
ಕ್ರಿಕೆಟ್ ಜಗತ್ತಿನಿಂದ ಒಂದು ವಿಚಿತ್ರ ಮತ್ತು ಅಷ್ಟೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮುಂಬೈ ಕ್ರಿಕೆಟ್ ಸಂಸ್ಥೆಯ (MCA) ಕ್ಯಾಂಟೀನ್ನಲ್ಲಿನ ಅಶುಚಿತ್ವದ ಬಗ್ಗೆ ಕೇಳಿ ಬಾಂಬೆ ಹೈಕೋರ್ಟ್ ಗರಂ ಆಗಿದೆ. ಅಡುಗೆ ಮನೆಯಲ್ಲಿ ಜಿರಳೆ ಮತ್ತು ನೊಣಗಳು ತುಂಬಿರುವುದನ್ನು ಕಂಡು ನ್ಯಾಯಾಲಯವು ಕ್ರಿಕೆಟಿಗರು ತಾವು 'ಮಾಂಸಾಹಾರಿ ಚಹಾ' ಸೇವಿಸುತ್ತಿದ್ದೇವೆ ಎಂದು ತಿಳಿದೇ ಕುಡಿಯುತ್ತಿದ್ದರೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ (BKC) ಮುಂಬೈ ಕ್ರಿಕೆಟ್ ಸಂಸ್ಥೆಯ ಐದು ರೆಸ್ಟೋರೆಂಟ್ಗಳ ಪರವಾನಗಿಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇತ್ತೀಚೆಗೆ ಅಮಾನತುಗೊಳಿಸಿತ್ತು. ಅಡುಗೆ ಮನೆಯಲ್ಲಿ ತೀವ್ರ ಅಶುಚಿತ್ವ, ಜಿರಳೆಗಳ ಕಾಟ ಮತ್ತು ಜಾರುವ ನೆಲ ಇರುವುದನ್ನು ಎಫ್ಡಿಎ ಅಧಿಕಾರಿಗಳು ಪತ್ತೆಹಚ್ಚಿದ್ದರು. ಇದನ್ನು ಪ್ರಶ್ನಿಸಿ ಎಂಸಿಎ ಹೈಕೋರ್ಟ್ ಮೆಟ್ಟಿಲೇರಿತ್ತು.
ವಿಚಾರಣೆಯ ವೇಳೆ ಎಂಸಿಎ ಪರ ವಕೀಲರು, ರೆಸ್ಟೋರೆಂಟ್ ಬಂದ್ ಆಗಿರುವುದರಿಂದ ನಾವು ಕ್ರಿಕೆಟಿಗರಿಗೆ ಕನಿಷ್ಠ ಚಹಾ ಕೂಡ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಅವರ ಪೀಠವು, ಎಫ್ಡಿಎ ವರದಿಯ ಪ್ರಕಾರ ಅಲ್ಲಿ ಜಿರಳೆ ಮತ್ತು ನೊಣಗಳು ತುಂಬಿವೆ. ಹಾಗಿರುವಾಗ ಕ್ರಿಕೆಟಿಗರಿಗೆ ತಾವು 'ಮಾಂಸಾಹಾರಿ ಚಹಾ' (Non-Veg Tea) ಸೇವಿಸುತ್ತಿದ್ದೇವೆ ಎಂಬುದು ತಿಳಿದಿತ್ತೇ? ಎಂದು ಹಾಸ್ಯದ ಧಾಟಿಯಲ್ಲೇ ಚಾಟಿ ಬೀಸಿತು.
ಅಡುಗೆ ಮನೆಯಲ್ಲಿ ನೂರಾರು ಜಿರಳೆಗಳು ಮತ್ತು ನೊಣಗಳು ತುಂಬಿದ್ದವು. ಅಡುಗೆ ಮನೆಯ ನೆಲವು ತೀವ್ರ ಕೊಳಕಿನಿಂದ ಕೂಡಿದ್ದು, ಜಾರುವಂತಿತ್ತು. ಆಹಾರ ಸುರಕ್ಷತೆಯ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.
ನ್ಯಾಯಾಲಯವು ಎಂಸಿಎಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗುರುವಾರ ಎಫ್ಡಿಎ ಅಧಿಕಾರಿಗಳು ಮರು ತಪಾಸಣೆ ನಡೆಸುವ ಮೊದಲು ಕ್ಯಾಂಟೀನ್ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಂತೆ ಸೂಚಿಸಿದೆ. ಶುಚಿತ್ವದ ಮಾನದಂಡಗಳನ್ನು ಉಲ್ಲಂಘಿಸಿದರೆ ಪರವಾನಗಿ ರದ್ದುಗೊಳಿಸುವ ಅಧಿಕಾರ ಎಫ್ಡಿಎಗೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೈಕೋರ್ಟ್ ನೀಡಿದ ಈ 'ಮಾಂಸಾಹಾರಿ ಚಹಾ' ಹೇಳಿಕೆಯು ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಎಂಸಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.