Ind vs SA: ಟೆಸ್ಟ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ತುಟಿಬಿಚ್ಚಿದ ರಾಹುಲ್‌ ದ್ರಾವಿಡ್

Suvarna News   | Asianet News
Published : Jan 07, 2022, 11:59 AM IST
Ind vs SA: ಟೆಸ್ಟ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಲಭ್ಯತೆ ಬಗ್ಗೆ ತುಟಿಬಿಚ್ಚಿದ ರಾಹುಲ್‌ ದ್ರಾವಿಡ್

ಸಾರಾಂಶ

* ಜೋಹಾನ್ಸ್‌ಬರ್ಗ್‌ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ * ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1ರ ಸಮಬಲ * ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡ ಕೂಡಿಕೊಳ್ಳುವ ಸಾಧ್ಯತೆ

ಜೋಹಾನ್ಸ್‌ಬರ್ಗ್(ಜ.07)‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಆಘಾತಕಾರಿ ಸೋಲು ಕಂಡಿದೆ. ವಾಂಡರರ್ಸ್‌ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಹೀಗಾಗಿ ಮೂರನೇ ಹಾಗೂ ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಕನಸು ಕಾಣುತ್ತಿರುವ ಟೀಂ ಇಂಡಿಯಾಗೆ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಗುಡ್‌ ನ್ಯೂಸ್ ಸಿಕ್ಕಿದೆ

ಹೌದು, ಜನವರಿ 11ರಿಂದ ಕೇಪ್‌ಟೌನ್‌ನಲ್ಲಿ (Cape Town Test) ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ ಪಂದ್ಯಕ್ಕೆ ನಾಯಕ ವಿರಾಟ್‌ ಕೊಹ್ಲಿ (Virat Kohli) ಲಭ್ಯವಿರಲಿದ್ದಾರೆ ಎಂದು ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಹೇಳಿದ್ದಾರೆ. 2ನೇ ಟೆಸ್ಟ್‌ ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಅವರು, ‘ಕೊಹ್ಲಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಬೆನ್ನು ನೋವಿನಿಂದ ಅವರು ಚೇತರಿಸಿಕೊಂಡಿದ್ದು. 3ನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ’ ಎಂದಿದ್ದಾರೆ.

ಇಲ್ಲಿನ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳ ಪ್ರದರ್ಶನದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ದ್ರಾವಿಡ್‌, ಎರಡೂ ತಂಡಗಳ ಪಾಲಿಗೆ ಈ ವಿಕೆಟ್ ಸಾಕಷ್ಟು ಸವಾಲಿನದ್ದೇ ಆಗಿದೆ. ದಕ್ಷಿಣ ಆಫ್ರಿಕಾ ತಂಡವು ನಾಲ್ಕನೇ ಇನಿಂಗ್ಸ್‌ನಲ್ಲಿ ಅತ್ಯದ್ಭುತ ಬ್ಯಾಟಿಂಗ್ ನಡೆಸಿತು. ಹೌದು, ಜತೆಯಾಟದ ವಿಚಾರದಲ್ಲಿ ನಾವು ಹೆಚ್ಚು ಒತ್ತು ನೀಡಬೇಕು. ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸ್ವಲ್ವ ಸವಾಲಿನದ್ದಾಗಿತ್ತು. ಇನ್ನೂ 55-60 ರನ್‌ ಹೆಚ್ಚಿಗೆ ಗಳಿಸಿದ್ದರೆ, ಫಲಿತಾಂಶದ ಮೇಲೆ ಸಾಕಷ್ಟ ವ್ಯತ್ಯಾಸಗಳಾಗುತ್ತಿತ್ತು ಎಂದು 'ದ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Ind vs SA: ಭಾರತದ ನೆಚ್ಚಿನ ತಾಣದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಜಯಭೇರಿ

ನಮ್ಮ ತಂಡದ ಬ್ಯಾಟರ್‌ಗಳು ಇನ್ನೂ ಸ್ವಲ್ಪ ಚೆನ್ನಾಗಿ ಬ್ಯಾಟಿಂಗ್ ಮಾಡಲಿ ಎಂದು ಬಯಸುತ್ತೇನೆ. ಆಟಗಾರರು ತಮಗೆ ಸಿಕ್ಕ ಉತ್ತಮ ಆರಂಭವನ್ನು ಮೂರಂಕಿ ಮೊತ್ತ ದಾಖಲಿಸುವಂತಾಗಬೇಕು. ಅದೇ ಮೊದಲ ಪಂದ್ಯದ ಫಲಿತಾಂಶವನ್ನು ನಿರ್ಣಯಿಸುವಂತೆ ಮಾಡಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್‌. ರಾಹುಲ್ ಶತಕ ಬಾರಿಸಿದರು, ಹೀಗಾಗಿ ಮೊದಲ ಟೆಸ್ಟ್ ಪಂದ್ಯವು ನಮ್ಮ ಪಾಲಾಯಿತು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ತಂಡದ ನಾಯಕ ಡೀನ್ ಎಲ್ಗರ್ ಅಜೇಯ 96 ರನ್‌ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿದರು ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಕೆ.ಎಲ್‌.ರಾಹುಲ್‌ ಕೂಡಾ ಕೊಹ್ಲಿ 3ನೇ ಟೆಸ್ಟ್‌ಗೆ ಲಭ್ಯವಿರಲಿದ್ದಾರೆ ಎಂದು ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ವಾಪಸಾದರೆ ಯಾರು ಹೊರಬೀಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಬೆಂಗಳೂರಲ್ಲಿ ಭಾರತ ಒನ್‌ಡೇ ತಂಡ ಅಭ್ಯಾಸ

ಬೆಂಗಳೂರು: ಜನವರಿ 19ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡುತ್ತಿರುವ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 

ಶಿಖರ್‌ ಧವನ್‌, ಯುಜುವೇಂದ್ರ ಚಹಲ್‌, ಇಶಾನ್‌ ಕಿಶನ್‌, ದೀಪಕ್‌ ಚಹರ್‌, ಪ್ರಸಿಧ್ ಕೃಷ್ಣ, ಸೂರ್ಯಕುಮಾರ್‌ ಯಾದವ್‌ ಸೇರಿ ಇನ್ನೂ ಕೆಲವರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಮುಂದಿನ 3-4 ದಿನಗಳಲ್ಲಿ ಆಟಗಾರರು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!