
ಮುಂಬೈ(ಜೂ.01): ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಕಳೆದೊಂದ ತಿಂಗಳಿನಿಂದ ಕುಸ್ತಿಪಟುಗಳು, ಬ್ರಿಜ್ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್, ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರವು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.
ಮುಂಬೈಗೆ ಭೇಟಿ ನೀಡಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅನುರಾಗ್ ಠಾಕೂರ್, ಕುಸ್ತಿಪಟುಗಳ ಬೇಡಿಕೆಯಂತೆಯೇ ಸರ್ಕಾರವು ಆರೋಪಿಯ ವಿರುದ್ದ ತನಿಖೆ ನಡೆಸಲು ಕಮಿಟಿಯೊಂದನ್ನು ರಚಿಸಿದೆ. ಸದ್ಯ ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ.
ನವದೆಹಲಿಯ ಜಂತರ್ ಮಂತರ್ನಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್, ಭಜರಂಗ್ ಪೂನಿಯಾ, ಸಂಗೀತಾ ಪೋಗಾಟ್ ಸೇರದಿಂತೆ ಹಲವಾರು ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ಕುಸ್ತಿಪಟುಗಳು, ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ಭೂಷಣ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ಬ್ರಿಜ್ಭೂಷಣ್ ಬಂಧಿಸಲು ವಿಫಲವಾದ ಬೆನ್ನಲ್ಲೇ ಕುಸ್ತಿಪಟುಗಳು ತಾವು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಯಿಸಿದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವ ಬೆದರಿಕೆಯನ್ನು ಒಡ್ಡಿದ್ದರು.
Wrestlers Protest: ಬ್ರಿಜ್ಭೂಷಣ್ಗೆ ದೆಹಲಿ ಪೊಲೀಸ್ ಕ್ಲೀನ್ಚಿಟ್?
"ಸರ್ಕಾರವು ಕುಸ್ತಿಪಟುಗಳ ಪ್ರತಿಭಟನೆ ವಿಚಾರವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸುತ್ತಿದೆ. ಕುಸ್ತಿಪಟುಗಳ ಆರೋಪಿಯ ವಿರುದ್ದ ಎಫ್ಐಆರ್ ದಾಖಲಿಸಬೇಕು ಎಂದು ಕೋರಿದ್ದರು, ಅದರಂತೆ ಡೆಲ್ಲಿ ಪೊಲೀಸರು ಎಫ್ಐಆರ್ ಕೂಡಾ ದಾಖಲಿಸಿದ್ದಾರೆ" ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಸಂಪರ್ಕಿಸಲು ಕುಸ್ತಿಪಟುಗಳಿಗೆ ಸುಪ್ರೀಂ ಕೋರ್ಟ್ ಕೂಡಾ ನಿರ್ದೇಶನ ಮಾಡಿದೆ ಎಂದು ಅವರು ಹೇಳಿದ್ದಾರೆ.
ಬ್ರಿಜ್ಭೂಷಣ್ ವಿರುದ್ಧ 4 ತಿಂಗಳ ಹಿಂದೆಯೇ ಗಂಭೀರ ಆರೋಪಗಳನ್ನು ಹೊರಿಸಿದ್ದ ಕುಸ್ತಿಪಟುಗಳು, ಏ.23ರಿಂದ ಜಂತರ್ಮಂತರ್ನಲ್ಲಿ ಧರಣಿ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದರು. ಈ ನಡುವೆ ತಿಂಗಳ ಹಿಂದೆಯೇ ಬ್ರಿಜ್ಭೂಷಣ್ ವಿರುದ್ಧ ಪೋಕ್ಸೋ ಸೇರಿದಂತೆ 2 ಎಫ್ಐಆರ್ ದಾಖಲಿಸಿ ದೆಹಲಿ ಪೊಲೀಸರು ವಿಚಾರಣೆ ಆರಂಭಿಸಿದ್ದರು. ದೂರು ನೀಡಿದ್ದ ಅಪ್ರಾಪ್ತೆಯರ ಹೇಳಿಕೆಗಳನ್ನೂ ದಾಖಲಿಸಲಾಗಿತ್ತು.
ದುಡುಕಬೇಡಿ, ಕಾಯಿರಿ: ಕ್ರೀಡಾ ಸಚಿವ ಠಾಕೂರ್
ಪ್ರಕರಣದ ಬಗ್ಗೆ ಬುಧವಾರ ಮೌನ ಮುರಿದಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ‘ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದುವರೆಗೂ ಕ್ರೀಡೆ ಹಾಗೂ ಕ್ರೀಡಾಳುಗಳಿಗೆ ತೊಂದರೆಯಾಗುವ ಯಾವುದೇ ನಿರ್ಧಾರ ಕೈಗೊಳ್ಳಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ. ‘ಪೊಲೀಸರ ತನಿಖೆಯಲ್ಲಿ ನಂಬಿಕೆ ಇಡಿ, ನಾವೂ ನಿಮ್ಮ ಜೊತೆಗಿದ್ದೇವೆ. ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ನೀಡುತ್ತೇವೆ. ಕ್ರೀಡೆಗಾಗಿ ಸರ್ಕಾರ ಸಾಕಷ್ಟುಶ್ರಮ ವಹಿಸುತ್ತಿದೆ’ ಎಂದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.