
ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ಆಟಗಾರರ ಹಾಗೂ ಪಂದ್ಯಾಧಿಕಾರಿಗಳ ಪ್ರದೇಶದಲ್ಲಿ (PMOA) ನಿಷೇಧಿತ ಮೊಬೈಲ್ ಫೋನ್ ಬಳಸಿ, ತನ್ನ ಗೆಳತಿಗೆ ಸಂದೇಶ ಕಳುಹಿಸುತ್ತಿದ್ದ ತಮಿಳುನಾಡಿನ ೨೬ ವರ್ಷದ ಯುವ ಆಲ್ರೌಂಡರ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಆರಂಭದಲ್ಲಿ ಈ ಉಲ್ಲಂಘನೆಗಾಗಿ ಆಟಗಾರನ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಗುವುದು ಎಂಬ ವದಂತಿ ದಟ್ಟವಾಗಿತ್ತಾದರೂ, ತನಿಖೆಯ ನಂತರ ಪ್ರಕರಣವು ಭ್ರಷ್ಟಾಚಾರಕ್ಕೆ ಸಂಬಂಧಿಸಿಲ್ಲ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಬಿಸಿಸಿಐ ದಂಡದ ಶಿಕ್ಷೆಗೆ ಸೀಮಿತಗೊಳಿಸಿದೆ.
ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ತಮಿಳುನಾಡು ತಂಡದ ಪರವಾಗಿ ಎರಡು ಭರ್ಜರಿ ಅರ್ಧಶತಕಗಳನ್ನು ಬಾರಿಸಿ ಗಮನಸೆಳೆದಿದ್ದ ಈ ೨೬ ವರ್ಷದ ಎಡಗೈ ಬೌಲಿಂಗ್ ಆಲ್ರೌಂಡರ್, ಟಿಎನ್ಪಿಎಲ್ ಪಂದ್ಯವೊಂದರ ಸಮಯದಲ್ಲಿ ಪಂದ್ಯದ ನಿರ್ಬಂಧಿತ ಪ್ರದೇಶದಲ್ಲಿದ್ದುಕೊಂಡೇ ಮೊಬೈಲ್ನಲ್ಲಿ ಆಕ್ಟಿವ್ ಆಗಿದ್ದರು. ತನಿಖೆ ಇನ್ನೂ ಅಂತಿಮ ಹಂತದಲ್ಲಿರುವುದರಿಂದ ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (TNCA) ಆಟಗಾರನ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಬಿಸಿಸಿಐ ಮತ್ತು ಐಸಿಸಿ ನಿಯಮಾವಳಿಗಳ ಪ್ರಕಾರ, ಯಾವುದೇ ಅಧಿಕೃತ ಕ್ರಿಕೆಟ್ ಪಂದ್ಯ ಪ್ರಾರಂಭವಾಗುವ ಮೊದಲು ಆಟಗಾರರು, ತರಬೇತುದಾರರು ಮತ್ತು ಸಪೋರ್ಟ್ ಸ್ಟಾಫ್ ತಮ್ಮ ಸಂವಹನ ಸಾಧನಗಳನ್ನು (ಸ್ಮಾರ್ಟ್ಫೋನ್, ಸ್ಮಾರ್ಟ್ವಾಚ್ ಇತ್ಯಾದಿ) ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಪಂದ್ಯ ಮುಗಿಯುವವರೆಗೆ ಡ್ರೆಸ್ಸಿಂಗ್ ರೂಮ್, ಡಗೌಟ್ ಹಾಗೂ ಮೈದಾನವನ್ನು ಒಳಗೊಂಡಿರುವ PMOA (Players and Match Officials Area) ಪ್ರದೇಶದಲ್ಲಿ ಯಾವುದೇ ರೀತಿಯ ಡಿಜಿಟಲ್ ಸಂವಹನ ಸಾಧನಗಳನ್ನು ಬಳಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದರೆ, ಈ ಯುವ ಆಟಗಾರ ನಿಯಮವನ್ನು ಗಾಳಿಗೆ ತೂರಿ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ತನ್ನ ಗೆಳತಿಯೊಂದಿಗೆ ಚಾಟಿಂಗ್ನಲ್ಲಿ ತೊಡಗಿಸಿಕೊಂಡು ಸಿಕ್ಕಿಬಿದ್ದಿದ್ದಾರೆ. TNCA ಅಧಿಕಾರಿಯೊಬ್ಬರು ನೀಡಿರುವ ವಿವರಣೆಯ ಪ್ರಕಾರ, "ಈ ಘಟನೆಯಲ್ಲಿ ಯಾವುದೇ ರೀತಿಯ ಮ್ಯಾಚ್ ಫಿಕ್ಸಿಂಗ್ ಅಥವಾ ಭ್ರಷ್ಟಾಚಾರದ ಉದ್ದೇಶ ಕಂಡುಬಂದಿಲ್ಲ. ಆಟಗಾರ ಕೇವಲ ತನ್ನ ವೈಯಕ್ತಿಕ ಸಂವಹನಕ್ಕಾಗಿ ಫೋನ್ ಬಳಸಿದ್ದನು. ಆದಾಗ್ಯೂ, ಇದು ಕ್ರೀಡಾ ಶಿಸ್ತು ಮತ್ತು ಭದ್ರತಾ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ."
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ನಲ್ಲಿ ರಾಜಸ್ಥಾನ ರಾಯಲ್ಸ್ ಶಿಬಿರದ ತರಬೇತುದಾರ ರೋಮಿ ಭಿಂದರ್ ಫೋನ್ ಬಳಸಿ ಕೋಲಾಹಲ ಸೃಷ್ಟಿಸಿದ್ದ ಘಟನೆ ಇನ್ನೂ ಹಸಿರಾಗಿರುವಾಗಲೇ, ಈಗ ಟಿಎನ್ಪಿಎಲ್ನಲ್ಲಿಯೂ ಅಂತಹದ್ದೇ ಉಲ್ಲಂಘನೆ ನಡೆದಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಲೈವ್ ಪಂದ್ಯದ ವೇಳೆ ಆಟಗಾರರು ಫೋನ್ ಬಳಸುವುದರಿಂದ ಫಿಕ್ಸಿಂಗ್ ಬುಕ್ಕಿಗಳು ಆಟಗಾರರನ್ನು ಸಂಪರ್ಕಿಸುವ ಅಪಾಯ ಹೆಚ್ಚಿರುತ್ತದೆ.
ಆರಂಭದಲ್ಲಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಸಿಸಿಐ, ಆಟಗಾರನಿಗೆ 2 ವರ್ಷಗಳ ಕಾಲ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿಷೇಧ ಹೇರಲು ಚಿಂತಿಸಿತ್ತು. ಆದರೆ, ಆಟಗಾರನ ಭವಿಷ್ಯ ಮತ್ತು ತನಿಖೆಯ ವರದಿಯನ್ನು ಆಧರಿಸಿ1 ಲಕ್ಷ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಈ ಘಟನೆಯ ನಂತರ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿಯೂ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಬಿಸಿಸಿಐ ಮುಂದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.