
ಲಂಡನ್(ಸೆ.26): ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ಭಾರತದ ದಿಗ್ಗಜ ವೇಗದ ಬೌಲರ್ ಜೂಲನ್ ಗೋಸ್ವಾಮಿ ಭಾವನಾತ್ಮಕ ಪತ್ರವೊಂದರ ಮೂಲಕ ತಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ. ಜೊತೆಗೆ ತಮ್ಮ ಕ್ರಿಕೆಟ್ ಬದುಕಿನ ಮಹತ್ವದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
‘ನಾನು ಯಾವಾಗಲೂ ಪ್ರಾಮಾಣಿಕವಾಗಿ ಆಡಿದ್ದೇನೆ. ಭಾರತ ಹಾಗೂ ಜಾಗತಿಕವಾಗಿ ಮಹಿಳಾ ಕ್ರಿಕೆಟ್ ಬೆಳೆಯಲು ಕೊಡುಗೆ ನೀಡಿದ್ದೇನೆ ಎನ್ನುವ ನಂಬಿಕೆ ಇದೆ. ಮುಂದಿನ ಪೀಳಿಗೆಯ ಹೆಣ್ಣು ಮಕ್ಕಳು ಕ್ರಿಕೆಟ್ನತ್ತ ಆಕರ್ಷಿತರಾಗುವಂತೆ ಮಾಡಿದ್ದೇನೆ ಎನ್ನುವ ಬಗ್ಗೆ ಖುಷಿ ಇದೆ’ ಎಂದು ಜೂಲನ್ ಟ್ವೀಟ್ ಮಾಡಿದ್ದಾರೆ. ‘1997ರ ಮಹಿಳಾ ವಿಶ್ವಕಪ್ ಫೈನಲ್ ಈಡನ್ ಗಾರ್ಡನ್ಸ್ನಲ್ಲಿ ನಡೆದಾಗ ಆ ಪಂದ್ಯವನ್ನು ನೋಡಿ ನಾನು ಸ್ಫೂರ್ತಿ ಪಡೆದು ಕ್ರಿಕೆಟ್ಗೆ ಕಾಲಿಟ್ಟೆ. ನನ್ನ 2 ದಶಕಗಳ ಕ್ರಿಕೆಟ್ ಪಯಣದಲ್ಲಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ.
ಪಂದ್ಯಕ್ಕೂ ಮೊದಲು ಭಾರತ ತಂಡ ಜೂಲನ್ಗೆ ಗೌರವ ಸಲ್ಲಿಸಿತು. ಈ ವೇಳೆ ನಾಯಕಿ ಹರ್ಮನ್ಪ್ರೀತ್ ಕೌರ್ ಜೂಲನ್ರನ್ನು ತಬ್ಬಿಕೊಂಡು ಕಣ್ಣೀರಿಡುತ್ತಾ ಅವರ ಸಾಧನೆಗಳನ್ನು ಕೊಂಡಾಡಿದರು. ಟಾಸ್ ವೇಳೆ ಹರ್ಮನ್ಪ್ರೀತ್ ಜೊತೆ ಜೂಲನ್ ಸಹ ಇದ್ದಿದ್ದು ವಿಶೇಷ. ಇದೇ ವೇಳೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಜೂಲನ್ ಗೋಸ್ವಾಮಿ ಹೆಸರನ್ನು ಸ್ಟ್ಯಾಂಡ್ವೊಂದಕ್ಕೆ ಇಡಲು ಬಂಗಾಳ ಕ್ರಿಕೆಟ್ ಸಂಸ್ಥೆ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ದೀಪ್ತಿ ಶರ್ಮಾ ರನೌಟ್ ಬಗ್ಗೆ ಕೇಳಿದ್ದಕ್ಕೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟ ಹರ್ಮನ್ಪ್ರೀತ್ ಕೌರ್..!
39 ವರ್ಷದ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ 10,001 ಎಸೆತಗಳನ್ನು ಎಸೆದ ಮೊದಲ ಮಹಿಳಾ ಕ್ರಿಕೆಟರ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಷ್ಟೇ ಅಲ್ಲದೇ ಏಕದಿನ ಕ್ರಿಕೆಟ್ನಲ್ಲಿ 255 ವಿಕೆಟ್ ಕಬಳಿಸುವ ಮೂಲಕ ಅತಿಹೆಚ್ಚು ಏಕದಿನ ಬಲಿಪಡೆದ ಮಹಿಳಾ ಬೌಲರ್ ಶ್ರೇಯವನ್ನು ನಿರ್ಮಿಸಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಜೂಲನ್ ಗೋಸ್ವಾಮಿ ಭಾರತ ಪರ 204 ಏಕದಿನ, 68 ಟಿ20 ಹಾಗೂ 12 ಟೆಸ್ಟ್ ಪಂದ್ಯಗಳನ್ನಾಡಿ ಕ್ರಮವಾಗಿ 255, 56 ಹಾಗೂ 44 ವಿಕೆಟ್ ಕಬಳಿಸಿದ್ದಾರೆ.
ಜೂಲನ್ ಗೋಸ್ವಾಮಿ ಸಾಧನೆಯ ಝಲಕ್:
2007ರಲ್ಲಿ ಜೂಲನ್ ಗೋಸ್ವಾಮಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡರು.
2009ರಲ್ಲಿ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಜೂಲನ್ ಗೋಸ್ವಾಮಿ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ನಾಯಕಿಯಾಗಿ ಮುನ್ನಡೆಸಿದ್ದರು.
2010ರಲ್ಲಿ ಭಾರತದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರಿಂದ ಸ್ವೀಕರಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.