
ಬೆಂಗಳೂರು(ಜೂ.18): ಕರ್ನಾಟಕದ ಮಾಜಿ ಕ್ರಿಕೆಟಿಗ, ದಿಗ್ಗಜ ಆಲ್ರೌಂಡರ್ ಬಿ.ವಿಜಯ್ಕೃಷ್ಣ(71) ಗುರುವಾರ ಬಹು ಅಂಗಾಂಗ ವೈಫಲ್ಯ ಹಾಗೂ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಆರೋಗ್ಯ ಸಮಸ್ಯೆಯಿಂದಾಗಿ 2 ದಿನಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಬೆಳಗ್ಗೆ ನಿಧನರಾದರು. ರಾಜ್ಯದ ಪರ 15 ವರ್ಷಗಳ ಕಾಲ ಕರ್ನಾಟಕ ಕ್ರಿಕೆಟ್ ತಂಡದ ಪರ ಆಡಿದ್ದ ವಿಜಯಕೃಷ್ಣ, 80 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ, 194 ವಿಕೆಟ್ ಕಬಳಿಸಿದ್ದರು. 2 ಶತಕ ಸೇರಿ 2297 ರನ್ ಸಹ ಕಲೆಹಾಕಿದ್ದರು.
ಎಡಗೈ ಬ್ಯಾಟ್ಸ್ಮನ್ ಆಗಿದ್ದ ಅವರು ‘ಚೈನಾಮನ್’ ಸ್ಪಿನ್ನರ್ ಆಗಿ ಗಮನ ಸೆಳೆದಿದ್ದರು. ರಾಜ್ಯ ತಂಡ 1973-74ರಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದಾಗ, ವಿಜಯಕೃಷ್ಣ ತಂಡದ ಸದಸ್ಯರಾಗಿದ್ದರು. ಭಾರತ ತಂಡಕ್ಕೆ ಆಡುವ ಅರ್ಹತೆ ಇದ್ದರೂ, ಅವರಿಗೆ ಅವಕಾಶ ಸಿಗದೆ ಇದ್ದಿದ್ದು ದುರದೃಷ್ಟಕರ ಸಂಗತಿ.
ಗಣ್ಯರ ಸಂತಾಪ: ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ಎಂಎಲ್ಸಿ ಪ್ರಕಾಶ್ ರಾಥೋಡ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.