ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ನಾಯಕ ಎನ್ನುವ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶಿಷ್ಠ ಗೌರವ ನೀಡಲು ಮುಂಬೈನ ವಾಂಖೆಡೆ ಮೈದಾನ ಸಿದ್ದತೆ ನಡೆಸುತ್ತಿದೆ. ಏನದು ಗೌರವ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಮುಂಬೈ(ಆ.19): 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಎಂ.ಎಸ್.ಧೋನಿ ಬಾರಿಸಿದ ಗೆಲುವಿನ ಸಿಕ್ಸರ್ ಅನ್ನು ಯಾರು ತಾನೆ ಮರೆಯಲು ಸಾಧ್ಯ. ಇದೀಗ ಅದಕ್ಕೆ ಮತ್ತಷ್ಟು ಗೌರವ ನೀಡಲು ವಾಂಖೆಡೆ ಮೈದಾನ ಸಜ್ಜಾಗಿದೆ
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬೆನ್ನಲ್ಲೆ, ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯ ಅಪೆಕ್ಸ್ ಸಮಿತಿಯ ಸದಸ್ಯ ಅಜಿಂಕ್ಯ ನಾಯ್ಕ್, ಧೋನಿ ಸಿಕ್ಸರ್ ಬಾರಿಸಿದಾಗ ಚೆಂಡು ಯಾವ ಆಸನದ ಮೇಲೆ ಬೀಳುತ್ತಿತ್ತೋ ಆ ಆಸನವನ್ನು ಗುರುತಿಸಿ ಅದಕ್ಕೆ ಧೋನಿ ಹೆಸರನ್ನೇ ಇಡಲು ಎಂಸಿಎ ಮುಂದೆ ಪ್ರಸ್ತಾಪವಿರಿಸಿದ್ದಾರೆ. ಈ ಪ್ರಸ್ತಾಪವನ್ನು ಎಂಸಿಎ ಅಧಿಕಾರಿಗಳು ಪರಿಗಣಿಸಿದ್ದು, ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.
ಧೋನಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಐಸಿಸಿ
ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲಾ ಪೀಳಿಗೆಗೆ ಸ್ಫೂರ್ತಿಯಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರ ಆಟದಿಂದ ವಂಚಿತರಾಗಲಿದ್ದೇವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಮನು ಸಾವ್ನೆ ಹೇಳಿದ್ದಾರೆ.
ಧೋನಿ ಮೊದಲು ಸಹಿ ಮಾಡಿದ ಪ್ರಮುಖ ಬ್ರ್ಯಾಂಡ್ ಕರ್ನಾಟಕದ್ದು, ಆ ಮೇಲಿನ ವಿವಾದ ನಿಮಗೆ ನೆನಪಿದೆಯಾ..?
ಐಸಿಸಿಯ 3 ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡಿದ್ದ 39 ವರ್ಷದ ಧೋನಿ, ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ನಲ್ಲಿ ಧೋನಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ. 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಧೋನಿ ಮಾಡಿದ ಚಮತ್ಕಾರವನ್ನು ವಿಶ್ವದಾದ್ಯಂತ ಅಭಿಮಾನಿಗಳು ಈಗಲೂ ನೆನೆಯುತ್ತಾರೆ. ಅತ್ಯುತ್ತಮ ಕ್ರಿಕೆಟ್ ಜೀವನಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ ಎಂದು ಮನು ಹೇಳಿದ್ದಾರೆ.