಯೂ ಇದು ತಮ್ಮ ಕೊನೆಯ ಐಪಿಎಲ್ ಪಂದ್ಯ ಎಂದು ಹೇಳಿಲ್ಲ. ಆದರೆ, ಮೂಲಗಳನ್ನು ನಂಬುವುದಾದರೆ, ಎಂಎಸ್ ಧೋನಿ ಈಗಾಗಲೇ ಆಪ್ತ ವಲಯದಲ್ಲಿ ಇದೇ ತಮ್ಮ ಕೊನೆಯ ಐಪಿಎಲ್ ಪಂದ್ಯ ಎಂದು ಹೇಳಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ನ ಕೊನೆಯ ಪಂದ್ಯ ಕೂಡ ಮಳೆಯಿಂದಾಗಿ ಮೀಸಲು ದಿನದಲ್ಲಿ ಆಡಲಾಗಿತ್ತು.
IPL 2023 ಅಭಿಮಾನಿಗಳಿಗೆ ನಿರಾಸೆ, ಗುಜರಾತ್ vs ಚೆನ್ನೈ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!
2019ರ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಧೋನಿಗೆ ಅಂತಾರಾಷ್ಟ್ರೀಯ ಏಕದಿನದ ಕೊನೆಯ ಪಂದ್ಯವಾಗಿತ್ತು. ಮಳೆಯ ಹಿನ್ನಲೆಯಲ್ಲಿ ಅರ್ಧಪಂದ್ಯವನ್ನು ಮರುದಿನ ಆಡಿಸಲಾಗಿತ್ತು. ಆ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿತ್ತು. ಅದಾದ ಬಳಿಕ ಧೋನಿ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದರು. ಈಗ ಐಪಿಎಲ್ನಲ್ಲಿ ತಮ್ಮ ಕೊನೆಯ ಪಂದ್ಯಕ್ಕೂ ಎಂಎಸ್ ಧೋನಿ ಮೀಸಲು ದಿನದ ಸಂಕಷ್ಟ ಎದುರಿಸಿದ್ದಾರೆ.
IPL 2023 ಗುಜರಾತ್ vs ಸಿಎಸ್ಕೆ ಫೈನಲ್ಗೆ ಮಳೆ ಭೀತಿ, ರದ್ದಾಗುತ್ತಾ ಪ್ರಶಸ್ತಿ ಸುತ್ತಿನ ಪಂದ್ಯ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.