
ಅಹಮದಾಬಾದ್(ನ.19): 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ.
ಇನ್ನು ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಇಲ್ಲ. ಆದರೂ ಫೈನಲ್ ಪಂದ್ಯಕ್ಕೆ ಐಸಿಸಿ ಮೀಸಲು ದಿನ ನಿಗದಿಪಡಿಸಿದ್ದು, ಮಳೆಯಿಂದ ಭಾನುವಾರ ಪಂದ್ಯ ನಡೆಯದಿದ್ದರೆ ಸೋಮವಾರ ಮುಂದುವರಿಯಲಿದೆ. ಭಾನುವಾರ ಎರಡೂ ತಂಡಗಳ ಕನಿಷ್ಠ 20 ಓವರ್ ಆಟ ನಡೆಯಬೇಕು. ಇದು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯ ಮರುದಿನಕ್ಕೆ ಮುಂದೂಡಿಕೆಯಾಗಲಿದೆ. 2 ದಿನಗಳಲ್ಲೂ ಆಟ ಪೂರ್ಣಗೊಳ್ಳದೆ ರದ್ದಾದರೆ ಇತ್ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ
ಪಿಚ್ ರಿಪೋರ್ಟ್
ಅಹಮದಾಬಾದ್ ಪಿಚ್ನ ಇತಿಹಾಸ ಗಮನಿಸಿದರೆ ಬ್ಯಾಟರ್ಗಳಿಗೆ ಹೆಚ್ಚಿನ ನೆರವಾದ ಉದಾಹರಣೆಯಿದೆ. ಫೈನಲ್ಗೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಬಳಸಿದ್ದ ಪಿಚ್ ಆಯ್ಕೆ ಮಾಡಲಾಗಿದೆ. ಈ ಪಿಚ್ನಲ್ಲಿ ವೇಗದ ಕೊರತೆ ಎದುರಾಗುವ ಸಾಧ್ಯತೆಯಿದೆ. ಇನ್ನು, ಇಲ್ಲಿ ಈ ಬಾರಿ ಆಡಿರುವ 4 ಪಂದ್ಯಗಳಲ್ಲಿ ಒಮ್ಮೆಯೂ 300+ ರನ್ ದಾಖಲಾಗಿಲ್ಲ. 3 ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡ ಜಯಗಳಿಸಿದ್ದು, ಟಾಸ್ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸಬಹುದು.
ಸತತ 4ನೇ ಬಾರಿಗೆ ಆತಿಥೇಯರಿಗೆ ಟ್ರೋಫಿ? ಟೀಂ ಇಂಡಿಯಾ ಕಪ್ ಗೆಲ್ಲಲು ಇನ್ನೊಂದೇ ಹೆಜ್ಜೆ ಬಾಕಿ
ಆಸ್ಟ್ರೇಲಿಯಾ ತಂಡಕ್ಕೆ ಪಿಚ್ ಭೀತಿ?
ಶನಿವಾರ ಅಭ್ಯಾಸಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಪಿಚ್ ಪರಿಶೀಲಿಸಿದ್ದು, ಪಿಚ್ಗಳ ಫೋಟೋ ಕೂಡಾ ಕ್ಲಿಕ್ಕಿಸಿಕೊಂಡಿದ್ದಾರೆ. ಪಿಚ್ಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಕಮಿನ್ಸ್ ತಂಡದ ಸಹ ಆಟಗಾರರ ಜೊತೆ ಚರ್ಚಿಸಲು ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ. ಅವರು ಮೊಬೈಲ್ ಮೂಲಕ ಪಿಚ್ ಫೋಟೋ ಕ್ಲಿಕ್ಕಿಸುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಮೋದಿ ಸ್ಟೇಡಿಯಂ ಒಳಗೆ 3,000 ಪೊಲೀಸರ ನಿಯುಕ್ತಿ!
ಅಹಮದಾಬಾದ್: ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯದ ಭದ್ರತೆಗಾಗಿ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಅಹಮದಾಬಾದ್ ಪೊಲೀಸ್ ಆಯುಕ್ತ ಜಿಎಸ್ ಮಲಿಕ್ ಮಾಹಿತಿ ನೀಡಿದ್ದು, ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸ್ಟೇಡಿಯಂ ಬಳಿ ಹಾಗೂ ನಗರ ದೆಲ್ಲೆಡೆ ಗುಜರಾತ್ ಪೊಲೀಸ್, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್ಎಎಫ್), ಹೋಮ್ ಗಾರ್ಡ್ಸ್ ಸೇರಿ ಒಟ್ಟು 6 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ. ಈ ಪೈಕಿ ಸುಮಾರು 3,000 ಪೊಲೀಸರು ಮೈದಾನದ ಒಳಗಿರಲಿದ್ದಾರೆ ಎಂದಿದ್ದಾರೆ. ಅಲ್ಲದೆ, 10 ಬಾಂಬ್ ನಿಷ್ಕ್ರಿಯ ದಳಗಳನ್ನೂ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಭಾರತ vs ಆಸ್ಟ್ರೇಲಿಯಾ ಮೆಗಾ ಫೈನಲ್ ಫೈಟ್..! ಟ್ರೋಫಿಗಾಗಿ ಮದಗಜಗಳ ಕಾಳಗ
ಏರ್ ಶೋ, ಸಂಗೀತ ಕಾರ್ಯಕ್ರಮ:
ಫೈನಲ್ ಪಂದ್ಯಕ್ಕೂ ಮುನ್ನ 15 ನಿಮಿಷಗಳ ಕಾಲ ಭಾರತೀಯ ವಾಯು ಸೇನೆಯಿಂದ ಏರ್ ಶೋ ನಡೆಯಲಿದೆ. ಬಳಿಕ ಮೊದಲ ಇನ್ನಿಂಗ್ಸ್ ವಿರಾಮದ ವೇಳೆ ಪ್ರೀತಂ, ಜೋನಿತಾ ಗಾಂಧಿ, ನಕಾಶ್ ಅಜೀಜ್, ಅಕಾಶ್ ಸಿಂಗ್ ಸೇರಿದಂತೆ ಖ್ಯಾತನಾಮರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 2ನೇ ಇನ್ನಿಂಗ್ಸ್ನ ಡ್ರಿಂಕ್ಸ್ ಬ್ರೇಕ್ ವೇಳೆ ಲೇಸರ್ ಹಾಗೂ ಲೈಟ್ ಶೋ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.