
ಪಲ್ಲಕೆಲೆ(ಸೆ.05): ಮುಂಬರುವ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ ಮಂಗಳವಾರ ಭಾರತ ತಂಡ ಘೋಷಣೆಯಾಗಲಿದೆ. ವಿಶ್ವಕಪ್ ಆರಂಭಕ್ಕೆ ಸರಿಯಾಗಿ ಒಂದು ತಿಂಗಳ ಮುಂಚೆ ಬಿಸಿಸಿಐ ಆಯ್ಕೆ ಸಮಿತಿ ತಂಡ ಪ್ರಕಟ ಮಾಡಲಿದೆ. ಈಗಾಗಲೇ 15 ಆಟಗಾರರ ತಂಡ ಅಂತಿಮಗೊಂಡಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ವಿಶ್ವಕಪ್ಗೆ ತಂಡ ಪ್ರಕಟಿಸಲು ಐಸಿಸಿ ಸೆಪ್ಟೆಂಬರ್ 5ರ ಗಡುವು ವಿಧಿಸಿದ್ದು, ಯಾವುದೇ ಬದಲಾವಣೆ ಮಾಡಲು ಸೆಪ್ಟೆಂಬರ್ 27ರ ವರೆಗೂ ಅವಕಾಶವಿದೆ. ಸದ್ಯ ಭಾರತ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯನ್ನಾಡುತ್ತಿದ್ದು, ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಬೀಡುಬಿಟ್ಟಿದೆ. ಅನುಭವಿ ಆಫ್ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಕೇರಳ ಮೂಲದ ಸಂಜು ಸ್ಯಾಮ್ಸನ್, ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್ಗೆ ಭಾರತ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ ಎನಿಸಿದೆ.
ಕೆ ಎಲ್ ರಾಹುಲ್ ಮೇಲೆ ಕಣ್ಣು: ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡಿಗ ಕೆ ಎಲ್ ರಾಹುಲ್ ಕೊನೆಗೂ ಫಿಟ್ನೆಸ್ ಸಾಧಿಸಿ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿದ್ದರು. ಆದರೆ ಮತ್ತೆ ಏಷ್ಯಾಕಪ್ ಟೂರ್ನಿಗೂ ಮುನ್ನ ಗಾಯಗೊಂಡು ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಕೆ ಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ
World Cup 2023: ವಿಶ್ವಕಪ್ ಟೂರ್ನಿಗೆ ಇಂದೇ ಭಾರತ ತಂಡ ಪ್ರಕಟ..? ರೋಹಿತ್ ಪಡೆಯಲ್ಲಿ ಯಾರಿಗೆಲ್ಲಾ ಸ್ಥಾನ?
ಸಂಭವನೀಯ ತಂಡ: ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.
ಮುಷ್ತಾಕ್ ಅಲಿ ಟಿ20: ರಾಜ್ಯದ ಸಂಭಾವ್ಯರ ತಂಡ ಪ್ರಕಟ
ಬೆಂಗಳೂರು: ಅ.16ರಿಂದ ನ.6ರ ವರೆಗೆ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಗೆ ಕರ್ನಾಟಕದ 28 ಆಟಗಾರರ ಸಂಭಾವ್ಯ ತಂಡ ಪ್ರಕಟಗೊಂಡಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದ ಮನ್ವಂತ್ ಕುಮಾರ್, ಶ್ರೀಜಿತ್ ಕೆ.ಎಲ್., ಅಭಿಲಾಶ್ ಶೆಟ್ಟಿ, ಸ್ಮರಣ್ ಆರ್. ಸಂಭವನೀಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Asia Cup ಅರ್ಧಕ್ಕೆ ಬಿಟ್ಟು ಬುಮ್ರಾ ತವರಿಗೆ ವಾಪಾಸ್ಸಾಗಿದ್ದೇಕೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ..!
ಉಳಿದಂತೆ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಸೇರಿ ಹಲವು ತಾರಾ ಆಟಗಾರರ ಹೆಸರು ಪಟ್ಟಿಯಲ್ಲಿದೆ. ಅಂತಿಮ 15 ಸದಸ್ಯರ ತಂಡವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ಸದ್ಯದಲ್ಲೇ ಪ್ರಕಟಿಸಲಿದೆ.
ಏಷ್ಯಾಕಪ್: ಇಂದು ಶ್ರೀಲಂಕಾ-ಆಫ್ಘನ್
ಲಾಹೋರ್: ಏಷ್ಯಾಕಪ್ ಟೂರ್ನಿಯ ಗುಂಪು ಹಂತದ ಪಂದ್ಯಗಳು ಮಂಗಳವಾರ ಮುಕ್ತಾಯಗೊಳ್ಳಲಿದ್ದು, ಕೊನೆ ಪಂದ್ಯದಲ್ಲಿ ಶ್ರೀಲಂಕಾ-ಅಫ್ಘಾನಿಸ್ತಾನ ಮುಖಾಮುಖಿಯಾಗಲಿವೆ. ‘ಬಿ’ ಗುಂಪಿನಿಂದ ಲಂಕಾ ಹಾಗೂ ಬಾಂಗ್ಲಾದೇಶ ಈಗಾಗಲೇ ಸೂಪರ್-4ನಲ್ಲಿ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದ್ದು, ಆಫ್ಘನ್ ಬಹುತೇಕ ಹೊರಬಿದ್ದಿದೆ.
ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದ ಲಂಕಾ, ‘ಬಿ’ ಗುಂಪಿನಲ್ಲಿ ಉತ್ತಮ ನೆಟ್ ರನ್ ರೇಟ್ (+0.951)ನೊಂದಿಗೆ ಅಗ್ರಸ್ಥಾನದಲ್ಲಿದೆ. ಅತ್ತ ಆಫ್ಘನ್ ವಿರುದ್ಧ ಗೆದ್ದಿರುವ ಬಾಂಗ್ಲಾ 2 ಅಂಕ ಪಡೆದು +0.373 ನೆಟ್ ರನ್ ರೇಟ್ನೊಂದಿಗೆ 2ನೇ ಸ್ಥಾನದಲ್ಲಿದ್ದು, ಆಫ್ಘನ್ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದೆ. ಹೀಗಾಗಿ ಆಫ್ಘನ್ ಸೂಪರ್-4 ಹಂತ ಪ್ರವೇಶಿಸಬೇಕಿದ್ದರೆ ಪವಾಡವೇ ಘಟಿಸಬೇಕು. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೂ ಲಂಕಾ, ಬಾಂಗ್ಲಾ ಮುಂದಿನ ಸುತ್ತಿಗೇರಲಿವೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.