ಭಾರತ ಟಿ20 ವಿಶ್ವಕಪ್‌ ಗೆದ್ದು 24 ಗಂಟೆ ಕಳೆದರೂ ನಿಲ್ಲದ ಸಂಭ್ರಮ..!

By Kannadaprabha NewsFirst Published Jul 1, 2024, 9:11 AM IST
Highlights

ಭಾರತ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ದೇಶದ ಪ್ರಮುಖ ನಗರಗಳಾದ ಹೈದರಾಬಾದ್‌, ಕೋಲ್ಕತಾ, ನವದೆಹಲಿ, ಮುಂಬೈ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲೂ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

ನವದೆಹಲಿ: ಬಾರ್ಬಡೊಸ್‌ನಲ್ಲಿ ಭಾರತ ಟಿ20 ವಿಶ್ವಕಪ್‌ ಗೆಲ್ಲುವುದರೊಂದಿಗೆ ಆರಂಭಗೊಂಡ ಸಂಭ್ರಮಾಚರಣೆ 24 ಗಂಟೆಗಳು ಕಳೆದರೂ ನಿಂತಿಲ್ಲ. ಭಾರತದಾದ್ಯಂತ ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ಮಿಂದೇಳುತ್ತಿದ್ದಾರೆ.

ಭಾರತ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ದೇಶದ ಪ್ರಮುಖ ನಗರಗಳಾದ ಹೈದರಾಬಾದ್‌, ಕೋಲ್ಕತಾ, ನವದೆಹಲಿ, ಮುಂಬೈ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲೂ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿ ಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಗಲ್ಲಿ ಗಲ್ಲಿಗಳಲ್ಲಿ ಬೈಕ್‌ ರ್‍ಯಾಲಿ ನಡೆಸಿ, ಭಾರತದ ಧ್ವಜವನ್ನು ಹಾರಾಡಿಸುತ್ತ ಸಂಭ್ರಮಿಸಿದ್ದಾರೆ. ಮಾಲ್‌ಗಳು, ಮೆಟ್ರೋ ರೈಲುಗಳಲ್ಲಿಯೂ ಅಭಿಮಾನಿಗಳು ಸಂಭ್ರಮಿಸಿದ ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಗಿಫ್ಟ್, 125 ಕೋಟಿ ರೂ ಬಹುಮಾನ ಮೊತ್ತ ಘೋಷಿಸಿದ ಜಯ್ ಶಾ!

ವಿದೇಶಗಳಲ್ಲೂ ಸಂಭ್ರಮ: ಅಮೆರಿಕ, ಇಂಗ್ಲೆಂಡ್‌, ಕೆನಡಾ ಸೇರಿದಂತೆ ವಿದೇಶಗಳಲ್ಲೂ ಭಾರತೀಯ ಅಭಿಮಾನಿಗಳು ವಿಶ್ವಕಪ್‌ ಗೆಲುವಿಗೆ ಸಂಭ್ರಮಿಸಿದರು. ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಸೇರಿ ಪ್ರಮುಖ ಸ್ಥಗಳಲ್ಲಿ ದೊಡ್ಡ ಪರದೆ ಮೇಲೆ ಸಾವಿರಾರು ಅಭಿಮಾನಿ ಪಂದ್ಯ ವೀಕ್ಷಿಸಿ, ಭಾರತ ಗೆಲ್ಲುತ್ತಿದ್ದಂತೆ ಖುಷಿಯ ಅಲೆಯಲ್ಲಿ ತೇಲಿದರು.

ವಿಶ್ವ ಚಾಂಪಿಯನ್‌ ಭಾರತಕ್ಕೆ ಅಭಿನಂದನೆಗಳ ಮಹಾಪೂರ

ನವದೆಹಲಿ: ಟಿ20 ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಲಿ-ಮಾಜಿ ಕ್ರಿಕೆಟಿಗರು, ಜಾಗತಿಕ ಕ್ರೀಡಾ ತಾರೆಯರು, ಬಾಲಿವುಡ್‌ ಸೆಲೆಬ್ರಿಟಿಗಳು ಟೀಂ ಇಂಡಿಯಾ ಆಟಗಾರರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಟಿ20 ವಿಶ್ವಕಪ್ 2024: ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಭವಿಷ್ಯ ನಿಜವಾಯಿತಾ?

2007ರ ಟಿ20 ವಿಶ್ವಕಪ್‌ ವಿಜೇತ ಭಾರತದ ನಾಯಕ ಎಂ.ಎಸ್‌.ಧೋನಿ, ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ಅನಿಲ್‌ ಕುಂಬ್ಳೆ, ಸೌರವ್‌ ಗಂಗೂಲಿ, ಯುವರಾಜ್‌ ಸಿಂಗ್‌, ಹರ್ಭಜನ್‌ ಸಿಂಗ್‌ ಭಾರತದ ಸಾಧನೆಯನ್ನು ಕೊಂಡಾಡಿದ್ದಾರೆ. ಬಾಲಿವುಡ್‌ ತಾರೆಗಳಾದ ಅನುಷ್ಕಾ ಶರ್ಮಾ, ಅಮಿತಾಬ್‌ ಬಚ್ಚನ್‌, ಅಮೀರ್‌ ಖಾನ್‌, ರಣ್‌ವೀರ್‌ ಸಿಂಗ್‌, ಅಜಯ್‌ ದೇವಗನ್‌, ವಿವೇಕ್‌ ಓಬೆರಾಯ್‌, ಆಲಿಯಾ ಭಟ್‌, ಅನಿಲ್‌ ಕಪೂರ್‌ ಕೂಡಾ ಟೀಂ ಇಂಡಿಯಾ ಆಟಗಾರರ ಸಾಧನೆಯನ್ನು ಮೆಚ್ಚಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಇನ್ನು, ವಿಶ್ವದ ದಿಗ್ಗಜ ಕ್ರಿಕೆಟಿಗರು, ರಾಜಕೀಯ ನಾಯಕರು ಕೂಡಾ ಭಾರತದ ಟ್ರೋಫಿ ಗೆಲುವಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
 

click me!