
ನವದೆಹಲಿ (ಡಿ.29): ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ(Virat Kohli) ಹಾಗೂ ಕೋಚ್ ಅನಿಲ್ ಕುಂಬ್ಳೆ (Anil Kumble) ನಡುವಿನ ವಿವಾದ ಬಹುತೇಕ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ನೆನಪಿದೆ. ನಾಯಕ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಕೇವಲ 7 ತಿಂಗಳ ಅವಧಿಯಲ್ಲಿ ರಾಷ್ಟ್ರೀಯ ತಂಡದಲ್ಲಿ ತಮ್ಮ ಕೋಚ್ ಸ್ಥಾನವನ್ನು ತೊರೆದಿದ್ದರು. ಆದರೆ, ತೀರಾ ಆಪ್ತ ವ್ಯಕ್ತಿಗಳಿಗೆ ಮಾತ್ರವೇ ಈ ಭಿನ್ನಾಭಿಪ್ರಾಯದ ಹಿಂದಿನ ಅಸಲಿ ಕಾರಣ ಗೊತ್ತಿದೆ. ತಂಡದಲ್ಲಿ ಒಬ್ಬ ಆಟಗಾರನ ಆಯ್ಕೆಯ ಕಾರಣದಿಂದಾಗಿ ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಕೊನೆಗೆ ಇದು ಕುಂಬ್ಳೆ ನಿರ್ಗಮನದೊಂದಿಗೆ ಮುಕ್ತಾಯ ಕಂಡಿತ್ತು.
ಕುಲದೀಪ್ ಯಾದವ್ ರನ್ನು (Kuldeep Yadav) ತಂಡಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವೆ ಮನಸ್ತಾಪ ಏರ್ಪಟ್ಟಿತ್ತು. 2017ರಲ್ಲಿ ನಡೆದ ಈ ಘಟನೆಯಿಂದಾಗಿ ಟೀಂ ಇಂಡಿಯಾ ಡ್ರೆಸಿಂಗ್ ರೂಮ್ ಇಬ್ಬಾಗವಾಗಿತ್ತು ಎನ್ನಲಾಗಿದೆ. ಅಂದು ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ (Australia) ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ (Test Series) ಆಡಿತ್ತು. ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಗಾಯಾಳುವಾಗಿದ್ದರು. ಈ ವೇಳೆ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅವರ ಬದಲಿ ಆಟಗಾರನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರದಲ್ಲಿ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಈ ವೇಳೆ ಟೀಮ್ ಮ್ಯಾನೇಜ್ ಮೆಂಟ್ ಹಾಗೂ ಕೋಚ್ ಕುಂಬ್ಳೆ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಇದನ್ನು ನಾಯಕ ವಿರಾಟ್ ಕೊಹ್ಲಿ ಒಪ್ಪಿರಲಿಲ್ಲ ಎಂದು ವರದಿಯಾಗಿದೆ.
ಈ ಪಂದ್ಯದ ಬಗ್ಗೆ ಇನ್ನಷ್ಟು ಮಾತನಾಡುವುದಾದರೆ, ಪಂದ್ಯದಲ್ಲಿ ಅನಿಲ್ ಕುಂಬ್ಳೆ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಸ್ಥಾನ ನೀಡಿದ್ದರೆ, ವಿರಾಟ್ ಕೊಹ್ಲಿ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾರನ್ನು (Amit Mishra) ಆಡಿಸಬೇಕು ಎನ್ನುವ ಮನಸ್ಸು ಮಾಡಿದ್ದರು. ಆ ಪಂದ್ಯದಲ್ಲಿ ಅಮಿತ್ ಮಿಶ್ರಾ ಅವರ ಅನುಭವ ಅಗತ್ಯವಿದೆ ಎಂದು ಅವರು ನಿರ್ಧಾರ ಮಾಡಿದ್ದರು. ಇನ್ನೊಂದೆಡೆ ಅನಿಲ್ ಕುಂಬ್ಳೆ, ಕುಲದೀಪ್ ಯಾದವ್ ಗೆ ತಂಡದಲ್ಲಿ ಸ್ಥಾನ ನೀಡಿರುವ ಕುರಿತಾಗಿ ಕೊಹ್ಲಿಗೆ ಯಾವುದೇ ಮಾಹಿತಿ ಇರದೇ ಇದ್ದಿದ್ದೂ ಬೇಸರ ಮೂಡಿಸಿತ್ತು. ಇದರಿಂದ ಸಿಟ್ಟಾಗಿದ್ದ ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ಜೊತೆ ಮಾತಿನ ಚಕಮಕಿ ನಡೆಸಿದ್ದರು ಎಂದು ವರದಿಯಾಗಿದೆ. ತಂಡದಲ್ಲಿ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಹಂತದಲ್ಲೇ ಅನಿಲ್ ಕುಂಬ್ಳೆ ತಮ್ಮ ಸ್ಥಾನವನ್ನು ತೊರೆಯುವ ನಿರ್ಧಾರ ಮಾಡಿದ್ದರು.
Cricket Schedule 2022: ಮುಂದಿನ ವರ್ಷ ಟೀಂ ಇಂಡಿಯಾಗೆ ಇರೋ ಸವಾಲುಗಳೇನು?
ಧೋನಿ ಕುರಿತಾಗಿಯೂ ಮನಸ್ತಾಪ ಉಂಟಾಗಿತ್ತು: ಕುಲದೀಪ್ ಯಾದವ್ ವಿಚಾರವಲ್ಲದೆ ಎಂಎಸ್ ಧೋನಿ (MS Dhoni) ವಿಚಾರದ ಕುರಿತಾಗಿಯೂ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಮಾಧ್ಯಮಗಳಲ್ಲಿ ಈಗಾಗಲೇ ಬಂದಿರುವ ವರದಿಗಳನ್ನು ಅವಲೋಕನ ಮಾಡುವುದಾದರೆ, ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದ ಎಂಎಸ್ ಧೋನಿಗೆ ಬಿಸಿಸಿಐ (BCCI) ಎ ಗ್ರೇಡ್ ಒಪ್ಪಂದ ನೀಡಿದ ವಿಚಾರದಲ್ಲಿ ಕೊಹ್ಲಿ ಅಸಮಾಧಾನ ಹೊಂದಿದ್ದರೆ, ಕುಂಬ್ಳೆ ಅದರ ಪರವಾಗಿದ್ದರು. ಟೆಸ್ಟ್ ಸೇರಿದಂತೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಆಡುತ್ತಿದ್ದವರನ್ನು ಮಾತ್ರವೇ ಎ ಗ್ರೇಡ್ ಗುತ್ತಿಗೆಗೆ ಪರಿಗಣಿಸಬೇಕು ಎಂದು ಕೊಹ್ಲಿ ವಾದವಾಗಿದ್ದರೆ, ಕುಂಬ್ಳೆ ಭಿನ್ನ ದೃಷ್ಟಿಕೋನ ಹೊಂದಿದ್ದರು. ಅದರೊಂದಿಗೆ ಡ್ರೆಸಿಂಗ್ ರೂಮ್ ನಲ್ಲಿ ಕುಂಬ್ಳೆ ಅತಿಯಾದ ಶಿಸ್ತಿನ ವರ್ತನೆ ತೋರುತ್ತಿದ್ದದ್ದು ಕೊಹ್ಲಿಗೆ ಇರುಸುಮುರುಸು ಉಂಟುಮಾಡಿತ್ತು ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.