
ಅಹಮದಾಬಾದ್: ತಮ್ಮ ವೃತ್ತಿಜೀವನದ ದೊಡ್ಡ ಸವಾಲುಗಳು ಮತ್ತು ಕಠಿಣ ಟೀಕೆಗಳ ನಡುವೆಯೂ ಕೋಚ್ ಗೌತಮ್ ಗಂಭೀರ್, ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಮಣಿಸಿ ಭಾರತ ಇತಿಹಾಸ ಬರೆದ ಬೆನ್ನಲ್ಲೇ, ಗಂಭೀರ್ ಈ ಕಿರೀಟವನ್ನು ತಮ್ಮ ಹಿಂದಿನ ಕೋಚ್ಗಳಾದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ಗೆ ಅರ್ಪಿಸಿದ್ದಾರೆ.
"ಈ ಟ್ರೋಫಿಯನ್ನು ನಾನು ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ಗೆ ಅರ್ಪಿಸುತ್ತೇನೆ. ಭಾರತ ತಂಡವನ್ನು ಈ ಮಟ್ಟಕ್ಕೆ ತಂದ ರಾಹುಲ್ ಭಾಯ್ಗೆ ಮತ್ತು ಅತ್ಯುತ್ತಮ ಯುವ ಆಟಗಾರರನ್ನು ರೂಪಿಸಿದ ಲಕ್ಷ್ಮಣ್ಗೆ ನಾನು ಋಣಿಯಾಗಿದ್ದೇನೆ" ಎಂದು ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2013ರ ಬಳಿಕ 2024ರಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 2024ರಲ್ಲಿ ಟಿ20 ವಿಶ್ವಕಪ್ ಜಯಿಸುವ ಮೂಲಕ ದಶಕದ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿತ್ತು. ಕಳೆದ ವಿಶ್ವಕಪ್ ಆಡಿದ ಪ್ರಮುಖ ಆಟಗಾರರು ಈ ಬಾರಿಯು ಭಾರತ ತಂಡದಲ್ಲಿದ್ದರು. ಇದಷ್ಟೇ ಅಲ್ಲದೇ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್(ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ) ಮುಖ್ಯಸ್ಥರಾಗಿರು ವಿವಿಎಸ್ ಲಕ್ಷ್ಮಣ್, ಯುವ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಭಾರತ ತಂಡ ಬಲಿಷ್ಠವಾಗಿ ರೂಪುಗೊಳ್ಳಲು ನೆರವಾಗಿದ್ದರು. ಈ ಕಾರಣಕ್ಕಾಗಿಯೇ 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಗಂಭೀರ್ ಈ ಇಬ್ಬರು ಸಹ ಆಟಗಾರರಿಗೆ ಅರ್ಪಿಸಿದ್ದಾರೆ.
ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತಾಗ ತಮ್ಮ ಮೇಲೆ ಸಾಕಷ್ಟು ಟೀಕೆಗಳು ಬಂದಿದ್ದವು. ಆಗ ಐಸಿಸಿ ಅಧ್ಯಕ್ಷ ಜಯ್ ಶಾ ತಮಗೆ ಆತ್ಮವಿಶ್ವಾಸ ತುಂಬಿದರು ಎಂದು ಗಂಭೀರ್ ಬಹಿರಂಗಪಡಿಸಿದರು. "ನನ್ನ ವೃತ್ತಿಜೀವನದ ಅತ್ಯಂತ ಕೆಟ್ಟ ಸಮಯದಲ್ಲಿ ಜಯ್ ಭಾಯ್ ನನಗೆ ಕರೆ ಮಾಡಿದ್ದರು. ಆ ಬೆಂಬಲ ಬಹಳ ದೊಡ್ಡದು. ಹಾಗೆಯೇ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ನೀಡಿದ ಬೆಂಬಲಕ್ಕೂ ಗಂಭೀರ್ ಧನ್ಯವಾದ ತಿಳಿಸಿದರು. ನಾನು ಜವಾಬ್ದಾರನಾಗಿರುವುದು ಡ್ರೆಸ್ಸಿಂಗ್ ರೂಮ್ನಲ್ಲಿರುವ ಆ 30 ಜನರಿಗೆ, ಸೋಷಿಯಲ್ ಮೀಡಿಯಾದಲ್ಲಿರುವ ಜನರಿಗಲ್ಲ" ಎಂದು ಗಂಭೀರ್ ಸ್ಪಷ್ಟಪಡಿಸಿದರು.
"ವೈಯಕ್ತಿಕ ಸಾಧನೆಗಳನ್ನು ಸಂಭ್ರಮಿಸುವುದನ್ನು ನಿಲ್ಲಿಸಿ, ತಂಡದ ಗೆಲುವನ್ನು ಆಚರಿಸಲು ನಾನು ಯಾವಾಗಲೂ ಪ್ರಯತ್ನಿಸಿದ್ದೇನೆ. ಬಹಳ ಕಾಲದಿಂದ ನಾವು ವೈಯಕ್ತಿಕ ದಾಖಲೆಗಳನ್ನೇ ಸಂಭ್ರಮಿಸುತ್ತಿದ್ದೆವು. ಇನ್ನು ಮುಂದೆಯಾದರೂ ಅದನ್ನು ನಿಲ್ಲಿಸಿ ತಂಡದ ಗೆಲುವನ್ನು ಸಂಭ್ರಮಿಸಬೇಕು. ನಾವು ಸೋಲಿನ ಭಯದಿಂದಲ್ಲ, ಧೈರ್ಯದಿಂದ ಆಡಬೇಕು. ಫೈನಲ್ನಲ್ಲಿ 250 ರನ್ ಗಳಿಸಲು ಸಾಧ್ಯವಾಗಿದ್ದು ಆ ಧೈರ್ಯದ ಫಲವೇ ಆಗಿದೆ" ಎಂದು ಗೌತಮ್ ಗಂಭೀರ್ ಹೇಳಿದರು.
ನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗಿನ ತಮ್ಮ ಬಾಂಧವ್ಯವೇ ತಂಡದ ಯಶಸ್ಸಿನ ಹಿಂದಿನ ಶಕ್ತಿ ಎಂದು ಗಂಭೀರ್ ಹೇಳಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವುದೇ ತಂಡದ ಮುಂದಿನ ಗುರಿ ಎಂದು ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದರು. "ನಾನು ತಂಡಗಳನ್ನು ಆಯ್ಕೆ ಮಾಡಿದ್ದು ನಂಬಿಕೆ ಮತ್ತು ಖಚಿತತೆಯ ಆಧಾರದ ಮೇಲೆ. ಕೇವಲ ಭರವಸೆಯ ಮೇಲೆ ನಾನು ಎಂದಿಗೂ ತಂಡವನ್ನು ಆಯ್ಕೆ ಮಾಡಿಲ್ಲ" ಎಂದು ಸೂರ್ಯ ಹೇಳಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಆರಂಭಿಕರಾದ ಸಂಜು ಸ್ಯಾಮ್ಸನ್(89), ಅಭಿಷೇಕ್ ಶರ್ಮಾ(52) ಹಾಗೂ ಇಶಾನ್ ಕಿಶನ್(54) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್ ಕಲೆಹಾಕಿತ್ತು. ಇನ್ನು ಕಠಿಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಜಸ್ಪ್ರೀತ್ ಬುಮ್ರಾ(15/4) ಮಾರಕ ದಾಳಿಗೆ ತತ್ತರಿಸಿ 19 ಓವರ್ಗಳಲ್ಲಿ ಕೇವಲ 159 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 96 ರನ್ ಅಂತರದಲ್ಲಿ ಭಾರತ ಎದುರು ಸೋಲು ಅನುಭವಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.