ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡ ಆಯ್ಕೆ ಮಾಡಿದ ಡಿಕೆ: ಅವಕಾಶ ಕೊಟ್ಟ ಧೋನಿ, ಗಂಗೂಲಿಗೆ ಇಲ್ಲ ಸ್ಥಾನ..!

By Naveen KodaseFirst Published Aug 19, 2024, 2:06 PM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಇದೀಗ ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೀವೇ ನೋಡಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ  ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಕ್ರಿಕೆಟ್‌ ವೆಬ್‌ಸೈಟ್‌ವೊಂದರಲ್ಲಿ ತಮಿಳುನಾಡು ಮೂಲದ ಮಾಜಿ ಕ್ರಿಕೆಟಿಗ ಡಿಕೆ, ಸಾರ್ವಕಾಲಿಕ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಇದರ ಹೊರತಾಗಿಯೂ Cricbuzz ವೆಬ್‌ಸೈಟ್ "ಡಿಕೆ ತಾವಾಡಿದ ಆಟಗಾರರನ್ನೊಳಗೊಂಡ ಶ್ರೇಷ್ಠ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ" ಎಂದು ತಿಳಿಸಿದೆ.

ದಿನೇಶ್ ಕಾರ್ತಿಕ್ ತಾವಾಡಿದ ಎಲ್ಲಾ ಆಟಗಾರರನ್ನು ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡಲು ಸಾಧ್ಯವಾಗಿಲ್ಲ. ಆದರೆ ತಾವು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ನೆರವಾಗಿದ್ದ ಮಾಜಿ ನಾಯಕರಾದ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಅವರಂತಹ ದಿಗ್ಗಜ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡದೇ ಇದ್ದಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. 

Latest Videos

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ನೇಥನ್ ಲಯನ್..!

ದಿನೇಶ್ ಕಾರ್ತಿಕ್ 2004ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ದಿನೇಶ್ ಕಾರ್ತಿಕ್, ಆಗ ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್, ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿ ಅವರಂತಹ ದಿಗ್ಗಜ ಆಟಗಾರರ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದರು. ಆದರೆ ಡಿಕೆ ತಮ್ಮ ಕನಸಿನ ತಂಡದಲ್ಲಿ ಸೌರವ್ ಗಂಗೂಲಿಗೆ ಸ್ಥಾನ ನೀಡಿಲ್ಲ. ಅದೇ ರೀತಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಧೋನಿ ನಾಯಕತ್ವದಲ್ಲಿ ಡಿಕೆ ಪಾದಾರ್ಪಣೆ ಮಾಡಿದ್ದರು. ಹೀಗಿದ್ದೂ ತಮಗೆ ಅವಕಾಶ ಕೊಟ್ಟ ಮಹಿಗೂ ಡಿಕೆ ಅವಕಾಶ ಕೊಟ್ಟಿಲ್ಲ.

ತಮ್ಮ ಕನಸಿನ ತಂಡದ ಬಗ್ಗೆ ಮಾತನಾಡಿರುವ ಡಿಕೆ, "ನನ್ನ ಕನಸಿನ ತಂಡದಲ್ಲಿ ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್ ಹಾಗೂ ರೋಹಿತ್ ಶರ್ಮಾ ಇರುತ್ತಾರೆ. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಇವರಿಬ್ಬರೂ ಉತ್ತಮ ಓಪನ್ನರ್ ಆಗಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್, ನಾಲ್ಕನೇ ಕ್ರಮಾಂಕದಲ್ಲಿ ಸಚಿನ್ ತೆಂಡುಲ್ಕರ್ ಹಾಗೂ 5ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡುತ್ತೇನೆ" ಎಂದು ಡಿಕೆ ಹೇಳಿದ್ದಾರೆ.

ತಂದೆಯಂತೆ ಮಗ; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸಿದ ಸಮಿತ್ ದ್ರಾವಿಡ್‌..! ವಿಡಿಯೋ ವೈರಲ್

"ಇನ್ನು ಆರನೇ ಕ್ರಮಾಂಕವನ್ನು ಆಯ್ಕೆ ಮಾಡುವುದು ತುಂಬಾ ಕಷ್ಟವೆನಿಸುತ್ತಿದೆ. ಆರನೇ ಕ್ರಮಾಂಕದಲ್ಲಿ ಆಲ್ರೌಂಡರ್‌ ಯುವರಾಜ್ ಸಿಂಗ್ ಹಾಗೂ ಏಳನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾಗೆ ಸ್ಥಾನ ನೀಡುತ್ತಿದ್ದೇನೆ. ಇನ್ನು ಎಂಟನೇ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್, ಒಂಬತ್ತನೇ ಕ್ರಮಾಂಕದಲ್ಲಿ ಅನಿಲ್ ಕುಂಬ್ಳೆ, 10ನೇ ಕ್ರಮಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ 11ನೇ ಕ್ರಮಾಂಕದಲ್ಲಿ ಜಹೀರ್ ಖಾನ್‌ಗೆ ಸ್ಥಾನ ನೀಡುತ್ತೇನೆ" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಇನ್ನು  ನನ್ನ ತಂಡದ 12ನೇ ಆಟಗಾರನಾಗಿ ಹರ್ಭಜನ್ ಸಿಂಗ್‌ಗೆ ಸ್ಥಾನ ನೀಡುತ್ತೇನೆ. ಇನ್ನು ಈ ಪಟ್ಟಿಯಲ್ಲಿ ನಾನು ಕೆಲವು ಹೆಸರುಗಳನ್ನು ಮಿಸ್ ಮಾಡಿಕೊಂಡಿದ್ದೇನೆ. ಎಲ್ಲರನ್ನೂ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಸಾಕಷ್ಟು ಆಲೋಚನೆ ಮಾಡಿ ಈ ತಂಡವನ್ನು ಆಯ್ಕೆ ಮಾಡಿದ್ದೇನೆ" ಎಂದು ಡಿಕೆ ಹೇಳಿದ್ದಾರೆ.

39 ವರ್ಷದ ದಿನೇಶ್ ಕಾರ್ತಿಕ್, ಕಳೆದ ಜೂನ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆದರೆ ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನೀಡಿದ್ದ ನಿವೃತ್ತಿಯನ್ನು ವಾಪಾಸ್ ಪಡೆದಿದ್ದು, ಮೂರನೇ ಆವೃತ್ತಿಯ SA20 ಲೀಗ್ ಟೂರ್ನಿಯನ್ನು ಆಡಲು ಮುಂದಾಗಿದ್ದಾರೆ. ಮುಂಬರುವ SA20 ಲೀಗ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್, ಪಾರ್ಲ್‌ ರಾಯಲ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

click me!