
ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವು 165 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್ನಿಂದ ಹೊರಬರುವ ಮುನ್ನವೇ ಲಂಕಾ ಪಡೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಆಗಸ್ಟ್ 23ರಿಂದ ಆರಂಭವಾಗಲಿರುವ ಭಾರತ ಎದುರಿನ ಎರಡನೇ ಟೆಸ್ಟ್ ಪಂದ್ಯದಿಂದ ಇಬ್ಬರು ಆಟಗಾರರು ಹೊರಬಿದ್ದಿದ್ದಾರೆ. ಇದು ಲಂಕಾ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಹೌದು, ಭಾರತ ಎದುರಿನ ಕೊಲಂಬೊ ಟೆಸ್ಟ್ ಪಂದ್ಯದಿಂದ ಲಂಕಾದ ಪ್ರಮುಖ ಬ್ಯಾಟರ್ ದಿನೇಶ್ ಚಂಡಿಮಾಲ್ ಹಾಗೂ ಕುಸಾಲ್ ಮೆಂಡಿಸ್ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ ಖಚಿತಪಡಿಸಿದ್ದಾರೆ.
ಶ್ರೀಲಂಕಾದ ಅನುಭವಿ ಬ್ಯಾಟರ್ ಕುಸಾಲ್ ಮೆಂಡಿಸ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಭಾನುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ಇನ್ನು ಸಹ ಆಟಗಾರ ಚಂಡಿಮಾಲ್, ಭಾರತ ಎದುರಿನ ಗಾಲೆ ಟೆಸ್ಟ್ ಪಂದ್ಯದ ವೇಳೆಯಲ್ಲಿ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಕನ್ಕಷನ್ ಆಟಗಾರನ ರೂಪದಲ್ಲಿ ಚಂಡಿಮಾಲ್ ಬದಲಿಗೆ ಪಸಿಂದು ಸೂರ್ಯಬಂಡಾರ ಲಂಕಾ ತಂಡ ಕೂಡಿಕೊಂಡಿದ್ದರು.
ಐಸಿಸಿ ನಿಯಮಾವಳಿ ಪ್ರಕಾರ, ಕನ್ಕಷನ್ ಸಬ್ಸ್ಟಿಟ್ಯೂಟ್ ಆಟಗಾರನಾಗಿ ತಂಡದಿಂದ ಹೊರಗುಳಿದರೆ, ಆತ ಕಡ್ಡಾಯವಾಗಿ ಏಳು ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ವಿಶ್ರಾಂತಿ ಪಡೆಯಬೇಕಾಗುತ್ತದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕೇವಲ 4 ದಿನಗಳ ಅಂತರದಲ್ಲಿ ಆರಂಭವಾಗುತ್ತಿದೆ. ಹೀಗಾಗಿ ದಿನೇಶ್ ಚಂಡಿಮಾಲ್, ಅನಿವಾರ್ಯವಾಗಿ ಎರಡನೇ ಟೆಸ್ಟ್ನಿಂದ ಹೊರಬಿದ್ದಿದ್ದಾರೆ.
ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕುಸಾಲ್ ಮೆಂಡಿಸ್, ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆಯಲ್ಲಿಯೇ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. 'ದಿನೇಶ್ ಚಂಡಿಮಾಲ್ ಎರಡನೇ ಟೆಸ್ಟ್ಗೆ ಅಲಭ್ಯರಾಗಿದ್ದಾರೆ. ಅದೇ ರೀತಿ ಕುಸಾಲ್ ಮೆಂಡಿಸ್ ಕೂಡಾ ಭಾರತ ಎದುರಿನ ಕೊಲಂಬೊ ಟೆಸ್ಟ್ನಿಂದ ಹೊರಬಿದ್ದಿದ್ದಾರೆ' ಎಂದು ಶ್ರೀಲಂಕಾ ಹೆಡ್ ಕೋಚ್ ಗ್ಯಾರಿ ಖಚಿತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ಪ್ರಗತಿ ಸಾಧಿಸಿದೆ. ತಂಡ 5ನೇ ಸ್ಥಾನದಲ್ಲೇ ಬಾಕಿಯಾಗಿದ್ದರೂ, ಗೆಲುವಿನ ಶೇಕಡಾವಾರು ದಾಖಲೆಯಲ್ಲಿ ಹೆಚ್ಚಳವಾಗಿದೆ.
ಪಂದ್ಯಕ್ಕೂ ಮುನ್ನ ಭಾರತದ ಗೆಲುವಿನ ದಾಖಲೆ ಶೇ.48.15 ಇತ್ತು. ಈಗ ಅದು ಶೇ.53.33ಕ್ಕೆ ಏರಿಕೆಯಾಗಿದೆ. ತಂಡ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದು, 5ರಲ್ಲಿ ಜಯಗಳಿಸಿದೆ. ಆಸ್ಟ್ರೇಲಿಯಾ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಶೇ.77.78 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. 5 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಜಯಗಳಿಸಿರುವ ಶ್ರೀಲಂಕಾ ಶೇ.33.33 ಗೆಲುವಿನ ದಾಖಲೆಯೊಂದಿಗೆ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.